ಆ್ಯಪ್ನಗರ

ಕರಾಳ ಶನಿವಾರ: ಹಾಸನದಲ್ಲಿ 8, ಕೋಲಾರದಲ್ಲಿ 3, ಕಾರವಾರದಲ್ಲಿ ಒಬ್ಬ ಅಪಘಾತಕ್ಕೆ ಬಲಿ

ಮುಳಬಾಗಲು ಹಾಗೂ ಹಾಸನದ ಶಾಂತಿಗ್ರಾಮದ ಬಳಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 11 ಜನ ಮೃತಪಟ್ಟ ಬಗ್ಗೆ ವರದಿಯಾಗಿದೆ

Vijaya Karnataka Web 13 Jan 2018, 10:57 am
ಬೆಂಗಳೂರು: ಕೋಲಾರದ ಮುಳಬಾಗಲು, ಉತ್ತರ ಕನ್ನಡದ ಕಾರವಾರ ಹಾಗೂ ಹಾಸನದ ಶಾಂತಿಗ್ರಾಮದ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 12 ಜನ ಮೃತಪಟ್ಟಿದ್ದಾರೆ.
Vijaya Karnataka Web  accident in karnataka
ಕರಾಳ ಶನಿವಾರ: ಹಾಸನದಲ್ಲಿ 8, ಕೋಲಾರದಲ್ಲಿ 3, ಕಾರವಾರದಲ್ಲಿ ಒಬ್ಬ ಅಪಘಾತಕ್ಕೆ ಬಲಿ


ಮುಳಬಾಗಲು ತಾಲೂಕಿನ ಗಾಜಲಬಾವಿ ಗ್ರಾಮದ ಬಳಿ ಆಟೊ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಭಾಸ್ಕರ್ (35), ಪಾರ್ವತಮ್ಮ (38) ಹಾಗೂ ಗೌರಮ್ಮ ಮೃತ ದುರ್ದೈವಿಗಳು. ಮೃತರೆಲ್ಲರೂ ಬಂಗಾರಪೇಟೆಯ ಸಣ್ಣಕುಪ್ಪಂ ಗ್ರಾಮದ ಮೂಲದವರು ಎಂದು ತಿಳಿದುಬಂದಿದೆ.

ಕುಟುಂಬ ಸಮೇತ ಮುಳಬಾಗಲು ಬಳಿಯ ಖಾದ್ರಿಪುರ ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ಬಳಿ 8 ಜನರ ದಾರುಣ ಸಾವು

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಭೀಕರ ಅಪಘಾತಕ್ಕೀಡಾಗಿ ಶಾಂತಿಗ್ರಾಮದ ಕರೆಕೆರೆ ಬಳಿ 8 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ಚಾಲಕ ಶಿವಪ್ಪಾ ಚಲವಾದಿ ಹಾಗೂ ನಿರ್ವಾಹಕ ಲಕ್ಷ್ಮಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿಯ ವೋಲ್ವೋ ಬಸ್ (ಕೆಎ01 ಎಫ್ 8513) ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಬಸ್‌ನಲ್ಲಿ ಸುಮಾರು 43 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹಾಸನ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಕ್ರೂಜರ್ ವಾಹನ ಮರಕ್ಕೆ ಡಿಕ್ಕಿ: ಓರ್ವ ಸಾವು

ಕಾರವಾರದಲ್ಲಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಹತ್ತು ಮಂದಿಗೆ ಗಾಯಗಳಾದ ಘಟನೆ ಉತ್ತರಕನ್ನಡ ಜಿಲ್ಲೆಯ ನಡೆದಿದೆ.

ಚೆಂಡಿಯಾ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು 50 ವರ್ಷದ ನಿಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಹತ್ತು ಮಂದಿಯನ್ನ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೂಸರ್ ಚಾಲಕ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವಾಹನದಲ್ಲಿದ್ದವರೆಲ್ಲರೂ ಕುಷ್ಠಗಿ ಮೂಲದವರಾಗಿದ್ದು, ಗೋವಾ ಕಡೆಗೆ ತೆರಳುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ