ಆ್ಯಪ್ನಗರ

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಗೆ ವಿಧಿಸಿದ್ದ 30 ಲಕ್ಷ ದಂಡದ ಆದೇಶ ರದ್ದು

ಅಕಾಡೆಮಿಯ ಬೈಲಾಗಳಲ್ಲಿ ನಿವೃತ್ತ ಸಿಬ್ಬಂದಿಗೆ ದಂಡ ವಿಧಿಸುವ ಅಧಿಕಾರವಿಲ್ಲದ ಕಾರಣ ನೀಡಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯರಿಗೆ 30 ...

Vijaya Karnataka 3 Aug 2019, 5:00 am
ಬೆಂಗಳೂರು: ಅಕಾಡೆಮಿಯ ಬೈಲಾಗಳಲ್ಲಿ ನಿವೃತ್ತ ಸಿಬ್ಬಂದಿಗೆ ದಂಡ ವಿಧಿಸುವ ಅಧಿಕಾರವಿಲ್ಲದ ಕಾರಣ ನೀಡಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯರಿಗೆ 30 ಲಕ್ಷ ರೂ. ದಂಡ ವಿಧಿಸಿ ಸಾಹಿತ್ಯ ಅಕಾಡೆಮಿಯ ಶಿಸ್ತು ಸಮಿತಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Vijaya Karnataka Web agrahara krishnamurthy


ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ‍್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ ವಿರುದ್ಧ ಶಿಸ್ತು ಸಮಿತಿ ದಂಡ ವಿಧಿಸಿ 2014ರ ಜೂ.3ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಪಿ.ಬಿ. ಭಜಂತ್ರಿ ಅವರಿದ್ದ ಏಕಸದಸ್ಯಪೀಠ ಇತ್ತೀಚೆಗೆ ಈ ಆದೇಶ ನೀಡಿದೆ.

''ನಿವೃತ್ತ ಅಧಿಕಾರಿಯ ವಿರುದ್ಧ ಅಕಾಡೆಮಿ ಆ ರೀತಿ ದಂಡ ವಿಧಿಸಿರುವುದು ಸರಿಯಲ್ಲ. ದಂಡ ವಿಧಿಸುವುದಾದರೆ ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವಿಧಿಸಬಹುದೇ ಹೊರತು ನಿವೃತ್ತ ಸಿಬ್ಬಂದಿಗಲ್ಲ. ಏಕೆಂದರೆ ಅಕಾಡೆಮಿಯ ಬೈಲಾಗಳಲ್ಲಿ ಆ ರೀತಿ ನಿವೃತ್ತ ಸಿಬ್ಬಂದಿಗೆ ದಂಡ ವಿಧಿಸುವ ಅಧಿಕಾರವಿಲ್ಲ,'' ಎಂದು ನ್ಯಾಯಪೀಠ ಹೇಳಿದೆ.

''ಅರ್ಜಿದಾರರು ಸೇವೆಯಲ್ಲಿದ್ದಾಗಲೇ ತನಿಖೆ ಆರಂಭಿಸಿದ್ದರೂ ಸಹ ನಿವೃತ್ತನಾದ ಮೇಲೆ ಆ ರೀತಿ ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಒಂದು ವೇಳೆ ಅಂತಹ ಕ್ರಮ ಕೈಗೊಂಡರೆ ಅದು ಕಾನೂನು ಬಾಹಿರವಾಗುತ್ತದೆ. ಇಲ್ಲಿಯೂ ಅದೇ ರೀತಿ ಆಗಿದೆ,''ಎಂದು ನ್ಯಾಯಪೀಠ ಕಾರಣವನ್ನು ನೀಡಿದೆ.

ಅರ್ಜಿದಾರರ ಪರ ವಕೀಲರು ''ನಿಯಮಗಳ ಪ್ರಕಾರ ನಿವೃತ್ತ ಸಿಬ್ಬಂದಿಯಿಂದ ದಂಡ ವಸೂಲು ಮಾಡಲು ಯಾವುದೇ ಅಧಿಕಾರವಿಲ್ಲ. ಜೊತೆಗೆ ಅರ್ಜಿದಾರರಿಗೆ ಆರೋಪಗಳಿಗೆ ಉತ್ತರಿಸಲು ಅವಕಾಶವೇ ನೀಡದೆ ಏಕಪಕ್ಷೀಯವಾಗಿ ಸಮಿತಿ ತೀರ್ಮಾನಿಸಿದೆ. ಹಾಗಾಗಿ ಶಿಸ್ತು ಸಮಿತಿ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ''ಎಂದು ನ್ಯಾಯಪೀಠವನ್ನು ಕೋರಿದ್ದರು.

ಮೇ 2006ರಲ್ಲಿ ಅಗ್ರಹಾರ ಕೃಷ್ಣಮೂರ್ತಿ ಸಾಹಿತ್ಯ ಅಕಾಡೆಮಿಯ ಕಾರ‍್ಯದರ್ಶಿಯಾಗಿ ನೇಮಕಗೊಂಡಿದ್ದರು. ಅವರು 2013ರ ಜ.30ರಂದು ಸೇವಾ ಅವಧಿ ಪೂರೈಸಿ ನಿವೃತ್ತರಾದರು. ಆದರೆ ಅದಕ್ಕೂ ಮುನ್ನವೇ 2012ರ ನವೆಂಬರ್‌ನಲ್ಲಿ ಅವರ ವಿರುದ್ಧ ಶಿಸ್ತು ಸಮಿತಿ ತನಿಖೆಯನ್ನು ಆರಂಭಿಸಿತ್ತು. ಆ ಸಮಿತಿ 2014ರ ಜೂ.3ರಂದು 30 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಹೈಕೋರ್ಟ್‌ 2014ರಲ್ಲಿಯೇ ತಡೆಯಾಜ್ಞೆ ನೀಡಿತ್ತು.

ಕೃಷ್ಣಮೂರ್ತಿ ಅವರು ಕಾರ್ಯಕ್ರಮಗಳಿಗೆ ನಿಗದಿಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದರು, ಅಧಿಕೃತ ಪ್ರವಾಸಗಳನ್ನು ಕೈಗೊಂಡು ಹಣ ದುರುಪಯೋಗ ಮಾಡಿಕೊಂಡರುಎಂದು ಆರೋಪಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ