ಆ್ಯಪ್ನಗರ

ರಾಜ್ಯಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ, ಆಮ್ ಆದ್ಮಿ ಪಕ್ಷ ಆಗ್ರಹ

ರಾಜ್ಯಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟದ ಹಿನ್ನೆಲೆಯಲ್ಲಿ ಗಣಿಗಾರಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Vijaya Karnataka Web 23 Jan 2021, 1:54 pm
ಬೆಂಗಳೂರು: ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ನೂರಾರು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಸ್ಥಳೀಯ ಶಾಸಕರು, ಪ್ರಭಾವಿಗಳೇ ಇದರ ರುವಾರಿಗಳು ಇವರಿಂದಲೇ ದುರ್ಘಟನೆಗಳು ನಡೆಯುತ್ತಿದ್ದು ಅಮಾಯಕರ ಪ್ರಾಣಕ್ಕೆ ಬೆಲೆಯೆ ಇಲ್ಲದಂತಾಗಿದೆ. ಈ ಕೂಡಲೇ ಸರ್ಕಾರ ಇಂತಹ ಅಕ್ರಮ ಕಲ್ಲು ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
Vijaya Karnataka Web shivamogga


ಶನಿವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಆಮ್ ಆದ್ಮಿ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ, ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಭಾವಿ ಸಚಿವರ ಜಿಲ್ಲೆಯಲ್ಲಿ ಡೈನಮೈಟ್ ಸಿಡಿದು ನಡೆದಿರುವ ಘೋರ ಘಟನೆ ವಿಷಾಧನೀಯ ಎಂದರು.

ಶಿವಮೊಗ್ಗ ಡೈನಾಮೈಟ್‌ ಬ್ಲಾಸ್ಟ್: ಮೂವರು ಅರೆಸ್ಟ್‌, ಸ್ಥಳಕ್ಕೆ ಧಾವಿಸಿದ ಬಾಂಬ್‌ ಸ್ಕ್ವಾಡ್‌!

ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಇಂತಹ ಅಕ್ರಮ ಗಣಿಗಾರಿಕೆ ತೀರ ಅಪಾಯಕಾರಿ ಎಂದು ಅನೇಕ ವರದಿಗಳನ್ನು ಸರ್ಕಾರಕ್ಕೆ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಸರ್ಕಾರ ಪ್ರಭಾವಿಗಳ ಜೊತೆ ಕೈಜೋಡಿಸಿ ಹಫ್ತಾ ವಸೂಲಿಗೆ ನಿಂತಿದೆ ಎಂದು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ದ ನಾಗರಿಕರು, ಗ್ರಾಮಸ್ಥರು ಶಿವಮೊಗ್ಗ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿದ್ದರು. ಆಗ ಸಚಿವ ಈಶ್ವರಪ್ಪ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನೋಟಿಸ್ ವಾಪಸ್ಸು ಪಡೆಯುವಂತೆ ಮಾಡಿದ್ದರು.

ಇಡೀ ರಾಜ್ಯದ ಎಲ್ಲಾ ಭಾಗಗಳಲ್ಲೂ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮ ಮೀರಿ ಅತಿ ಆಳದವರೆಗೂ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಪ್ರತಿನಿಧಿಗಳ ಕುಮ್ಮಕ್ಕೂ ಇದೆ, ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರಾಜಸ್ವ ಧನ ನಷ್ಟವಾಗುತ್ತಿದೆ ಎಂದರು.ಸರ್ಕಾರವನ್ನ ನಂಬಿಕೊಂಡರೆ ಸೂಕ್ತ ತನಿಖೆ ನಡೆಸುತ್ತದೆ ಎನ್ನುವ ನಂಬಿಕೆ ಇಲ್ಲ ಆದ ಕಾರಣ ಹೈಕೋರ್ಟಿನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಹೇಳಿದರು.

ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆಗಳನ್ನೂ ಈ ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಅಕ್ರಮ ಗಣಿಗಾರಿಕೆಗೆ ಕಾರಣಕರ್ತರಾದ ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳುಸಕರಿಗೆ ಸರ್ಕಾರ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ