ಆ್ಯಪ್ನಗರ

ರಬ್ಬರ್‌ ಬಲೂನ್‌ ನುಂಗಿ ಬಾಲಕ ಸಾವು

ಆಟವಾಡುವ ವೇಳೆ ಆಕಸ್ಮಿಕವಾಗಿ ರಬ್ಬರಿನ ಬಲೂನು ತುಂಡು ನುಂಗಿದ ಎರಡು ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ಬಸವನಪುರ ಸಮೀಪದ ಚಿಕ್ಕ ಕಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.

Vijaya Karnataka 17 Apr 2018, 10:07 am
ಬೆಂಗಳೂರು: ಆಟವಾಡುವ ವೇಳೆ ಆಕಸ್ಮಿಕವಾಗಿ ರಬ್ಬರಿನ ಬಲೂನು ತುಂಡು ನುಂಗಿದ ಎರಡು ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ಬಸವನಪುರ ಸಮೀಪದ ಚಿಕ್ಕ ಕಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.
Vijaya Karnataka Web balon


ಚಿಕ್ಕಕಮ್ಮನಹಳ್ಳಿ ನಿವಾಸಿ ಅಬೂಬಕರ್‌ ಸಿದ್ಧಿಕಿ ಮತ್ತು ರೇಷ್ಮಾ ದಂಪತಿಯ ಪುತ್ರ ನವಾಜ್‌ ಮೃತ ಬಾಲಕ. ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ನವಾಜ್‌ ಆಟವಾಡಲು ಮನೆಯಿಂದ ಹೊರ ಹೋಗಿದ್ದ. 9 ಗಂಟೆ ಸುಮಾರಿಗೆ ಉಸಿರಾಡಲು ಸಾಧ್ಯವಾಗದೆ ಸುಸ್ತಾಗಿ ಮನೆಗೆ ಮರಳಿದ್ದಾನೆ. ಸುಸ್ತು ಹಾಗೂ ನರಳಾಟ ನೋಡಿದ ತಾಯಿ, ಹಸಿವಾಗಿರಬೇಕೆಂದು ಬ್ರೆಡ್‌ ಕೊಟ್ಟು ನೀರು ಕುಡಿಸಿದ್ದಾರೆ. ಬ್ರೆಡ್‌ ತಿಂದ ಕೆಲವೇ ಕ್ಷಣಕ್ಕೆ ಬಾಲಕ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಪತಿಗೆ ಮಾಹಿತಿ ನೀಡಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷೆ ಮಾಡಿದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ಕೊಟ್ಟು ಗಂಟಲಲ್ಲಿ ಸಿಲುಕಿದ್ದ ಬಲೂನ್‌ ತುಂಡನ್ನು ತೆಗೆದು ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು.

ಸ್ಥಳೀಯರ ನೆರವಿನೊಂದಿಗೆ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅರ್ಧ ತಾಸಿನಲ್ಲಿ ನವಾಜ್‌ ಅಸುನೀಗಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿ ಹುಳಿಮಾವು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಬಲೂನ್‌ ನುಂಗಿರುವುದು ಗೊತ್ತಿರಲಿಲ್ಲ

ಸುಸ್ತಾಗಿ ಬಂದ ಮಗನಿಗೆ ಹಸಿವಾಗಿರಬಹುದು ಎಂದು ತಾಯಿ ಭಾವಿಸಿದ್ದು, ಆತ ಬಲೂನ್‌ ನುಂಗಿರುವುದು ಗೊತ್ತಾಗಲಿಲ್ಲ. ತೀವ್ರ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಬಾಲಕ ಬಲೂನು ನುಂಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕ್ರಂದನ

ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನು ಸಾಗಿಸಲಾಗಿತ್ತು. ಜತೆಗೆ ಬಂದಿದ್ದ ಬಾಲಕ ನವಾಜ್‌ ತಂದೆ ಅಬೂಬಕರ್‌, ಮಗನ ದೇಹ ಕತ್ತರಿಸಲು ಬಿಡುವುದಿಲ್ಲ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಮಕ್ಕಳಿಗೆ ಬಲೂನು ಕೊಟ್ಟಾಗ ಗಮನವಿರಲಿ

ಬಲೂನ್‌ನಲ್ಲಿ ಆಟವಾಡುವ ಮಕ್ಕಳು, ಅದು ಒಡೆದು ಹೋದರೆ ಮತ್ತೆ ಊದುವ ಅಥವಾ ಅದನ್ನು ಸಣ್ಣ ಬಲೂನು ಮಾಡಿ ಆಟವಾಡುತ್ತಾರೆ. ಕೆಲವೊಮ್ಮೆ ಪುಟ್ಟ ಮಕ್ಕಳು ತಮಗರಿವಿಲ್ಲದೇ ಬಲೂನು ತುಂಡನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಆಕಸ್ಮಿಕವಾಗಿ ನುಂಗಿದರೆ ಅದು ಮಾರಣಾಂತಿಕವಾಗಿರುತ್ತದೆ. ಹೀಗಾಗಿ, ಪುಟ್ಟ ಮಕ್ಕಳಿಗೆ ಆಡಲು ಬಲೂನು ನೀಡಿದಾಗ ಪಾಲಕರು ಎಚ್ಚರ ವಹಿಸುವುದು ಒಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ