ಆ್ಯಪ್ನಗರ

ತಪ್ಪು ತಿದ್ದಿಕೊಂಡು ಒಳ್ಳೆಯವರಾಗೋಣ: ನಟ ಸುದೀಪ್‌

ನನ್ನಿಂದಲೂ ಸಣ್ಣ ತಪ್ಪು ಆಗಿರಬಾರದು ಆದರೆ, ಇದೊಂದು ಕಲಿಯುವಿಕೆ ಪ್ರಕ್ರಿಯೆ ಆಗಲಿ...

Vijaya Karnataka 15 Jan 2019, 5:00 am
ಬೆಂಗಳೂರು: ನನ್ನಿಂದಲೂ ಸಣ್ಣ ತಪ್ಪು ಆಗಿರಬಾರದು. ಆದರೆ, ಇದೊಂದು ಕಲಿಯುವಿಕೆ ಪ್ರಕ್ರಿಯೆ ಆಗಲಿ. ಒಳ್ಳೆಯದನ್ನು ಕಲಿತು ಒಳ್ಳೆಯ ಪ್ರಜೆ ಆಗೋಣ ಎಂದು ನಟ ಸುದೀಪ್‌ ಹೇಳಿದ್ದಾರೆ.
Vijaya Karnataka Web sudeep


ಐಟಿ ಅಧಿಕಾರಿಗಳ ಎದುರು ಸೋಮವಾರ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು. ''ಐಟಿ ಶೋಧ ಸಂಬಂಧ ಇನ್ನು ಕೆಲವು ತಿಂಗಳು ವಿಚಾರಣೆ ನಡೆಯುತ್ತದೆ. ಅಧಿಕಾರಿಗಳು ಬಂದ ಸಂದರ್ಭದಲ್ಲಿ ನಾವು ಹೇಳಿಕೆ ನೀಡಿರುತ್ತೇವೆ. ಅದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಕರೆಸಿಕೊಳ್ಳುತ್ತಾರೆ. ಈಗಾಗಲೇ ನೀಡಿರುವ ಹೇಳಿಕೆ ಮೇಲೆ ಮತ್ತೆ ಏನಾದರೂ ತಿಳಿಸುತ್ತೀರಾ ಎಂದು ಕೇಳುತ್ತಾರೆ. ಆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಆಡಿಟರ್‌ ವಿಚಾರಣೆಗೆ ಹಾಜರಾಗಲಿದ್ದು, ಅವರಿಗೆ ಪವರ್‌ ಆಫ್‌ ಅಟಾರ್ನಿ ಕೊಟ್ಟಿರುತ್ತೇವೆ. ನಮ್ಮ ಅಗತ್ಯವಿದ್ದಾಗ ಬರಲೇಬೇಕಾಗುತ್ತದೆ'' ಎಂದು ಸುದೀಪ್‌ ಹೇಳಿದರು.

''ಐಟಿ ಅಧಿಕಾರಿಗಳು ನಮ್ಮ ಮನೆಯಲ್ಲಿ ಶೋಧಕ್ಕೆ ಬಂದಾಗ ಪೈಲ್ವಾನ್‌ ಸಿನಿಮಾ ಶೂಟಿಂಗ್‌ನಲ್ಲಿದ್ದೆ. ವಿಷಯ ತಿಳಿದು ಅದನ್ನು ಮಧ್ಯದಲ್ಲೇ ಬಿಟ್ಟು ಬಂದಿದ್ದೆ. ನಂತರದ ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಈ ದಿನ ವಿಚಾರಣೆಗೆ ಬಂದಿದ್ದೇನೆ. ನಮ್ಮಿಂದ ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಅವುಗಳನ್ನು ನಾವು ಉದ್ದೇಶಪೂರ್ವಕವಾಗಿ ಮಾಡಿದ್ದೇವೆ ಎಂದಲ್ಲ. ಸಿನಿಮಾ ಕ್ಷೇತ್ರಕ್ಕೆ ನಾವೇ ಉದಾಹರಣೆಯಾದರೆ ಒಳ್ಳೆಯದು. ಹೀಗಾಗಿ, ನಾವು ಒಳ್ಳೆಯದನ್ನು ಕಲಿತು, ಒಳ್ಳೆಯ ಪ್ರಜೆಗಳಾಗೋಣ,'' ಎಂದು ಹೇಳಿದರು.

ಸಿನಿಮಾ ಕ್ಷೇತ್ರದ ಹಲವರು ಸೂಕ್ತ ರೀತಿಯಲ್ಲಿ ತೆರಿಗೆ ಪಾವತಿಸುತ್ತಿಲ್ಲ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ. ಸಿನಿಮಾ ಮಂದಿಗೆ ನೀವು ಏನಾದರೂ ಸಲಹೆ ನೀಡಬಹುದೇ ಎಂದು ಪತ್ರಕರ್ತರು ಕೇಳಿದಾಗ, ''ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಂಡು ಅವರವರ ವಿಚಾರಗಳನ್ನು ಅವರೇ ಹೇಳಬೇಕು. ಬೇರೆಯವರು ಮಾಡಿದ್ದು, ಸರಿ ಅಥವಾ ತಪ್ಪು ಎಂದು ನಾನು ಮಾತನಾಡಲು ಬರುವುದಿಲ್ಲ. ನನ್ನ ವಿಚಾರವನ್ನು ಮಾತ್ರ ನಾನು ಮಾತನಾಡಬಲ್ಲೆ. ಪ್ರತಿಯೊಬ್ಬರು ಜೀವನವನ್ನು ಗೆದ್ದುಕೊಂಡು ಬಂದಿದ್ದಾರೆ. ಹೀಗಾಗಿ, ಅದರ ಜವಾಬ್ದಾರಿ ಅವರೇ ತೆಗೆದುಕೊಳ್ಳಲಿ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ