ಆ್ಯಪ್ನಗರ

ಜಲಮಂಡಳಿ; ಹೈಕ ನೌಕರರಿಗೆ ಬಡ್ತಿಯಲ್ಲಿ ಅನ್ಯಾಯ

ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಬೇರೆ ಜಿಲ್ಲೆಗಳಲ್ಲಿ 371ಜೆ ಪ್ರಕಾರ ಸಿಗುವ ಶೇ.8ರಷ್ಟು ಮೀಸಲು ರಾಜ್ಯಾದ್ಯಂತ ಅನೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮೀಸಲಾತಿ ಸಿಗದಿದ್ದರಿಂದ ಬಡ್ತಿಯಿಂದ ವಂಚಿತರಾಗುವಂತಾಗಿದ್ದು, ಸರಿಪಡಿಸಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ.

Vijaya Karnataka 3 Dec 2018, 5:41 pm
ವೆಂಕಟೇಶ ಏಗನೂರು ಕಲಬುರಗಿ :ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಬೇರೆ ಜಿಲ್ಲೆಗಳಲ್ಲಿ 371ಜೆ ಪ್ರಕಾರ ಸಿಗುವ ಶೇ.8ರಷ್ಟು ಮೀಸಲು ರಾಜ್ಯಾದ್ಯಂತ ಅನೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮೀಸಲಾತಿ ಸಿಗದಿದ್ದರಿಂದ ಬಡ್ತಿಯಿಂದ ವಂಚಿತರಾಗುವಂತಾಗಿದ್ದು, ಸರಿಪಡಿಸಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ.
Vijaya Karnataka Web watercolor injustice in promotion to hikka employees
ಜಲಮಂಡಳಿ; ಹೈಕ ನೌಕರರಿಗೆ ಬಡ್ತಿಯಲ್ಲಿ ಅನ್ಯಾಯ


ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ, ಬೆಂಗಳೂರಿನ ಜಲ ಮಂಡಳಿಯಲ್ಲಿ ನಿರ್ಮಲೀಕರಣ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮಾನಪ್ಪ, ಭೀಮರಾಯ, ದಾಸೂಸಾಬ್‌ ಪಟೇಲ್‌ಸಾಬ್‌ ಗೋಡೆಕಾರ್‌, ಕಿರಿಯ ಎಂಜಿನಿಯರ್‌ ಆಗಿರುವ ವಿಜಯಕುಮಾರ, ಸರೋಜನಿ, ರಾಯಪ್ಪ, ಸಹಾಯಕ ಎಂಜಿನಿಯರ್‌ ಆಗಿರುವ ಮೊಹಮ್ಮದ್‌ ಮುದಸ್ಸಿರ್‌, ಪಿ.ಆರ್‌.ಪ್ರವೀಣ ಹಾಗೂ ಜಲಮಾಪನ ಓದುಗರಾಗಿರುವ ಬಿ.ಮಲ್ಲಿಕಾರ್ಜುನ ಗೌಡ ಸೇರಿ ಅನೇಕ ನೌಕರರು ಈ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ವೃಂದ ರಚಿಸಿ ಸುತ್ತೋಲೆ ಹೊರಡಿಸಿದಾಗ 45 ದಿನಗಳೊಳಗೆ ವೃಂದ ಸೇರಲು ಬಯಸಿಲ್ಲ ಎಂಬುದು ಸೇರಿ ಅನೇಕ ಕಾರಣಗಳನ್ನು ಹೇಳಿ ಮನವಿಗಳನ್ನು ತಿರಸ್ಕರಿಸಲಾಗಿದೆ.

ಅಭ್ಯರ್ಥಿಗಳಿಗಿಲ್ಲ ಮಾಹಿತಿ

ಅನೇಕ ಇಲಾಖೆಗಳಲ್ಲಿ ಈ ಮೀಸಲಿಗೆ ಸಂಬಂಧಿಸಿದ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಆದರೆ, ಅಭ್ಯರ್ಥಿಗಳಿಗೆ ಸುತ್ತೋಲೆ ಹೊರಡಿಸಿದ ಮಾಹಿತಿಯೇ ತಿಳಿದಿಲ್ಲ. ಜೊತೆಗೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈಕ ನೌಕರರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡದಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಶೇ.8ರ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮತ್ತೊಮ್ಮೆ ಹೈಕ ನೌಕರರಿಗೆ ಅನುಕೂಲವಾಗಲು ಸುತ್ತೋಲೆ ಹೊರಡಿಸಬೇಕೆಂಬುದು ನೌಕರರ ಒತ್ತಾಯವಾಗಿದೆ.

ಎಲ್ಲ ಇಲಾಖೆಗಳೆಗಳಲ್ಲೂ ಇದೇ ಸಮಸ್ಯೆ

ಹೈಕ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಇಲಾಖೆಗಳಲ್ಲಿ ಇದೇ ಸಮಸ್ಯೆಯಿದೆ. ಕೆಲವರ ಸೇವಾ ಪುಸ್ತಕದಲ್ಲಿ ವಿಳಾಸ ಇರದಿರುವುದು, ಮಾಹಿತಿ ತಿಳಿಯದಿರುವುದು ಹಾಗೂ ನೌಕರರ ಸೇವೆ ಪರಿಗಣಿಸದಿರುವುದು ಸೇರಿ ಅನೇಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಮೀಸಲು ನೌಕರರಿಗೆ ಸರಿಯಾಗಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಹೈಕ ಅಭ್ಯರ್ಥಿಗಳು ಮೇಲಧಿಕಾರಿಗಳ ಮೊರೆ ಹೋಗಿದ್ದಾರೆ. ಇನ್ನೂ ಕೆಲವರು ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸ್ಥಳೀಯ ವೃಂದಕ್ಕೆ ಸೇರುವಂತೆ ಸುತ್ತೋಲೆ ಹೊರಡಿಸಿದಾಗ ಅನೇಕರಿಗೆ ಮಾಹಿತಿಯೇ ಇಲ್ಲ. ಜೊತೆಗೆ ತನ್ನ ಸೇವಾ ಪುಸ್ತಕದಲ್ಲಿ ವಿಳಾಸ ದಾಖಲಾಗದೆ ಖಾಲಿ ಬಿಟ್ಟಿರುವುದರಿಂದ ತಾನು ಹೈಕ ಭಾಗದವರಾಗಿದ್ದರೂ ಮೀಸಲಿನಿಂದ ವಂಚಿತನಾಗಿದ್ದೇನೆ. ಆದ್ದರಿಂದ ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಸ್ಥಳೀಯ ವೃಂದಕ್ಕೆ ಸೇರಲು ಅನುಕೂಲ ಮಾಡಿಕೊಡಬೇಕು.

- ಮಲ್ಲಿಕಾರ್ಜುನ ಗೌ
ಡ, ಜಲ ಮಾಪನ ಓದುಗ, ಜಲಮಂಡಳಿ, ಬೆಂಗಳೂರು

ಹೈಕ ಭಾಗಕ್ಕೆ ಸೇರಿದ ಜಲ ಮಂಡಳಿ ಅಧಿಕಾರಿ ಮತ್ತು ನೌಕರರು ಬಡ್ತಿಯಿಂದ ವಂಚಿತವಾಗಿರುವ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಪ್ರಿಯಾಂಕ್‌ ಖರ್ಗೆ,
ಅಧ್ಯಕ್ಷ, 371ಜೆ ಅನುಷ್ಠಾನ ಸಂಪುಟ ಉಪ ಸಮಿತಿ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ