ಆ್ಯಪ್ನಗರ

ಪರಶುರಾಮ್‌ ನೋಡಿ ಗಾಬರಿಯಾಗಿ ಗೋಡೆಗೆ ತಲೆ ಚಚ್ಚಿಕೊಂಡ ಕಾಳೆ

ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿಂದಗಿಯ ಆರೋಪಿ ಪರಶುರಾಮ್‌ ವಾಗ್ಮೋರೆ ಹಾಗೂ ಇತರ ನಾಲ್ವರು ಆರೋಪಿಗಳಾದ ಅಮೋಲ್‌ ಕಾಳೆ, ಮನೋಹರ್‌ ಯಡವೆ, ಸುಜೀತ್‌ ಕುಮಾರ್‌ ಮತ್ತು ಅಮಿತ್‌ ದೆಗ್ವೇಕರ್‌ರನ್ನು ಎಸ್‌ಐಟಿ ಅಧಿಕಾರಿಗಳು ಮುಖಾಮುಖಿ ಮಾಡಿಸಿ ಗುರುವಾರ ವಿಚಾರಣೆ ನಡೆಸಿದರು.

Vijaya Karnataka 15 Jun 2018, 7:59 am
ಬೆಂಗಳೂರು: ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿಂದಗಿಯ ಆರೋಪಿ ಪರಶುರಾಮ್‌ ವಾಗ್ಮೋರೆ ಹಾಗೂ ಇತರ ನಾಲ್ವರು ಆರೋಪಿಗಳಾದ ಅಮೋಲ್‌ ಕಾಳೆ, ಮನೋಹರ್‌ ಯಡವೆ, ಸುಜೀತ್‌ ಕುಮಾರ್‌ ಮತ್ತು ಅಮಿತ್‌ ದೆಗ್ವೇಕರ್‌ರನ್ನು ಎಸ್‌ಐಟಿ ಅಧಿಕಾರಿಗಳು ಮುಖಾಮುಖಿ ಮಾಡಿಸಿ ಗುರುವಾರ ವಿಚಾರಣೆ ನಡೆಸಿದರು.
Vijaya Karnataka Web Gauri


ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಗುರುವಾರ ಮುಕ್ತಾಯವಾಗುತ್ತಿದ್ದ ಕಾರಣ, ಪರಶುರಾಮ್‌ನನ್ನು ಅವರ ಎದುರು ಕರೆತಂದು ಈತನ ಪರಿಚಯ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪರಶುರಾಮ್‌ನನ್ನು ದಿಟ್ಟಿಸಿ ನೋಡಿದ ಅಮೋಲ್‌ ಕಾಳೆ, ಗಾಬರಿಗೊಂಡು ಗೋಡೆಗೆ ನಾಲ್ಕೈದು ಬಾರಿ ತಲೆ ಚಚ್ಚಿಕೊಂಡಿದ್ದಾನೆ. ಪ್ರಮುಖ ಆರೋಪಿಯಾಗಿರುವ ಪರಶುರಾಮ್‌ ಸಿಗುವುದಿಲ್ಲ ಎಂದು ಭಾವಿಸಿದ್ದೆವು. ಆದರೆ, ಆತನೂ ಸಿಕ್ಕನಲ್ಲ ಎಂಬ ಆತಂಕ ಆರೋಪಿಗಳ ಮುಖದಲ್ಲಿ ಇತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮೋಹನ್‌ ಗೌಡ ವಿಚಾರಣೆ ಸಾಧ್ಯತೆ

ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ಮುಖಂಡ ಮೋಹನ್‌ ಗೌಡ ವರನ್ನು ಎಸ್‌ಐಟಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ನಾಲ್ಕು ತಂಡಗಳ ಕಾರ್ಯಾಚರಣೆ

ಗೌರಿ ಲಂಕೇಶ್‌ ಹತ್ಯೆಗಾಗಿ ನಾಲ್ಕು ಪ್ರತ್ಯೇಕ ತಂಡಗಳು ಸುಮಾರು 1 ವರ್ಷಕ್ಕೂ ಹೆಚ್ಚು ಕಾಲದಿಂದ ಸಂಚು ರೂಪಿಸಿದ್ದವು ಎಂದು ತಿಳಿದು ಬಂದಿದೆ. ಈ ಪೈಕಿ ಒಂದು ತಂಡ ಗೌರಿ ಲಂಕೇಶ್‌ ಅವರನ್ನು ಬಹಳ ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸಿ ಅವರ ಹಿಂದೂ ವಿರೋಧಿ ಹೇಳಿಕೆಗಳು, ಪತ್ರಿಕೆಗಳಲ್ಲಿ ಬರೆದ ಲೇಖನಗಳು ಸೇರಿದಂತೆ ಇನ್ನಿತರ ಮಾಹಿತಿ ಕಲೆ ಹಾಕುತಿತ್ತು.

ಈ ಮಾಹಿತಿ ಪರಿಶೀಲನೆ ನಡೆಸುತ್ತಿದ್ದ ಎರಡನೇ ತಂಡ ಅದನ್ನು ಮೂರನೇ ತಂಡಕ್ಕೆ ರವಾನೆ ಮಾಡಿತ್ತು. ಅವರು ಗೌರಿ ಲಂಕೇಶ್‌ ಹತ್ಯೆಗೆ ಸ್ಕೆಚ್‌ ಹಾಕಿ ಸುಮಾರು ಆರು ತಿಂಗಳುಗಳ ಕಾಲ ಅವರ ಚಲನವಲನವನ್ನು ಸೂಕ್ಷ್ಮವಾಗಿ ಬೆನ್ನತ್ತಿದ್ದಾರೆ. ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳು ಹಾಗೂ ಅವುಗಳಿಂದ ಬಚಾವ್‌ ಆಗುವ ಕುರಿತು ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ನಾಲ್ಕನೇ ತಂಡಕ್ಕೆ ನೀಡಲಾಗಿದೆ. ಅಂತಿಮವಾಗಿ 2017ರ ಸೆಪ್ಟೆಂಬರ್‌ 5 ರಂದು ಮೂರು ಮತ್ತು ನಾಲ್ಕನೇ ತಂಡಗಳು ಸೇರಿ ಗುಂಡು ಹಾರಿಸಿ ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಚಿಕಿತ್ಸೆ ಕೊಡಿಸಲು ಕೋರಿಕೆ

ಬಂಧಿತ ಆರೋಪಿಗಳಿಗೆ ವಿಚಾರಣೆ ನೆಪದಲ್ಲಿ ಪೊಲೀಸರು ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಟ್ಟಿದ್ದಾರೆ. ಹೀಗಾಗಿ,ಆರೋಪಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಅಮೃತೇಶ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ