ಬೆಂಗಳೂರು: ಮುಸ್ಲಿಂ ನಾಯಕರ ಕುರಿತು ಕೀಳಾಗಿ ಮಾತನಾಡಿರುವುದಕ್ಕೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಮುಸ್ಲಿಂ ಯೂನಿಟಿ ಕೇಂದ್ರ ಸಮಿತಿ ಆಗ್ರಹಿಸಿದೆ.
''ರೇವಣ್ಣ ಅವಹೇಳನಕಾರಿ ಹೇಳಿಕೆಯಿಂದ ಸಮುದಾಯದ ಜನರ ಮನಸ್ಸಿಗೆ ನೋವಾಗಿದೆ. ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು,'' ಎಂದು ಮುಸ್ಲಿಂ ಯೂನಿಟಿ ಅಧ್ಯಕ್ಷ ಎ.ಜೆ.ಖಾನ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
''ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಜುಬೈರ್ ಎಂಬ ವ್ಯಕ್ತಿಯ ಕೊಲೆ ಹಿನ್ನೆಲೆಯಲ್ಲಿ ಬಿಜೆಪಿಯು ರಾಜಕೀಯ ಪ್ರೇರಿತವಾಗಿ ಸಚಿವ ಯು.ಟಿ.ಖಾದರ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ಖಂಡನೀಯ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಚಿವ ತನ್ವೀರ್ ಸೇಠ್ ನಿವಾಸಕ್ಕೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿರುವುದು ಸಂವಿಧಾನ ಬಾಹಿರವಾಗಿದೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,'' ಎಂದು ಅವರು ಆಗ್ರಹಿಸಿದರು.