ಆ್ಯಪ್ನಗರ

ಕೃಷಿ ಭಾಗ್ಯ ತನಿಖೆ ಆದೇಶಕ್ಕೆ ಸಿದ್ದು ಆಕ್ರೋಶ

ಕೃಷಿ ಭಾಗ್ಯ ಯೋಜನೆ ಸಂಬಂಧ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 10 Sep 2019, 5:00 am
ಬೆಂಗಳೂರು : ಕೃಷಿ ಭಾಗ್ಯ ಯೋಜನೆ ಸಂಬಂಧ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web
ಕೃಷಿ ಭಾಗ್ಯ ತನಿಖೆ ಆದೇಶಕ್ಕೆ ಸಿದ್ದು ಆಕ್ರೋಶ


ಸುದ್ದಿಗಾರರಿಗೆ ಪ್ರತಿಕ್ರಿಯಿಸಿ,''ಸೇಡಿನ ರಾಜಕಾರಣ ಮಾಡುವುದಿಲ್ಲವೆಂದು ಬಿಎಸ್‌ವೈ ಹೇಳಿದ್ದರು. ಆದರೆ, ಮುಖ್ಯಮಂತ್ರಿಯಾದ ದಿನದಿಂದ ವರ್ಗಾವಣೆ, ದ್ವೇಷ ರಾಜಕಾರಣ ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ. ನಮ್ಮ ಸರಕಾರದ 5 ಯೋಜನೆಗಳನ್ನು ಬಿಎಸ್‌ವೈ ತನಿಖೆಗೆ ವಹಿಸಿರುವುದು ಸಂತೋಷ. ಬೆಟ್ಟ ಅಗೆದು ಇಲಿ ಹಿಡಿಯುವುದಿದ್ದರೆ ನಾವ್ಯಾಕೆ ಬೇಡ ಎನ್ನಲಿ? ಬಿಜೆಪಿ ಆಡಳಿತದ ವೈಫಲ್ಯ ಮುಚ್ಚಿ ಹಾಕಲು ನಡೆಸಿರುವ ನಾಟಕವನ್ನು ಅರಿಯದಷ್ಟು ರಾಜ್ಯದ ಜನ ಮುಗ್ಧರಲ್ಲ,'' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

''ನಮ್ಮ ಸರಕಾರದ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಲು ಬಿಎಸ್‌ವೈ ಹೊಸ ತಂತ್ರಗಳ ಹುಡುಕಾಟದಲ್ಲಿದ್ದಾರೆ. ತನಿಖಾ ಪ್ರಹಸನ ಇದರಲ್ಲೊಂದು. ತನಿಖೆ ಬೇಡವೆನ್ನುವುದಿಲ್ಲ. ತನಿಖೆಯ ನೆಪದಲ್ಲಿ ಯೋಜನೆ ನಿಲ್ಲಿಸಿದರೆ ಬೀದಿಗಿಳಿಯುವ ಜನರ ಜತೆಗೆ ನಾನೂ ಇರುತ್ತೇನೆ ಎನ್ನುವುದು ತಿಳಿದಿರಲಿ,'' ಎಂದು ಎಚ್ಚರಿಸಿದ್ದಾರೆ.

ಕಟೀಲ್‌ಗೆ ಕನಿಷ್ಠ ಜ್ಞಾನವಿಲ್ಲ

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಡಿಕೆಶಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ದು ಅವರೇ ನೀಡಿರುವ ಶಂಕೆಯಿದೆ ಎಂಬ ಕಟೀಲ್‌ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದ ಅವರು, ''ಸಂಸದ ಹಾಗೂ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಇ.ಡಿ, ಐಟಿ ಇಲಾಖೆ ಯಾರ ಅಧೀನದಲ್ಲಿದೆ ಎಂಬ ತಿಳಿವಳಿಕೆಯಿರಬೇಕು. ಇದುವರೆಗೂ ನಾನಾ ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿತ್ತು. ಈಗ ಎದುರಾಳಿ ನಾಯಕರ ನಡುವೆ ಹುಳಿ ಹಿಂಡುವ ಹೀನ ಕಾರ್ಯಕ್ಕೆ ಕೈಹಾಕಿದೆ. ರಾಜ್ಯ ಬಿಜೆಪಿ ನಾಟಕ ಮಂಡಳಿಗೆ ಕಾಮಿಡಿ ಪಾತ್ರದ ಅಗತ್ಯವಿತ್ತು. ಅದಕ್ಕಾಗಿ ಕಟೀಲ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ಅವರ ಪಕ್ಷದವರೂ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲ,'' ಎಂದು ವಾಗ್ದಾಳಿ ನಡೆಸಿದ್ದಾರೆ.

''ಕಟೀಲ್‌ ಅವರೇ, ನೀವು ಆರೋಪಿಸಿದಂತೆ ಸಿಬಿಐ, ಐಟಿ, ಇಡಿ ನನ್ನ ನಿಯಂತ್ರಣದಲ್ಲಿ ಇರುವುದು ನಿಜವಾದರೆ 56 ಇಂಚಿನ ಎದೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೇನು ಕೆಲಸ? ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಹೇಳಿ,'' ಎಂದೂ ಸವಾಲೆಸೆದಿದ್ದಾರೆ.


ಮತ್ತೆ ಇವಿಎಂ ರಾಗ

''ಇವಿಎಂ ಮೇಲೆ ಈಗಲೂ ಸಾಕಷ್ಟು ಅನುಮಾನವಿದೆ. ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಕೆಯಾಗಬೇಕು. ಎಲ್ಲ ಪಕ್ಷಗಳು ಸಹಕರಿಸಿದರೆ ಕಾಂಗ್ರೆಸ್‌ ಪಕ್ಷ ಇದರ ನೇತೃತ್ವ ವಹಿಸಿಕೊಳ್ಳಲು ಸಿದ್ಧ,''ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ