ಆ್ಯಪ್ನಗರ

ರಾಜ್ಯದಲ್ಲಿ 2,500 ಚಿರತೆಗಳು ಪತ್ತೆ: ಚಿರತೆ ಗಣತಿ ನಡೆಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು ಎರಡುವರೆ ಸಾವಿರ ಚಿರತೆಗಳು ಇರುವುದನ್ನು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಪತ್ತೆ ಹಚ್ಚಿದೆ.

Vijaya Karnataka 27 Sep 2018, 8:51 am
ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು ಎರಡುವರೆ ಸಾವಿರ ಚಿರತೆಗಳು ಇರುವುದನ್ನು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಪತ್ತೆ ಹಚ್ಚಿದೆ.
Vijaya Karnataka Web lea


ದೇಶದಲ್ಲೇ ಮೊದಲ ಬಾರಿ ಚಿರತೆಗಳನ್ನು ಅಂದಾಜು ಮೂಲಕ ಗಣತಿ ನಡೆಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಚಿರತೆಗಳ ಗಣತಿ ಕುರಿತು ನಡೆಸಿರುವ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ.

''2012ರಿಂದ ರಾಜ್ಯದ ವಿವಿಧೆಡೆ ಈ ಅಧ್ಯಯನ ನಡೆಸಲಾಗಿದ್ದು, ವಿವಿಧ ರಕ್ಷಿತಾರಣ್ಯಗಳು, ಕಾಯ್ದಿಟ್ಟ ಅರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಸೇರಿದಂತೆ ಚಿರತೆಗಳ ಆವಾಸ ಸ್ಥಾನಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಚಿರತೆಗಳ ಮೇಲೆ ದೊಡ್ಡ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡ ಅಧ್ಯಯನ ದೇಶದಲ್ಲೇ ಮೊದಲು,'' ಎಂದು ಸಂಜಯ್‌ ಗುಬ್ಬಿ ತಿಳಿಸಿದರು.

''ಈ ಅಧ್ಯಯನಗಳಿಂದ ಕರ್ನಾಟಕದಲ್ಲೇ ಮೊದಲ ಬಾರಿಗೆ 2016ರ ರಲ್ಲಿ ತರಕರಡಿಯ ಇರುವಿಕೆ ದಾಖಲಾಗಿದೆ. ಜತೆಗೆ ದಕ್ಷಿಣ ಕರ್ನಾಟಕದಲ್ಲಿ ಸಣ್ಣ ಹುಲ್ಲೆಯ ಉಪಸ್ಥಿತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಹೆಚ್ಚು ಪ್ರಚಲಿತವಲ್ಲದ, ಆದರೆ ವನ್ಯಜೀವಿಗಳ ದೃಷ್ಟಿಕೋನದಲ್ಲಿ ಪ್ರಮುಖವಾದ ಹಲವು ತಾಣಗಳನ್ನು ಈ ಅಧ್ಯಯನದಿಂದ ಗುರುತಿಸಲಾಗಿದೆ,'' ಎಂದು ಗುಬ್ಬಿ ತಿಳಿಸಿದರು.

ವೈಯಕ್ತಿಕವಾಗಿ ಗುರುತಿಸಲ್ಪಟ್ಟು ಕ್ಯಾಮೆರಾ ಟ್ರ್ಯಾಪ್‌ನಿಂದ ಪಡೆದುಕೊಂಡ 363 ಚಿರತೆಗಳ ಚಿತ್ರಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಅಧ್ಯಯನ ನಡೆಸಿದ ತಂಡದಲ್ಲಿ ಎನ್‌.ಎಸ್‌ ಹರೀಶ್‌, ಎಚ್‌.ಸಿ ಪೂರ್ಣೇಶ ಆಶ್ರಿತ ಅನೂಪ್‌, ರಶ್ಮಿ ಭಟ್‌, ಸಂದೇಶ ಅಪ್ಪು ನಾಯ್ಕ್‌, ಎಲ್‌. ಜ್ಞಾನೇಂದ್ರ, ಜಿ. ರವಿದಾಸ್‌ ಮತ್ತಿತರರು ಚಿರತೆ ಅಂದಾಜು ಗಣತಿ ತಂಡದಲ್ಲಿದ್ದರು.

ವನ್ಯಜೀವಿಧಾಮ ಮಾಡಲು ಪ್ರಸ್ತಾವ

ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಚಿರತೆಗಳ ಸಾಂದ್ರತೆ ಹೆಚ್ಚಿರುವ ಭದ್ರಾವತಿ ವಿಭಾಗದ ಕೆಲ ಆಯ್ದ ಕಾಡುಗಳಾದ ಕುಕ್ಕಾವಾಡಿ-ಉಬ್ರಾಣಿ, ಹಾದಿಕೆರೆ, ಹಣ್ಣೇ, ರಂಗಯ್ಯನಗಿರಿ ಮತ್ತಿತರ ಪ್ರದೇಶಗಳು, ತುಮಕೂರು ವಿಭಾಗದಲ್ಲಿ ಸಣ್ಣ ಹುಲ್ಲೆ, ಚಿರತೆ, ಕತ್ತೆಕಿರುಬ, ಕೊಂಡು ಕುರಿಗಳಿರುವ ಬುಕ್ಕಾಪಟ್ಟಣ, ಮುತ್ತಗದಹಳ್ಳಿ, ಸುವರ್ಣಾವತಿ ಮತ್ತು ಇತರೆ ಕಾಡುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೋಷಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಗಣತಿ ಹೇಗೆ ?

''ಪ್ರತಿ ಚಿರತೆಯ ಮೈಮೇಲಿರುವ ವಿಶಿಷ್ಟ ಚುಕ್ಕೆಗಳ ಆಧಾರದಿಂದ ಚಿರತೆಗಳನ್ನು ಗುರುತಿಸಿ, ಸಂಖ್ಯಾಶಾಸ್ತ್ರ ವಿಧಾನಗಳನ್ನು ಬಳಸಿ ಒಂದು ಪ್ರದೇಶದಲ್ಲಿನ ಚಿರತೆಗಳ ಸಂಖ್ಯೆ ಮತ್ತು ಅವುಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಫೋಟೋಗಳ ಮೂಲಕ ಸೆರೆ ಹಿಡಿ-ಮರು ಸೆರೆಹಿಡಿ ವಿಧಾನವನ್ನು ಅನುಸರಿಸಿ ಚಿರತೆಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಈ ವಿಧಾನವನ್ನು ಉತ್ತರ ಅಮೇರಿಕಾದಲ್ಲಿ ಮೀನುಗಳ ಸಂಖ್ಯೆಯನ್ನು ಅಂದಾಜಿಸಲು ಮೊದಲು ಉಪಯೋಗಿಸಲಾಗಿತ್ತು,'' ಎಂದು ಸಂಜಯ್‌ ಗುಬ್ಬಿ ತಿಳಿಸಿದರು.

ಚಿರತೆಗಳು ಕಂಡು ಬಂದಿರುವ ಪ್ರದೇಶಗಳು

ಮಲೈ ಮಹದೇಶ್ವರ, ಕಾವೇರಿ, ಬಿಳಿಗಿರಿರಂಗನ ಬೆಟ್ಟ, ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್ಯಯನ ನಡೆಸಿದಾಗ ಚಿರತೆಗಳ ಇರುವಿಕೆ ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ