ಆ್ಯಪ್ನಗರ

ಅನ್ನಭಾಗ್ಯಕ್ಕೆ ಕನ್ನ , ತನಿಖೆಗೆ ಆದೇಶಿಸಿದ ಸಚಿವೆ ಶಶಿಕಲಾ ಜೊಲ್ಲೆ

ಅನ್ನಭಾಗ್ಯ ಯೋಜನೆ ಅಕ್ಕಿ ದುರುಪಯೋಗ ಬಗ್ಗೆ 'ವಿಕ' ರಿಯಾಲಿಟಿ ಚೆಕ್‌ಗೆ ಆಹಾರ-ನಾಗರಿಕ ಪೂರೈಕೆ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಶ್ಲಾಘನೆ. ವಾರದಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ, ಅಕ್ಕಿ ಪ್ರಮಾಣ 2 ಕೆ.ಜಿ ಇಳಿಸಲು ಚಿಂತನೆ.

Vijaya Karnataka Web 14 Jan 2020, 10:58 am
ಬೆಂಗಳೂರು: ಅನ್ನ ಭಾಗ್ಯ ಯೋಜನೆ ಅಕ್ಕಿಯ ದುರುಪಯೋಗ ಬಗ್ಗೆ ವಿಜಯ ಕರ್ನಾಟಕ ನಡೆಸಿದ ರಿಯಾಲಿಟಿ ಚೆಕ್‌ ವರದಿಯಿಂದ ರಾಜ್ಯ ಸರಕಾರ ತಕ್ಷಣ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಶಶಿಕಲಾ ಜೊಲ್ಲೆಆದೇಶ ನೀಡಿದ್ದಾರೆ.
Vijaya Karnataka Web Shashikala Jolle


''ಪತ್ರಿಕೆಯಲ್ಲಿ ಪ್ರಕಟವಾದ ವರದಿ ಓದುತ್ತಿದ್ದಂತೆಯೇ ಇಲಾಖೆ ಕಾರ್ಯದರ್ಶಿ ಮಂಜುಳಾ ಅವರಿಗೆ ಕರೆ ಮಾಡಿ ತನಿಖೆಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ವಾರದೊಳಗಾಗಿ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ,'' ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

'ವಿಜಯ ಕರ್ನಾಟಕ'ದ ಜತೆ ಮಾತನಾಡಿದ ಅವರು, 'ಕಳೆದ ಹದಿನೈದು ದಿವಸದ ಅವಧಿಯಲ್ಲಿ ನಾನು ಹತ್ತು ಜಿಲ್ಲೆಗಳಿಗೆ ಭೇಟಿ ನೀಡಿ ಅನ್ನಭಾಗ್ಯ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲ ಕಡೆಯಿಂದಲೂ ದೂರುಗಳು ಬಂದಿವೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ ಬದಲು ಗೋಧಿ ಹಾಗೂ ಬೇಳೆ-ಕಾಳು ನೀಡುವಂತೆ ಮನವಿ ಮಾಡಿದ್ದರು. ಇದೆಲ್ಲವನ್ನು ಆಧರಿಸಿ ಯೋಜನೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಇಲಾಖಾ ಹಂತದಲ್ಲಿ ಚಿಂತನೆ ನಡೆಸಲಾಗಿತ್ತು. ಅಷ್ಟರಲ್ಲೇ ಪತ್ರಿಕೆ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸುವ ಮೂಲಕ ಹಗರಣದ ವ್ಯಾಪ್ತಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದೆ,'' ಎಂದು ಹೇಳಿದರು.

ಇಲ್ಲಿಯ 'ಅನ್ನ ಭಾಗ್ಯ'; ಆಂಧ್ರ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಔತಣ ಭಾಗ್ಯ!

''ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಗುಜರಾತ್‌, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಗೆ ಸಾಗಣೆ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ತನಿಖೆಯಲ್ಲಿಈ ಬಗ್ಗೆಯೂ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡುತ್ತೇನೆ,'' ಎಂದು ಸ್ಪಷ್ಟಪಡಿಸಿದರು.

ಪಶ್ಚಿಮ ಘಟ್ಟಗಳ ಮೇಲೆ ನಿಲ್ಲದ ದೌರ್ಜನ್ಯ: 16 ಲಕ್ಷ 85 ಸಾವಿರ ಮರಗಳ ನಾಶಕ್ಕೆ 24 ಯೋಜನೆ ಸಿದ್ಧ!

''ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಇಳಿಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಯನ್ನು ಹೆಚ್ಚಾಗಿ ಬಳಸುವುದಿಲ್ಲ. ಹೆಚ್ಚಾಗಿ ಸಂಗ್ರಹವಾದದ್ದನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಕಾಳಸಂತೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಅಗತ್ಯ ಇರುವಷ್ಟೇ ಅಕ್ಕಿ ಕೊಟ್ಟು ಉಳಿದ ಪ್ರಮಾಣದಲ್ಲಿ ಗೋಧಿ, ಬೇಳೆ, ಕಾಳು ನೀಡುವ ಬಗ್ಗೆ ಚಿಂತನೆ ನಡೆದಿದೆ. ಆದಷ್ಟು ಬೇಗ ಈ ಪ್ರಯೋಗವನ್ನು ಜಾರಿಗೆ ತರಲಾಗುತ್ತದೆ. ಸದ್ಯದಲ್ಲೇ ಸಿಎಂ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡುತ್ತೇನೆ,'' ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಶೀಘ್ರವೇ ಭೂ ನ್ಯಾಯಮಂಡಳಿ ಅಸ್ತಿತ್ವಕ್ಕೆ: ಭೂ ಮಂಜೂರಾತಿಗೆ ರೈತರ ಅಲೆದಾಟಕ್ಕೆ ಕೊನೆ!

''ಅಕ್ರಮದ ಬಗ್ಗೆ ಬೆಳಕು ಚೆಲ್ಲುವ ಮೂಲಕ 'ವಿಜಯ ಕರ್ನಾಟಕ' ಪತ್ರಿಕೆ ಶ್ಲಾಘನೀಯ ಕೆಲಸ ಮಾಡಿದೆ. ಜನರ ತೆರಿಗೆ ಹಣದಲ್ಲಿ ಅನುಷ್ಠಾನವಾಗುತ್ತಿರುವ ಈ ಯೋಜನೆಯಲ್ಲಿ ಅವ್ಯವಹಾರ ನಡೆಯುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
- ಶಶಿಕಲಾ ಜೊಲ್ಲೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ