ಆ್ಯಪ್ನಗರ

ಅಮೋಲ್‌ ಕಾಳೆ, ಪರಶುರಾಮ್‌ ಡಿಎನ್‌ಎ ಮಾದರಿ ಸಂಗ್ರಹ

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Vijaya Karnataka 16 Jun 2018, 7:43 am
ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Vijaya Karnataka Web Wagmore


ಆರೋಪಿಗಳು ನಂ.94, ಸಾಯಿಲಕ್ಷ್ಮಿ ಲೇಔಟ್‌, ಕಡಬಗೆರೆ, ಮಾಗಡಿ ರಸ್ತೆಯ ಮನೆಯಲ್ಲಿ ತಂಗಿದ್ದರು. ಇಲ್ಲಿ ಕೂದಲು ಸೇರಿದಂತೆ ಕೆಲವು ಸಂಶಯಾಸ್ಪದ ವಸ್ತುಗಳು ದೊರೆತಿವೆ.ಅಮೋಲ್‌ ಕಾಳೆ ಮತ್ತು ಅಮಿತ್‌ ದೇಗ್ವೇಕರ್‌ ಅವರನ್ನೂ ಸೇರಿಸಿ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ಬೇಕಾದ ಮಾದರಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಪಡೆದುಕೊಂಡಿದ್ದಾರೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.

ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪ್ರಕರಣವಾಗಿದ್ದು ದಾದಾ ಅಲಿಯಾಸ್‌ ನಿಹಾಲ್‌ ಹೆಸರಿನ ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈತನನ್ನು ರಕ್ಷಿಸುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಅಲ್ಲದೆ ಅಮೋಲ್‌ ಕಾಳೆ ಮತ್ತು ಪರಶುರಾಮ್‌ ಅವರ ಪಾದದ ಗುರುತು ಸೇರಿದಂತೆ ಈತನ ದೇಹದ ಹಲವು ಗುರುತುಗಳನ್ನು ತೆಗೆದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ನಾನಾ ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.

ಇನ್ನೂ ಮೂವರ ಸ್ಕೆಚ್‌ ಸಿದ್ಧ

ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾದ ಬಗ್ಗೆ ವಾಗ್ಮೋರೆ ಸುಳಿವು ನೀಡಿದ್ದು, ಆತ ನೀಡಿದ ಚಹರೆ ಆಧರಿಸಿ ಕಲಾವಿದರು ಬಿಡಿಸಿದ ರೇಖಾಚಿತ್ರಗಳನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ವಿಡಿಯೊ ಚಿತ್ರೀಕರಣ

ಪರಶುರಾಮ್‌ ವಾಗ್ಮೋರೆಯ ವಿಚಾರಣೆಯನ್ನು ಎಸ್‌ಐಟಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದೆ. ಡೈರಿಯಲ್ಲಿನ ಮಾಹಿತಿ ತಿಳಿಯಲು ಆರೋಪಿಗಳ ಮಾದರಿ ಕೈಬರವಣಿಗೆಯನ್ನು ಪಡೆದು ಕೈಬರಹ ತಜ್ಞರಿಗೆ ಕಳುಹಿಸಲಾಗಿದೆ. ಅದೇ ರೀತಿ ಆರೋಪಿಗಳ ಧ್ವನಿ ಮಾದರಿಯನ್ನೂ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂಬ ಪ್ರತೀ ಹಂತದ ಮಾಹಿತಿಯನ್ನು ಎಸ್‌ಐಟಿ ನ್ಯಾಯಾಲಯದ ಮುಂದೆ ನಿವೇದಿಸಿಕೊಂಡಿದೆ.

ಕಾಳೆಗೆ ಸುಳ್ಳು ಪತ್ತೆ ಪರೀಕ್ಷೆ

ಮಹಾರಾಷ್ಟ್ರದ ಅಮೋಲ್‌ ಕಾಳೆ ಮತ್ತು ಅಮಿತ್‌ ದೇಗ್ವೇಕರ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಆರೋಪಿಗಳು ತನಿಖೆಗೆ ಸಹಕರಿಸದೆ ಕೆಲವು ಸತ್ಯಾಂಶಗಳನ್ನು ಮುಚ್ಚಿಟ್ಟಿದ್ದಾರೆ. ತಾಂತ್ರಿಕ ಸಾಕ್ಷ್ಯಗಳಲ್ಲಿ ಇರುವ ಸತ್ಯಗಳ ಬಗ್ಗೆಯೂ ಇವರು ತುಟಿ ಬಿಚ್ಚುತ್ತಿಲ್ಲ . ಹೀಗಾಗಿ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ