ಆ್ಯಪ್ನಗರ

ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ: ಎಸಿಬಿ ತನಿಖೆಗೆ ಸೂಚನೆ

ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುವ ಹನ್ನೊಂದು ಚೆಕ್‌ಪೋಸ್ಟ್‌ಗಳಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸುವಂತೆ ರಾಜ್ಯ ಮಾಹಿತಿ ಆಯೋಗ ಎಸಿಬಿಗೆ ನಿರ್ದೇಶನ ನೀಡಿದೆ.

Vijaya Karnataka 29 May 2018, 8:06 am
ಬೆಂಗಳೂರು: ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುವ ಹನ್ನೊಂದು ಚೆಕ್‌ಪೋಸ್ಟ್‌ಗಳಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸುವಂತೆ ರಾಜ್ಯ ಮಾಹಿತಿ ಆಯೋಗ ಎಸಿಬಿಗೆ ನಿರ್ದೇಶನ ನೀಡಿದೆ.
Vijaya Karnataka Web Check Post


ಚೆಕ್‌ಪೋಸ್ಟ್‌ಗಳಲ್ಲಿನ ಅಕ್ರಮ ತಡೆಗೆ ಅಳವಡಿಸಿದ್ದ ಸಿಸಿಟಿವಿಗಳು ಎರಡು ವರ್ಷದಿಂದ ಕಾರ್ಯಾಚರಿಸುತ್ತಿರಲಿಲ್ಲ. ಇದರ ಹಿಂದೆ ಚೆಕ್‌ಪೋಸ್ಟ್‌ಗಳಲ್ಲಿನ ಸಿಬ್ಬಂದಿ ಕೈಚಳಕ ಇರಬಹುದೆಂದು ಭಾವಿಸಲಾಗಿದೆ. ಆದಾಯ ಸೋರಿಕೆಯಾಗುತ್ತಿರುವ ಜತೆಗೆ ನಿರೀಕ್ಷಿತ ಪ್ರಮಾಣದ ಶುಲ್ಕ ವಸೂಲಿಯಾಗದ ಕಾರಣ ಅಕ್ರಮ ಪತ್ತೆ ಹಚ್ಚುವ ಹೊಣೆಯನ್ನು ಎಸಿಬಿಗೆ ವಹಿಸಲಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕುರಿತು ಯಲಹಂಕ ನಿವಾಸಿ ಕೆ.ಪ್ರಕಾಶ್‌ ರೆಡ್ಡಿ ಆರ್‌ಟಿಐ ಅಡಿ ಮಾಹಿತಿ ಕೋರಿದ್ದ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ.ರಮೇಶ್‌ ಅವರು ಈ ಆದೇಶವನ್ನು ಪ್ರಕಟಿಸಿದ್ದಾರೆ.

ವಿಜಯಪುರದ ಝಳಕಿ, ಬೆಳಗಾವಿಯ ನಿಪ್ಪಾಣಿ, ಕೋಲಾರದ ನಂಗಲಿ, ಬೆಂಗಳೂರಿನ ಅತ್ತಿಬೆಲೆ, ಉತ್ತರಕನ್ನಡದ ಜೋಯಿಡಾ ಬಳಿಯ ಅನ್ಮೋಡಿ, ಬಳ್ಳಾರಿಯ ಹಗರಿಬೊಮ್ಮನಹಳ್ಳಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಾಮರಾಜನಗರದ ಚಿಕ್ಕಹೊಳೆ, ಬೀದರ್‌ನ ಹುಮನಾಬಾದ್‌ ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿದ್ದ ಸಿಸಿಟಿವಿಯ ಮಾಹಿತಿ ಕೋರಲಾಗಿತ್ತು. ಇದರ ಮಾಹಿತಿ ನೀಡಲು ಅಲ್ಲಿನ ಎಆರ್‌ಟಿಒ ನಿರಾಕರಿಸಿದ್ದರು. ಜತೆಗೆ ಹೊಸ ಹಾರ್ಡ್‌ಡಿಸ್ಕ್‌ ಖರೀದಿಗೆ ಇಲಾಖೆಯ ಅನುಮತಿಗೆ ಪತ್ರ ಬರೆಯಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿತ್ತು.

ಈ ಮಾಹಿತಿಯೊಂದಿಗೆ ಪ್ರಕಾಶ್‌ರೆಡ್ಡಿ ಅವರು ಚೆಕ್‌ಪೋಸ್ಟ್‌ಗಳಲ್ಲಿ ವಾಹನ ಚಾಲಕರಿಂದ ಹೆಚ್ಚಿನ ಶುಲ್ಕ ಪಡೆದರೂ, ಅ ಮೊತ್ತದಲ್ಲಿ ಪೂರ್ಣ ಭಾಗವನ್ನು ಸರಕಾರದ ಬೊಕ್ಕಸಕ್ಕೆ ಪಾವತಿಸುತ್ತಿಲ್ಲ ಎಂದು ಆಯೋಗದ ಮುಂದೆ ವಾದಿಸಿದ್ದರು. ಓವರ್‌ ಲೊಡ್‌, ವಾಹನ ಚಾಲನಾ ಪರವಾನಗಿ ಇಲ್ಲದಿರುವುದು ಇತ್ಯಾದಿ ಪ್ರಕರಣಗಳಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗುತ್ತಿತ್ತು ಎಂದು ದೂರಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಸುಸ್ಥಿತಿಯಲ್ಲಿಟ್ಟು ಅವುಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡುವ ಕೆಲಸ ಅಲ್ಲಿನ ಅಧಿಕಾರಿಗಳಿಗೆ ಸೇರಿದ್ದಾಗಿದೆ. ಜತೆಗೆ ಅಕ್ರಮ ತಡೆಯಲೆಂದೇ ಸ್ವತ: ಇಲಾಖೆ ಸಿಸಿಟಿವಿ ಜೋಡಣೆ ಮಾಡಿದ್ದರೂ, ಅದರ ಬಳಕೆ ಕುರಿತು ಅಧಿಕಾರಿ ವರ್ಗ ನಿರ್ಲಕ್ಷ್ಯ ತಾಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಯಾರಿಂದ ಲೋಪ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳುವ ಹೊಣೆಯನ್ನು ಆಯೋಗವು ಎಸಿಬಿಗೆ ವಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ