ಆ್ಯಪ್ನಗರ

ಅಂಬರೀಶ್‌ ಕೊಕ್‌ ಚಿತ್ರರಂಗ ಬಂದ್‌: ಎಚ್ಚರಿಕೆ

ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್‌ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಚಿತ್ರ ನಿರ್ಮಾಪಕರು ತೀವ್ರವಾಗಿ ಖಂಡಿಸಿದ್ದಾರೆ.

ವಿಕ ಸುದ್ದಿಲೋಕ 20 Jun 2016, 4:55 am
ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್‌ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಚಿತ್ರ ನಿರ್ಮಾಪಕರು ತೀವ್ರವಾಗಿ ಖಂಡಿಸಿದ್ದಾರೆ.
Vijaya Karnataka Web ambarish dropped film industry warning
ಅಂಬರೀಶ್‌ ಕೊಕ್‌ ಚಿತ್ರರಂಗ ಬಂದ್‌: ಎಚ್ಚರಿಕೆ


‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಶ್‌ ಅವರನ್ನು ಕೈಬಿಡುವ ಮೂಲಕ ಚಿತ್ರರಂಗಕ್ಕೆ ದ್ರೋಹ ಬಗೆದಿದ್ದಾರೆ. ಯಾವುದೇ ಆಪಾದನೆ ಅಥವಾ ಭ್ರಷ್ಟಾಚಾರ ಆರೋಪ ಎದುರಿಸದ ಅಂಬರೀಶ್‌ ಅವರನ್ನು ಕೈಬಿಟ್ಟಿರುವುದು ಏಕೆ? ಈ ನಿರ್ಧಾರದ ವಿರುದ್ಧ ಚಿತ್ರರಂಗ ಒಗ್ಗೂಡಿ ಹೋರಾಟ ನಡೆಸಲಿದೆ,’’ ಎಂದು ನಿರ್ಮಾಪಕ ಕೆ.ಮಂಜು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಎಚ್ಚರಿಕೆ ನೀಡಿದರು.

ನಿರ್ಮಾಪಕ ಕೆ. ಎಂ. ವೀರೇಶ್‌ ಮಾತನಾಡಿ ‘‘ಚಿತ್ರರಂಗದ ಯಾವುದೇ ಸಮಸ್ಯೆಗೆ ಸ್ಪಂದಿಸುವ ಅಂಬರೀಷ್‌ ಬಡ ಜನರ ಸೇವೆ ಮಾಡಿದವರು. ಅವರಿಂದ ಚಿತ್ರರಂಗಕ್ಕೆ ಹಲವು ಕಾರ್ಯಗಳು ಆಗಬೇಕಿದೆ. ಹೀಗಾಗಿ ಕೂಡಲೇ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಚಿತ್ರೋದ್ಯಮದ ಚಟುವಟಿಕೆ ಸ್ಥಗಿತಗೊಳಿಸಿ ಒಂದು ದಿನದ ಮಟ್ಟಿಗೆ ಚಿತ್ರರಂಗ ಬಂದ್‌ ಮಾಡುತ್ತೇವೆ,’’ ಎಂದು ಎಚ್ಚರಿಕೆ ನೀಡಿದರು.

‘‘ಈ ಸಂಬಂಧ ಜೂ.20ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರರಂಗದ ಗಣ್ಯರನ್ನು ಒಳಗೊಂಡ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,’’ ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ಮಾಪಕರಾದ ಎಂ.ಜಿ. ರಾಮಮೂರ್ತಿ, ಬಾಮಾ ಹರೀಶ್‌, ಬಾಮಾ ಗಿರೀಶ್‌, ಎನ್‌.ಎಂ. ಸುರೇಶ್‌, ನಟಿ ಪ್ರಮೀಳಾ ಜೋಷಾಯಿ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಚಿತ್ರರಂಗದ ಕೆಲ ನಿರ್ಮಾಪಕರು ಮೌನ ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ