ಬೆಂಗಳೂರು: ಅನುಕಂಪದ ಆಧಾರದಲ್ಲಿ ಕೆಲಸ ದೊರಕಿರುವುದಕ್ಕೆ ಪ್ರತಿಯಾಗಿ ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಗಡಿ ಕಮಲಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಮಂಗಳವಾರ ಎಫ್ಐಆರ್ ದಾಖಲಾಗಿದೆ.
ವಿಜಯ ನಗರ ನಿವಾಸಿ ಭಾಗ್ಯಲಕ್ಷ್ಮೇ ಎಂಬುವರು ಎಸಿಬಿಗೆ ದೂರು ನೀಡಿದ್ದರು. ಕಾವೇರಿ ಹ್ಯಾಂಡಿಕ್ರಾಫ್ಟ್ಸ್ನಲ್ಲಿ 22 ವರ್ಷ ಅಟೆಂಡರ್ ಆಗಿದ್ದ ಭಾಗ್ಯಲಕ್ಷ್ಮೇ ಅವರ ಪತಿ ಶಿವಕುಮಾರ್ ಅವರು ಅನಾರೋಗ್ಯದ ಕಾರಣ 2017ರ ಜ.20ರಂದು ನಿಧನರಾಗಿದ್ದರು. ಭಾಗ್ಯಲಕ್ಷ್ಮೇ ಗುತ್ತಿಗೆ ಆಧಾರದ ಮೇಲೆ ಅಲ್ಲೇ ಸ್ವಚ್ಛಗೊಳಿಸುವ ಕೆಲಸಕ್ಕಿದ್ದರು. ಮೇ.31ರಂದು ಅನುಕಂಪದ ಆಧಾರದ ಮೇಲೆ ಭಾಗ್ಯಲಕ್ಷ್ಮೇ ಪುತ್ರ ಎಸ್.ಮಧುಗೆ ಬೆಂಗಳೂರು ಕಚೇರಿಯಲ್ಲೇ ಅಟೆಂಡರ್ ಕೆಲಸದ ಆದೇಶ ಪ್ರತಿ ಸಿಕ್ಕಿತ್ತು. ಈ ವಿಷಯವನ್ನು ಭಾಗ್ಯಲಕ್ಷ್ಮೇ ಎಲ್ಲರ ಜತೆ ಹಂಚಿಕೊಂಡು ಸಿಹಿ ವಿತರಿಸಿದರು. ಅದರಂತೆ ಅಧ್ಯಕ್ಕೆ ಮಾಗಡಿ ಕಮಲಮ್ಮ ಅವರ ಕಚೇರಿಗೂ ವಿತರಿಸಿದರು.
ಈ ವಿಷಯ ತಿಳಿದ ಕಮಲಮ್ಮ, ನಿಮ್ಮ ಮಗ ಬೆಂಗಳೂರಿನಲ್ಲೇ ಮುಂದುವರಿಯಲು 1ಲಕ್ಷ ರೂ. ಲಂಚ ನೀಡಬೇಕು. ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡುತ್ತೇನೆ ಎಂದರು. ಕಚೇರಿಯಲ್ಲಿ ಈ ಮಾತುಕತೆ ನಡೆಯುತ್ತಿದ್ದ ವೇಳೆ ವೇಳೆ ಬೇರೆ ವ್ಯಕ್ತಿಗಳು ಬಂದ ಕಾರಣ ಭಾಗ್ಯಲಕ್ಷ್ಮೇ ಅವರನ್ನು ಹೊರಗೆ ಕಳುಹಿಸಲಾಗಿತ್ತು. ಇದಕ್ಕೆ ಆತಂಕಗೊಂಡ ಭಾಗ್ಯಲಕ್ಷ್ಮೇ, ಪರಿಚಿತರ ಸಲಹೆ ಮೇರೆಗೆ ಮತ್ತೊಮ್ಮೆ ಕಮಲಮ್ಮ ಅವರ ಕಚೇರಿಯೊಳಗೆ ಪ್ರವೇಶಿಸುವ ವೇಳೆ ಮೊಬೈಲ್ ಫೋನ್ನಲ್ಲಿ ವಾಯ್ಸ್ ರೆಕಾರ್ಡಿಂಗ್ ಆನ್ ಮಾಡಿಕೊಂಡು ಹೋಗಿದ್ದರು. ಅನುಕಂಪ ಆಧಾರದ ಮೇಲೆ ಕೆಲಸ ಸಿಕ್ಕಿರುವ ಕಾರಣ 1 ಲಕ್ಷ ರೂ. ಲಂಚ ಕೇಳಿದ್ದ ಕಮಲಮ್ಮ, ಅಂತಿಮವಾಗಿ 30 ಸಾವಿರಕ್ಕೆ ಒಪ್ಪಿದ್ದರು. ಈ ಕುರಿತು ಎಸಿಬಿಗೆ ದೂರು ನೀಡಿದ್ದರು. ವಾಯ್ಸ್ ರೆಕಾರ್ಡಿಂಗ್ ಹಾಗೂ ಕಮಲಮ್ಮ ಅವರಿಂದ ಸಂಗ್ರಹಿಸಿದ್ದ ಧ್ವನಿಯನ್ನು ಎಫ್ಎಸ್ಎಲ್ಗೆ ಎಸಿಬಿ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದರು. ಧ್ವನಿ ಹೋಲಿಕೆಯಾಗಿರುವ ವರದಿ ಬಂದ ಹಿನ್ನೆಲೆಯಲ್ಲಿ ಅ.10ರಂದು ಕಮಲಮ್ಮ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕಲಂ 7ರ ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಭಾಗ್ಯಲಕ್ಷ್ಮೇ ವಿರುದ್ಧವೇ ದೂರು
ಲಂಚ ಕೇಳಿರುವುದು ರೆಕಾರ್ಡಿಂಗ್ ಆಗಿದೆ ಎಂಬ ವಿಷಯ ತಿಳಿದ ಮಾಗಡಿ ಕಮಲಮ್ಮ ಅವರು, ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ''ಭಾಗ್ಯಲಕ್ಷ್ಮೇ ನೀಡಿದ ಸಿಹಿ ತಿನಿಸಿನಲ್ಲಿ 'ಮತ್ತು' ಬರಿಸುವ ಔಷಧಿ ಹಾಕಿದ್ದು, ಹೀಗಾಗಿ, ನನಗೆ ಪ್ರಜ್ಞೆ ಇಲ್ಲದೇ ಏನೇನೋ ಮಾತನಾಡಿದ್ದೇನೆ,'' ಎಂದು ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಭಾಗ್ಯಲಕ್ಷ್ಮೇಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಆದರೆ, ಕಮಲಮ್ಮ ಅವರು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ನಗರದ ಪೆನಿಶಿಯಾ ಆಸ್ಪತ್ರೆಗೆ ತೆರಳಿದ ಎಸಿಬಿ ಪೊಲೀಸರು, ಅವರು ಯಾವ ಚಿಕಿತ್ಸೆ ಪಡೆದಿದ್ದಾರೆ ಎಂದು ವೈದ್ಯರ ಬಳಿ ಮಾಹಿತಿ ಕೇಳಿದ್ದರು. ಈ ವೇಳೆ, ಪುಡ್ ಪಾಯ್ಸನ್ ಆಗಿದೆ ಎಂದು ಬಂದಿದ್ದರು. ಹೀಗಾಗಿ, ಮಾತ್ರೆಗಳನ್ನು ನೀಡಿ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದೇವು. ಬಳಿಕ ಅವರು ಹೊರಟು ಹೋದರು. ಗಂಭೀರ ಅನಾರೋಗ್ಯ ಸಮಸ್ಯೆ ಇರಲಿಲ್ಲ ಎಂದು ಗೊತ್ತಾಗಿತ್ತು. ತಮ್ಮ ವಿರುದ್ಧದ ಗಂಭೀರ ಆರೋಪದಿಂದ ಪಾರಾಗಲು ಭಾಗ್ಯಲಕ್ಷ್ಮೇ ವಿರುದ್ಧ ಕೇಸ್ ದಾಖಲಿಸಿದ್ದರು. ಜತೆಗೆ ಇವರ ಪುತ್ರ ಮಧುವನ್ನು ಬೀದರ್ಗೆ ವರ್ಗಾವಣೆ ಮಾಡಿದ್ದರು ಎಂದು ಕಾವೇರಿ ಹ್ಯಾಂಡಿಕ್ರಾಫ್ಟ್ ಉದ್ಯೋಗಿಗಳ ಸಂಘದ ಅಧ್ಯಕ್ಷ, ವಕೀಲ ಅಮೃತೇಶ್ ತಿಳಿಸಿದರು.