ಆ್ಯಪ್ನಗರ

ವರಮಹಾಲಕ್ಷ್ಮಿ: ಖರೀದಿಗೆ ಮುಗಿಬಿದ್ದ ಜನತೆ

ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮನೆಗಳಲ್ಲಿ ಭಕ್ತಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗುರುವಾರ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರು ಪೂಜಾ ಸಾಮಗ್ರಿ, ಹೂ-ಹಣ್ಣುಗಳನ್ನು ಮುಗಿಬಿದ್ದು ಖರೀದಿಸಿದರು.

Vijaya Karnataka 14 Aug 2019, 4:04 pm
ಕಲಬುರಗಿ :ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮನೆಗಳಲ್ಲಿ ಭಕ್ತಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗುರುವಾರ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರು ಪೂಜಾ ಸಾಮಗ್ರಿ, ಹೂ-ಹಣ್ಣುಗಳನ್ನು ಮುಗಿಬಿದ್ದು ಖರೀದಿಸಿದರು.
Vijaya Karnataka Web varamahalakshmi people buying flower fruit
ವರಮಹಾಲಕ್ಷ್ಮಿ: ಖರೀದಿಗೆ ಮುಗಿಬಿದ್ದ ಜನತೆ


ಹೊಸ ಬಸ್‌ ನಿಲ್ದಾಣದ ಎದುರು, ರಾಮನಗರ ಸರ್ಕಲ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನರು ಮುಗಿಬಿದ್ದು ಸಾಮಗ್ರಿ ಖರೀದಿ ಮಾಡುತ್ತಿರುವುದು ಕಂಡು ಬಂತು.

ಕಬ್ಬು, ಬಾಳೆದಿಂಡು, ಮಾವಿನ ಎಲೆಗಳ ಮಾರಾಟವೂ ಜೋರಾಗಿ ನಡೆದಿತ್ತು. ಬಾಳೆ ಹಣ್ಣು, ಸೇಬು, ದಾಳಿಂಬೆ, ಪೇರು, ಚಿಕ್ಕು, ಖರ್ಜೂರು ಸೇರಿದಂತೆ ನಾನಾ ಬಗೆಯ ಹಣ್ಣುಗಳ ಖರೀದಿ ಭರದಿಂದ ಸಾಗಿತ್ತು. ಹೆಣ್ಣು ಮಕ್ಕಳು ಖರೀದಿಯಲ್ಲಿ ತೊಡಗಿದ್ದರಿಂದ ಸೂಪರ್‌ ಮಾರ್ಕೆಟ್‌ ಫುಲ್‌ ರಶ್‌ ಆಗಿತ್ತು. ಸೇವಂತಿಗೆ, ಕಾಕಡ, ಗುಲಾಬಿ, ಬಿಳಿ ಮಲ್ಲಿಗೆ, ಕನಕಾಂಬರ, ಚೆಂಡು ಹೂ ಹಾಗೂ ಹಲವು ಬಗೆಯ ಹೂವಿನ ಮಾಲೆಯ ದರ ಕೇಳಿ ಮಾರುಗಟ್ಟಲೇ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಲೆ ಏರಿಕೆಯ ಬಿಸಿ

ವರ ಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನವಾದ ಕಾರಣ ಹಬ್ಬಕ್ಕೆ ಅಗತ್ಯವಿರುವ ಬಾಳೆಹಣ್ಣು ಹೂವು ತರಕಾರಿ ಹಣ್ಣುಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಒಂದು ಮಾರಿಗೆ ಕನಕಾಂಬರ ರೂ.50, ಮಲ್ಲಿಗೆ ಕಾಕಡ ಎರಡು ಮಾರಿಗೆ ರೂ.70, ಮಿಕ್ಸ್‌ ಹಣ್ಣು ರೂ.250, ಬಾಳೆಹಣ್ಣು ರೂ.50, ಬಾಳೆ ದಿಂಡು 50ಕ್ಕೆ ಎರಡು, ಎರಡು ಕಬ್ಬುಗೆ ರೂ.50 ತಲುಪುವ ಮೂಲಕ ಅತ್ಯಧಿಕ ಬೆಲೆಯನ್ನು ಪಡೆದಿದ್ದು, ಬೆಲೆಗಳು ಗಗನ ಮುಖಿಯಾದರೂ ಖರೀದಿಯಂತು ಜೋರಾಗಿತ್ತು.

ಸಂಭ್ರಮ ತರುವ ವರಮಹಾಲಕ್ಷ್ಮಿ

ಲೋಕ-ಕಲ್ಯಾಣಕ್ಕಾಗಿ ಪ್ರಾರ್ಥಿಸುವ ನಾರಿಯರು, ತಮ್ಮ ತಮ್ಮ ಮನೆಯ ಸಮೃದ್ಧಿ, ಸೌಭಾಗ್ಯಗಳನ್ನು ಲಕ್ಷ್ಮಿಯಲ್ಲಿ ಬೇಡದೆ ಇರಲಾರರು. ನೆಲ ಸಾರಿಸಿ, ಒರೆಸಿ, ಮಡಿಯಿಂದ ಸ್ಥಳ ಶುದ್ಧೀಕರಿಸಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಗುತ್ತದೆ. ಬಳಿಕ ವರಮಹಾಲಕ್ಷ್ಮಿ ಅನುಷ್ಠಾನಗೊಳಿಸುತ್ತೇವೆ. ಅದಕ್ಕೂ ಮುನ್ನವೇ ಸರಳ, ಹೃದಯ ಶ್ರೀಮಂತಿಕೆಯಿಂದ ಸಂಕಲ್ಪ ಮಾಡಿ, ಹೂವು, ಹಾರ, ಬೆಳ್ಳಿ-ಬಂಗಾರದ ಆಭರಣಗಳಿಂದ ಸಿಂಗರಿಸಲಾಗುತ್ತದೆ. ವರಮಹಾಲಕ್ಷ್ಮಿ ಇಷ್ಟಾರ್ಥ ಬೇಡಿಕೆಗಳನ್ನು ಈಡೇರಿಸದರೆ ಸಾಕು ಎಂದು ನಗರದ ಗೃಹಿಣಿ ಗಾಯತ್ರಿ ಬಿರಾದಾರ ತಿಳಿಸುತ್ತಾರೆ.


ಈ ಹಿಂದೆ ಯಾವ ಹಬ್ಬದಲ್ಲೂ ಹಣ್ಣುಗಳು, ತರಕಾರಿ ಹಾಗೂ ಹೂವಿನ ಬೆಲೆ ಇಷ್ಟು ದುಬಾರಿಯಾಗಿದ್ದನ್ನು ನಾವು ಕಂಡಿಲ್ಲ. ಆದರೂ ಹಬ್ಬ ಆಚರಿಸಬೇಕಾಗಿರುವುದರಿಂದ ಎಷ್ಟೆ ಬೆಲೆ ಏರಿಕೆಯಾದರೂ ಖರೀದಿಸಿ ಹಬ್ಬ ಆಚರಿಸಲಾಗುತ್ತಿದೆ.

-ಶಾಂತಾ ಬಿರಾದಾರ, ಕಲಬುರಗಿ


ಶುಕ್ರವಾರ ಹಬ್ಬವಾಗಿರುವ ಪ್ರಯುಕ್ತ ಮನೆ ಸ್ವಚ್ಛಗೊಳಿಸಲಾಗುವುದು. ಜೊತೆಗೆ, ಹಣ್ಣು ತರಕಾರಿ ಮತ್ತು ಪೂಜಾ ಸಾಮಗ್ರಿ ಖರೀದಿಸಲಾಗಿದೆ.

-ಗಾಯತ್ರಿ ಶಶಿಧರ ಬಿರಾದಾರ, ಗೃಹಿಣಿ

ವರಮಹಾಲಕ್ಷ್ಮಿ ಪೂಜೆಯಿಂದ ಸಂತೃಪ್ತಳಾಗಿ ತಾಯಿ ಲಕ್ಷ್ಮಿ ನಮ್ಮೆಲ್ಲರ ಬರ ಕಳೆದು, ಮನೆ-ಮನದಲ್ಲಿ ನೆಮ್ಮದಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇವೆ.

-ಮಾಯಾದೇವಿ ಪಾಟೀಲ್‌, ಕಲಬುರಗಿ


ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲೊಂದು ಮಹಾಲಕ್ಷ್ಮಿ ವ್ರತ. ಲಕ್ಷ್ಮಿಯನ್ನು ಪೂಜಿಸುವುದರಿಂದ ಬದುಕಿನಲ್ಲಿ ನೆಮ್ಮದಿ, ಐಶ್ವರ್ಯ ದಯಪಾಲಿಸುತ್ತಾಳೆ.

-ವಿದ್ಯಾಲಕ್ಷ್ಮಿ ಬಿ., ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ