ಬೆಂಗಳೂರು : ಅನ್ನ ಭಾಗ್ಯದಡಿ ವಿತರಿಸುತ್ತಿರುವ ಅಕ್ಕಿ ಕುರಿತ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟ ಪಡಿಸಿದ್ದಾರೆ.
''ಅಕ್ಕಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಕಾರ್ಬೋಹೈಡ್ರೇಟ್ಸ್ ಇದೆ. ಆದರೆ, ಪರಿಪೂರ್ಣ ಆರೋಗ್ಯಕ್ಕೆ ಅದು ಮಾತ್ರ ಸಾಕಾಗುವುದಿಲ್ಲ. ಪ್ರೋಟೀನ್ಸ್ ಮತ್ತು ಜೀವಸತ್ವಗಳು ಪಾಲಿಷ್ ಅಕ್ಕಿಯಲ್ಲಿ ಅವಶ್ಯ ಪ್ರಮಾಣದಲ್ಲಿ ಇರುವುದಿಲ್ಲ. ಈ ಕೊರತೆ ನೀಗಿಸಲು 1 ಕೆ.ಜಿ. ತೊಗರಿ ಬೇಳೆ ನೀಡುವುದು ಸೂಕ್ತ. ಇದಕ್ಕೆ ಕೇಂದ್ರವೂ ನೆರವು ನೀಡಿದರೆ ಉತ್ತಮ ಎನ್ನುವ ಹೇಳಿಕೆ ನೀಡಲಾಗಿತ್ತು ಆದರೆ, ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ,'' ಎಂದು ಲಿಖಿತ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
''ನನ್ನ ಮತಕ್ಷೇತ್ರವಾದ ಶಿರಾದಲ್ಲಿ ನಡೆಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ (ಡಯಾಬಿಟೀಸ್ ಟೈಪ್-2) ಸಮಸ್ಯೆ ಏರುಮುಖವಾಗಿರುವುದು ಗಮನಕ್ಕೆ ಬಂದಿದೆ. ಪಾಲಿಷ್ ಆಗಿರುವ ಅಕ್ಕಿ ತಿನ್ನುವುದೂ ಇದಕ್ಕೆ ಕಾರಣವಿರಬಹುದು. ಹಾಗಾಗಿ ಅಕ್ಕಿಯೊಂದಿಗೆ ತೊಗರಿ ಬೇಳೆ ಕೊಡಲು ಚಿಂತನೆ ನಡೆಸಲಾಗುತ್ತಿರುವುದಾಗಿ ಮಾಧ್ಯಮದವರಿಗೆ ತಿಳಿಸಲಾಗಿತ್ತು,'' ಎಂದು ಹೇಳಿದ್ದಾರೆ.