ಆ್ಯಪ್ನಗರ

ಇಂದು ಕಚೇರಿಗೆ ಆಗಮನ ಸ್ಪೀಕರ್‌ ಮೇಲೆ ಎಲ್ಲರ ಕಣ್ಣು

ಸ್ಪೀಕರ್‌ ಅವರು ಮಂಗಳವಾರ ಕಚೇರಿಗೆ ಬರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ 10 ಶಾಸಕರು ಮಂಗಳವಾರ ವಾಪಸಾಗುವ ಸಾಧ್ಯತೆಗಳಿವೆ.

Vijaya Karnataka 9 Jul 2019, 5:30 am
ಬೆಂಗಳೂರು : ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಮ್ಯಾರಥಾನ್‌ ಸಭೆ ಹಾಗೂ ಹಲವು ಬಗೆಯ ಕಸರತ್ತು ನಡೆಸಿರುವುದರ ನಡುವೆಯೇ ಮಂಗಳವಾರ ಕಚೇರಿಗೆ ಆಗಮಿಸಲಿರುವ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
Vijaya Karnataka Web ರಮೇಶ್‌ ಕುಮಾರ್‌
ರಮೇಶ್‌ ಕುಮಾರ್‌


ದೋಸ್ತಿ ಪಕ್ಷಗಳ 13 ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳ ಬಗ್ಗೆ ಸ್ಪೀಕರ್‌ ಕೈಗೊಳ್ಳುವ ತೀರ್ಮಾನದೊಂದಿಗೆ ದೋಸ್ತಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ.

ಕಳೆದ ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ 9 ಹಾಗೂ ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು, ಅದಕ್ಕೂ ಮುನ್ನವೇ ಕಾಂಗ್ರೆಸ್‌ನ ಆನಂದ್‌ಸಿಂಗ್‌ ಅವರು ಸಹ ರಾಜೀನಾಮೆ ಸಲ್ಲಿಸಿದ್ದರು. ಇದುವರೆಗೂ 13 ಮಂದಿ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ.

ಶನಿವಾರ ಖುದ್ದಾಗಿ ಸ್ಪೀಕರ್‌ ಅವರನ್ನು ಭೇಟಿಯಾಗುವ ಅತೃಪ್ತ ಶಾಸಕರ ಪ್ರಯತ್ನ ವಿಫಲವಾಗಿತ್ತು. ಹೀಗಾಗಿ ಸ್ಪೀಕರ್‌ ಅವರ ಆಪ್ತ ಕಾರ್ಯದರ್ಶಿಗೆ ಎಲ್ಲರೂ ರಾಜೀನಾಮೆ ಪತ್ರ ಸಲ್ಲಿಸಿ ಸ್ವೀಕೃತಿ ಪಡೆದಿದ್ದಾರೆ. ಭಾನುವಾರ ರಜೆ ಇದ್ದ ಕಾರಣ ಕಚೇರಿಗೆ ಬರುವುದಿಲ್ಲ, ಸೋಮವಾರವೂ ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಚೇರಿಗೆ ಬರಲು ಸಾಧ್ಯವಾಗುವುದಿಲ್ಲ. ಮಂಗಳವಾರ ಕಚೇರಿಗೆ ಬರುವುದಾಗಿ ಸ್ಪೀಕರ್‌ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ನಡೆ ಅತ್ಯಂತ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಎಸ್‌.ಟಿ.ಸೋಮಶೇಖರ್‌, ಬಿ.ಸಿ.ಪಾಟೀಲ್‌, ಶಿವರಾಂ ಹೆಬ್ಬಾರ್‌, ಬೈರತಿ ಬಸವರಾಜು, ಮುನಿರತ್ನ ನಾಯ್ಡು, ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ, ಆನಂದ್‌ ಸಿಂಗ್‌, ಪ್ರತಾಪಗೌಡ ಪಾಟೀಲ್‌, ಜೆಡಿಎಸ್‌ನ ಎಚ್‌.ವಿಶ್ವನಾಥ್‌, ಕೆ.ಆರ್‌.ಪೇಟೆ ನಾರಾಯಣಗೌಡ, ಗೋಪಾಲಯ್ಯ ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ಬಳಿಕ ಖುದ್ದಾಗಿ ತಮ್ಮ ಮುಂದೆ ಹಾಜರಾಗಿ ಸ್ಪಷ್ಟನೆ ಕೊಡುವಂತೆ ಸ್ಪೀಕರ್‌ ನೋಟಿಸ್‌ ಜಾರಿಗೊಳಿಸುವ ಸಾಧ್ಯತೆಗಳಿವೆ.

ಈ ಮಧ್ಯೆ ಕಳೆದ ಫೆಬ್ರವರಿಯಲ್ಲಿ ಬಜೆಟ್‌ ಮಂಡನೆ ಸಂದರ್ಭದಲ್ಲಿ ಇದೇ ರೀತಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಅತೃಪ್ತ ಶಾಸಕರು ಮುಂಬೈ ಸೇರಿದ್ದರು. ಆ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ವಿಪ್‌ ಜಾರಿಗೊಳಿಸಲಾಗಿತ್ತು. ಆದರೆ ಈಗಿನ ಸಂಸದ ಡಾ.ಉಮೇಶ್‌ ಜಾಧವ್‌, ರಮೇಶ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ , ಬಿ.ನಾಗೇಂದ್ರ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅವರನ್ನು ಅನರ್ಹಗೊಳಿಸುವಂತೆ ಸಿಎಲ್‌ಪಿ ನಾಯಕರೂ ಆಗಿರುವ ಸಿದ್ದರಾಮಯ್ಯ ದೂರು ಸಲ್ಲಿಸಿದ್ದರು. ಒಂದೆರಡು ಸಲ ವಿಚಾರಣೆ ನಡೆದ ಸಂದರ್ಭದಲ್ಲೇ ಲೋಕಸಭೆ ಚುನಾವಣೆಯೂ ಘೋಷಣೆಯಾಯಿತು. ಈ ಎಲ್ಲದರ ನಡುವೆಯೇ ಚಿಂಚೋಳಿ ಶಾಸಕರಾಗಿದ್ದ ಉಮೇಶ್‌ ಜಾಧವ್‌ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಅಂಗೀಕರಿಸಿದ್ದರು. ಉಳಿದವರ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಹೀಗಾಗಿ ಹಳೆ ಪ್ರಕರಣಗಳ ಕಡತಗಳನ್ನು ಸ್ಪೀಕರ್‌ ಪರಿಶೀಲಿಸುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ