ಆ್ಯಪ್ನಗರ

ಶಾಸಕರ ಮೇಲೆ ಪಕ್ಷಾಂತರ ಕಾಯ್ದೆಯ ತೂಗುಗತ್ತಿ

ಶನಿವಾರ ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವುದೇ ಪಕ್ಷದ ಶಾಸಕರು ತಮ್ಮ ಪಕ್ಷದ ಸೂಚನೆಗೆ ವಿರುದ್ಧವಾಗಿ ಮತ ಚಲಾಯಿಸಿದರೆ ಇಲ್ಲವೇ ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆಗೆ ಒಳಗಾಗಬೇಕಾಗುತ್ತದೆ.

Vijaya Karnataka 19 May 2018, 8:04 am
ಬೆಂಗಳೂರು: ಶನಿವಾರ ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವುದೇ ಪಕ್ಷದ ಶಾಸಕರು ತಮ್ಮ ಪಕ್ಷದ ಸೂಚನೆಗೆ ವಿರುದ್ಧವಾಗಿ ಮತ ಚಲಾಯಿಸಿದರೆ ಇಲ್ಲವೇ ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆಗೆ ಒಳಗಾಗಬೇಕಾಗುತ್ತದೆ.
Vijaya Karnataka Web Vidhan Saudha.


1985ರಲ್ಲಿ 52ನೇ ತಿದ್ದುಪಡಿ ಮೂಲಕ ಸಂವಿಧಾನದ 10ನೇ ಷೆಡ್ಯೂಲ್‌ನಲ್ಲಿ ಸೇರಿಸಿರುವಂತೆ ರಾಜಕೀಯ ಪಕ್ಷಗಳ ಯಾವುದೇ ಶಾಸಕ ಪಕ್ಷದ ವಿಪ್‌ ಉಲ್ಲಂಘಿಸಿದರೆ ಸದಸ್ಯತ್ವ ಸ್ಥಾನಕ್ಕೆ ಕುತ್ತು ಬರಲಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಾಗಿ ಮತ ಚಲಾಯಿಸುವಂತೆ ನಿರ್ದೇಶನ ನೀಡಿರುವುದರಿಂದ ಶನಿವಾರ ಗೈರು ಹಾಜರಾದರೂ ನ್ಯಾಯಾಂಗ ನಿಂದನೆ ಆಗಲಿದೆ. ಹೀಗಾಗಿ ಶನಿವಾರದ ವಿಶ್ವಾಸಮತಯಾಚನೆ ವೇಳೆ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಯಾರಾದರೂ ಶಾಸಕರು ತಮ್ಮ ಪಕ್ಷಗಳ ಸೂಚನೆಗೆ ವಿರುದ್ಧವಾಗಿ ಮತ ಹಾಕಿದರೆ ಇಲ್ಲವೇ ಗೈರು ಹಾಜರಾದರೆ ಸದಸ್ಯತ್ವ ಕಳೆದುಕೊಳ್ಳುವುದು ನಿಶ್ಚಿತ. ಒಂದು ವೇಳೆ ಗೈರು ಹಾಜರಾದರೂ ಗಂಭೀರ ಸ್ವರೂಪದ ಕಾರಣಗಳಿದ್ದಲ್ಲಿ ಮಾತ್ರ ಇದರಿಂದ ಬಚಾವ್‌ ಆಗಬಹುದು.

ಹಂಗಾಮಿ ಸಭಾಧ್ಯಕ್ಷರು ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ. ಕಾಯಂ ಸಭಾಧ್ಯಕ್ಷರು ಆಯ್ಕೆಯಾದ ಬಳಿಕ ಅವರಿಗೆ ಸಂಬಂಧಪಟ್ಟ ಪಕ್ಷವು ಮನವಿ ಸಲ್ಲಿಸಿ ತಮ್ಮ ಪಕ್ಷದ ಇಂಥ ಸದಸ್ಯಇಂಥ ದಿನ ವಿಪ್‌ ಉಲ್ಲಂಘಿಸಿದ್ದು ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಕೋರಿದಾಗ ವಾದ-ಪ್ರತಿವಾದದ ಬಳಿಕ ಕ್ರಮ ಕೈಗೊಳ್ಳಲು ಅವಕಾಶವಿದೆ. ಅನರ್ಹಗೊಂಡ ಶಾಸಕ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಮತ್ತೆ ನಡೆಯುವ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.

ಅಧಿವೇಶನ ಕರೆಯಲು ಸೂಚಿಸಿದ ಸಿಎಂ

ಬೆಂಗಳೂರು: ವಿಶ್ವಾಸಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ ಕೇವಲ ದಿನದ ಗುಡುವು ನೀಡುತ್ತಿದ್ದಂತೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತುರ್ತು ಸಚಿವ ಸಂಪುಟದ ಸಭೆ ನಡೆಸಿ, ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಕರೆಯಲು ನಿರ್ಧರಿಸಿದರು.

ಏಕವ್ಯಕ್ತಿ ಸಂಪುಟ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ತುರ್ತು ಅಧಿವೇಶನದ ಸಿದ್ಧತೆಗೆ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸೂಚನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ''ಕೋರ್ಟ್‌ ನಿರ್ದೇಶನ ಆಧರಿಸಿ ತುರ್ತು ಸಂಪುಟ ಸಭೆ ನಡೆಸಿ ಶನಿವಾರ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಸಂಪುಟದ ಈ ತೀರ್ಮಾನವನ್ನು ರಾಜ್ಯಪಾಲರಿಗೆ ಕಳಿಸಿಕೊಡಲಾಗುವುದು ಮತ್ತು ಹಂಗಾಮಿ ಸ್ಪೀಕರ್‌ ಆಯ್ಕೆ ಕುರಿತಂತೆ ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಿಕೊಡಲಾಗುವುದು'' ಎಂದು ತಿಳಿಸಿದರು. ಸುಮಾರು 20 ನಿಮಿಷಗಳಲ್ಲೇ ವಿಧಾನಸೌಧದ ಕಚೇರಿಯಿಂದ ಸಿಎಂ ಹೊರಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ