ಆ್ಯಪ್ನಗರ

ಸಂಸದ ಪ್ರಜ್ವಲ್‌ಗೆ ಪ್ರಮಾಣ ವಚನ ಬೋಧನೆ ಬೇಡ: ಮಂಜು

-ಸಮಗ್ರ ತನಿಖೆ ಕೋರಿ ಹೈಕೋರ್ಟ್‌ಗೆ ಇಂದು ಅರ್ಜಿ ಸಲ್ಲಿಕೆ -18 ಹಸುಕಟ್ಟಿಕೊಂಡು ನೂರಾರು ಕೋಟಿ ಆಸ್ತಿ ಸಂಪಾದಿಸಲು ಸಾಧ್ಯವೇ? -ನೆಲಮಂಗಲ ಬಳಿ 12 ಎಕರೆ ಖರೀದಿಸಿ 42 ಎಕರೆಗೆ ...

Vijaya Karnataka 21 Jun 2019, 5:00 am
ಬೆಂಗಳೂರು: 'ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಸ್ತಿ ವಿವರಗಳನ್ನು ಬಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇನೆ. ಹೀಗಾಗಿ ಪ್ರಜ್ವಲ್‌ ರೇವಣ್ಣಗೆ ಸಂಸದರಾಗಿ ಪ್ರಮಾಣ ವಚನ ಬೋಧನೆ ಮಾಡಬಾರದು' ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ಆಗ್ರಹಿಸಿದ್ದಾರೆ.
Vijaya Karnataka Web a manju


ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ''ಪ್ರಜ್ವಲ್‌ ಪ್ರಮಾಣ ಪತ್ರದಲ್ಲಿ ಸಾಕಷ್ಟು ದೋಷಗಳಿವೆ. ಕರ್ಣಾಟಕ ಬ್ಯಾಂಕ್‌ನ ಮಿನರ್ವ ವೃತ್ತ ಶಾಖೆಯ ಉಳಿತಾಯ ಖಾತೆಯಲ್ಲಿ 5,78,238 ರೂ. ಹಣ ಇದೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ. ಆದರೆ ನಮ್ಮ ಮಾಹಿತಿ ಪ್ರಕಾರ ಕಳೆದ ಮಾ.30ರವರೆಗೆ ಆ ಖಾತೆಯಲ್ಲಿ 50 ಲಕ್ಷ ರೂ. ಇತ್ತು. ಈ ಒಂದು ಖಾತೆಯಲ್ಲೇ 43.31 ಲಕ್ಷ ರೂ. ವ್ಯತ್ಯಾಸ ಕಂಡು ಬಂದಿದೆ. ಸಂಸದರಾಗುವುದಕ್ಕೆ ಮುನ್ನವೇ ಈ ರೀತಿ ಭ್ರಷ್ಟಾಚಾರ ನಡೆಸಿದವರು, ಅಧಿಕಾರ ಸಿಕ್ಕರೆ ಇನ್ನೇನು ಮಾಡಬಹುದು,'' ಎಂದು ವ್ಯಂಗ್ಯವಾಡಿದರು.

'' ಪ್ರಜ್ವಲ್‌ಗೆ 2008ರಿಂದ ಆದಾಯವಿದ್ದರೂ 2018-19ನೇ ಸಾಲಿನ ಆದಾಯ ತೆರಿಗೆ ವಿವರವನ್ನಷ್ಟೇ ನೀಡಿದ್ದಾರೆ. ಅವರ ಖಾತೆಗೆ ಸುಮಾರು 10 ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ. ಹಲವು ಕಡೆ ಭೂಮಿ ಖರೀದಿಸಿ ಬ್ಯಾಂಕ್‌ನಿಂದಲೇ ಹಣ ಪಾವತಿಸಿರುವ ದಾಖಲೆಗಳು ಇವೆ. ಪ್ರಜ್ವಲ್‌ ಅವರು ಪಿಯುಸಿ ಓದುತ್ತಿರುವಾಗಲೇ 3 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದ ದಾಖಲೆಯೂ ಇದೆ. ಈ ಅಂಶಗಳನ್ನು ಮರೆಮಾಚಿದ್ದು ಏಕೆ,'' ಎಂದು ಪ್ರಶ್ನಿಸಿದರು.

''ಡ್ರೋನ್‌ ವರ್ಕ್‌ಫೋರ್ಸ್‌ ಎಲ್‌ಎಲ್‌ಪಿ ಎಂಬ ಬೆಂಗಳೂರು ಕಂಪನಿ ಸೇರಿದಂತೆ ಎರಡು ಸಂಸ್ಥೆಗಳಲ್ಲಿ ಅವರು ಶೇ.20 ಹಾಗೂ ಶೇ. 25ರಷ್ಟು ಪ್ರಜ್ವಲ್‌ ಪಾಲು ಹೊಂದಿದ್ದಾರೆ. ಈ ಬಗ್ಗೆ ಮಾ. 27ರಂದೇ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಅವರ ಆದಾಯ ವಿಚಾರ ಸಂಬಂಧ ಮೇ 27ರಂದು ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಅಲ್ಲಿಗೂ ಹೋಗಿ ಕೈ ಕಾಲು ಹಿಡಿದಿದ್ದಾರೋ ಎಂಬ ಅನುಮಾನ ಮೂಡಿದೆ,'' ಎಂದು ವ್ಯಂಗ್ಯವಾಡಿದರು.

ಪ್ರಜ್ವಲ್‌ ರೇವಣ್ಣ ಕೇವಲ 18 ಹಸು ಕಟ್ಟಿಕೊಂಡು ಇಷ್ಟೆಲ್ಲಾ ಹಣ ಗಳಿಸಲು ಸಾಧ್ಯವಾಗಿದ್ದರೆ ದೇಶದಲ್ಲಿ ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಹಾಗಾಗಿ ಪ್ರಜ್ವಲ್‌ ರೇವಣ್ಣ ಅವರು ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆಗೆ ಕೋರಿ ಹೈಕೋರ್ಟ್‌ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ