ಆ್ಯಪ್ನಗರ

ಲೋಕಸಭೆ ಚುನಾವಣೆಗೆ ಮೈತ್ರಿ: ಜೆಡಿಎಸ್‌ಗೆ ಗರಿಷ್ಠ ಲಾಭ, ಕಾಂಗ್ರೆಸ್‌ಗೆ ನಷ್ಟವೇ ಹೆಚ್ಚು

2019ರ ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಹೈಕಮಾಂಡ್‌ ನಿರ್ಧಾರದಿಂದ ರಾಜ್ಯ ಕಾಂಗ್ರೆಸ್‌ ಮುಖಂಡರು ತೀವ್ರ ಆತಂಕಗೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜತೆ ಕೈಜೋಡಿಸಿದರೆ ಕಾಂಗ್ರೆಸ್‌ ಪಾಲಿಗೆ ಭಾರೀ ಹಾನಿಯಾಗಲಿದ್ದು, ಜೆಡಿಎಸ್‌ಗೆ ಮಾತ್ರ ಲಾಭವಾಗಬಹುದು ಎಂಬ ಆತಂಕ ರಾಜ್ಯ ನಾಯಕರನ್ನು ಕಾಡುತ್ತಿದೆ.

Vijaya Karnataka Web 6 Jun 2018, 1:03 pm
ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಹೈಕಮಾಂಡ್‌ ನಿರ್ಧಾರದಿಂದ ರಾಜ್ಯ ಕಾಂಗ್ರೆಸ್‌ ಮುಖಂಡರು ತೀವ್ರ ಆತಂಕಗೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜತೆ ಕೈಜೋಡಿಸಿದರೆ ಕಾಂಗ್ರೆಸ್‌ ಪಾಲಿಗೆ ಭಾರೀ ಹಾನಿಯಾಗಲಿದ್ದು, ಜೆಡಿಎಸ್‌ಗೆ ಮಾತ್ರ ಲಾಭವಾಗಬಹುದು ಎಂಬ ಆತಂಕ ರಾಜ್ಯ ನಾಯಕರನ್ನು ಕಾಡುತ್ತಿದೆ.
Vijaya Karnataka Web Rahul-HDK


ಅವರ ಆತಂಕಕ್ಕೆ ಕಾರಣವಿಲ್ಲದೆ ಇಲ್ಲ. ಯಾಕೆಂದರೆ ಸದ್ಯ ಜೆಡಿಎಸ್‌ ಅಸ್ತಿತ್ವವಿರುವುದು ಹಳೆಯ ಮೈಸೂರು ಪ್ರಾಂತ್ಯದಲ್ಲಿ ಮಾತ್ರ. ಈ ಭಾಗದಲ್ಲಿ ಎರಡು ದಶಕಗಳಿಂದ ಕಾಂಗ್ರೆಸ್‌ಗೆ ಜೆಡಿಎಸ್ಸೇ ಅತಿದೊಡ್ಡ ಎದುರಾಳಿ. ಈ ಪ್ರಾಂತ್ಯದಲ್ಲಿ ಬಿಜೆಪಿ ಇನ್ನೂ ಗಟ್ಟಿಯಾಗಿ ನೆಲೆಯೂರಿಲ್ಲ.

ಈ ಮೈತ್ರಿಯಿಂದಾಗಿ ಈ ಭಾಗದಲ್ಲಿ ಕಾಂಗ್ರೆಸ್‌ ಬೆಳೆಸಿಕೊಂಡು ಬಂದ ವೋಟ್‌ ಬ್ಯಾಂಕ್‌ ಅನ್ನು ಜೆಡಿಎಸ್‌ ಸುಲಭವಾಗಿ ದೋಚಬಹುದು. ಅಲ್ಲದೆ ಈ ಪ್ರಾಂತ್ಯದ ಹೊರತಾಗಿ ಉಳಿದ ಭಾಗಗಳಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಆಗುವ ಲಾಭ ಅಷ್ಟಕ್ಕಷ್ಟೆ. ಯಾಕೆಂದರೆ ಅಲ್ಲೆಲ್ಲ ಜೆಡಿಎಸ್‌ಗೆ ಅಸ್ತಿತ್ವವೇ ಇಲ್ಲ. ಅಲ್ಲೆಲ್ಲ ಬಿಜೆಪಿಯೇ ಪ್ರಬಲ ಎದುರಾಳಿಯಾಗಿದ್ದು, ಅದರ ವಿರುದ್ಧ ಸೆಣಸಲು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಯಾವುದೇ ನೆರವು ಸಿಗಲಾರದು.

2009ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಮತ ಗಳಿಕೆ ಪ್ರಮಾಣ ಶೇ 13 ಆಗಿತ್ತು. 2014ರಲ್ಲಿ ಅದು ಶೇ 11ಕ್ಕೆ ಕುಸಿಯಿತು. ಜೆಡಿಎಸ್‌ ಪಾಲಿನ ಶೇ 75ರಷ್ಟು ಮತಗಳು ಹಳೆ ಮೈಸೂರು ಪ್ರಾಂತ್ಯದಿಂದಲೇ ಬಂದಿವೆ. ಇತರ ಭಾಗಗಳಲ್ಲಿ ಅದರ ಪಾಲು ನಗಣ್ಯವಾಗಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಂತೂ ಜೆಡಿಎಸ್‌ ಮತಗಳಿಕೆ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆಯಿದೆ.

'ಈ ಅಂಕಿ-ಅಂಶಗಳನ್ನು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಾಗದು' ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್.

ಎಲ್ಲಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಳೆ ಮೈಸೂರು ಪ್ರಾಂತ್ಯದ ಎರಡು ಕ್ಷೇತ್ರಗಳನ್ನು ಗೆಲ್ಲಲು ಜೆಡಿಎಸ್ ಅನ್ನೇ ಅವಲಂಬಿಸಬೇಕಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಂಡಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಭಾಗದ 9 ಸ್ಥಾನಗಳ ಪೈಕಿ 5 ಕ್ಷೇತ್ರಗಳನ್ನು ಬಾಚಿಕೊಂಡಿತ್ತು. 2009ರಲ್ಲಿ ಆರು ಕ್ಷೇತ್ರಗಳ ಪೈಕಿ ನಾಲ್ಕನ್ನು ಈ ಪ್ರಾಂತ್ಯದಿಂದಲೇ ಗೆದ್ದುಕೊಂಡಿತ್ತು. ಜೆಡಿಎಸ್‌ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಹಳೆ ಮೈಸೂರಿನ ಹೊರಗೆ ಯಾವುದೇ ಸ್ಥಾನ ಗೆದ್ದಿಲ್ಲ.

ಇದರಿಂದಾಗಿ ಸ್ಥಾನಗಳ ಹೊಂದಾಣಿಕೆ ತೀವ್ರ ಬಿಕ್ಕಟ್ಟು ಸೃಷ್ಟಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರದ ಐದು ಕ್ಷೇತ್ರಗಳ ಪೈಕಿ ಯಾವುದನ್ನೂ ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ಧವಿಲ್ಲ. ಈಗಾಗಲೇ ಜೆಡಿಎಸ್ ಕೈನಲ್ಲಿರುವ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಮಾತ್ರವೇ ಬಿಟ್ಟುಕೊಡಲು ಸಾಧ್ಯ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.

ಒಕ್ಕಲಿಗರ ಪ್ರಾಬಲ್ಯದ ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಒತ್ತಡ ಹೇರಿದರೆ ಕಾಂಗ್ರೆಸ್‌ ರಾಜಿ ಮಾಡಿಕೊಳ್ಳುವುದು ಕಷ್ಟ ಎನ್ನುತ್ತಾರೆ ಮಹದೇವ ಪ್ರಕಾಶ್‌.

ಹಾಗಿದ್ದರೂ ಕಾಂಗ್ರೆಸ್‌ ನಾಯಕ ವಿ.ಎಸ್‌. ಉಗ್ರಪ್ಪ ಅವರ ಪ್ರಕಾರ, ಈ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭವಿದೆ. 'ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸೀಟುಗಳನ್ನು ಕೇಳಲಾರದು ಎಂಬ ಭರವಸೆ ನನಗಿದೆ' ಎನ್ನುತ್ತಾರೆ ಉಗ್ರಪ್ಪ.

Read this in English

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ