ಆ್ಯಪ್ನಗರ

ಸಂಪುಟ ಸಭೆಯಲ್ಲಿ ರೇವಣ್ಣ- ಪರಂ ಜಟಾಪಟಿ, ಡಿಸಿಎಂಗೆ ಡಿಕೆಶಿ, ವಾಸು, ವೆಂಕಟರಮಣಪ್ಪ ಸಾಥ್‌

ಹಾಸನ ಜಿಲ್ಲೆಯ ಕೆಲ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಕೆಲ ವಿಷಯಗಳನ್ನು ಹೆಚ್ಚುವರಿಯಾಗಿ ಸಂಪುಟ ಸಭೆಯಲ್ಲಿ ಮಂಡಿಸಲು ರೇವಣ್ಣ ಯತ್ನಿಸಿದಾಗ ತಾಳ್ಮೆಕಳೆದುಕೊಂಡ ಡಿಸಿಎಂ ಪರಮೇಶ್ವರ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka 5 Dec 2018, 11:58 pm
ಬೆಂಗಳೂರು : ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವರ್ತನೆ ವಿರುದ್ಧ ಮಡುಗಟ್ಟಿದ್ದ ಸಚಿವರ ಆಕ್ರೋಶ ಬುಧವಾರದ ಸಚಿವ ಸಂಪುಟ ಸಭೆಯಲ್ಲಿ ಸ್ಫೋಟಗೊಂಡಿದ್ದು, ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲೇ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
Vijaya Karnataka Web ಪರಮೇಶ್ವರ್
ಪರಮೇಶ್ವರ್


ಹೇಮಾವತಿಯಿಂದ ತುಮಕೂರಿಗೆ ನೀರು ಬಿಡುವುದಕ್ಕೆ ವಿರೋಧ ವ್ಯಕ್ತಪಡಿಸುವುದರ ಜತೆಗೆ ಹಾಸನ ಜಿಲ್ಲೆಯ ಕೆಲ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಕೆಲ ವಿಷಯಗಳನ್ನು ಹೆಚ್ಚುವರಿಯಾಗಿ ಸಂಪುಟ ಸಭೆಯಲ್ಲಿ ಮಂಡಿಸಲು ರೇವಣ್ಣ ಯತ್ನಿಸಿದಾಗ ತಾಳ್ಮೆಕಳೆದುಕೊಂಡ ಡಿಸಿಎಂ ಪರಮೇಶ್ವರ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೇಮಾವತಿ ವಿಚಾರದಲ್ಲಂತೂ ತುಮಕೂರು ಜಿಲ್ಲೆಯ ಎಲ್ಲಾ ಸಚಿವರು ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ರೇವಣ್ಣ ಚೀರಾಟ ನಡೆಸಿದಾಗ ವಿಧಿ ಇಲ್ಲದೇ ಮಧ್ಯ ಪ್ರವೇಶ ಮಾಡಿದ ಸಿಎಂ ಕುಮಾರಸ್ವಾಮಿ ಸೋದರನಿಗೆ ಸಾಂತ್ವನ ಹೇಳಿದ್ದಾರೆ. ಆದರೆ ತಮ್ಮ ಪ್ರಯತ್ನಕ್ಕೆ ಹಿನ್ನಡೆಯಾದ ಕಾರಣಕ್ಕೆ ಸಂಪುಟ ಸಭೆ ಮುಕ್ತಾಯವಾಗುವವರೆಗೂ ರೇವಣ್ಣ ಬುಸುಗುಡುತ್ತಲೇ ಇದ್ದರು ಎಂದು ತಿಳಿದು ಬಂದಿದೆ.

ಹಾಸನ ಜಿಲ್ಲೆಯ ಹೇಮಾವತಿ ನದಿಯಿಂದ ತುಮಕೂರಿನ ನೀರಾವರಿಗೆ ನೀರು ಪೂರೈಕೆ ಮಾಡುವುದಕ್ಕೆ ಹಿಂದಿನ ಸರಕಾರದ ಅವಧಿಯಲ್ಲೇ ಯೋಜನೆ ರೂಪಿಸಲಾಗಿತ್ತು. ಪ್ರತಿಪಕ್ಷದಲ್ಲಿದ್ದಾಗಲೇ ರೇವಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೈತ್ರಿ ಸರಕಾರ ಬಂದ ಬಳಿಕ ಇದಕ್ಕೆ ಸಂಪೂರ್ಣ ಅಡ್ಡಿಯಾಗಿ ನಿಂತಿದ್ದರು. ಆದರೆ ಮೂವರು ಸಚಿವರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಹೇಮಾವತಿ ನದಿಯೂ ತುಂಬಿದೆ. ಇಂಥ ಸಂದರ್ಭದಲ್ಲಿ ಜಿಲ್ಲೆಯ ಕೆರೆ ತುಂಬಿಸುವುದಕ್ಕೆ ನೀರು ತರಲು ಸಾಧ್ಯವಾಗುತ್ತಿಲ್ಲವೇ ? ಎಂದು ತುಮಕೂರು ಜಿಲ್ಲೆಯಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ಈ ವಿಚಾರ ಸಂಪುಟ ಸಭೆಯಲ್ಲಿ ಪ್ರಸ್ತಾಪವಾದಾಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಸಣ್ಣ ಕೈಗಾರಿಕೆ ಸಚಿವ ಗುಬ್ಬಿ ಶ್ರೀನಿವಾಸ್‌ ಆಕ್ಷೇಪ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ನೀರಾವರಿ ಯೋಜನೆ ವಿಚಾರಗಳನ್ನು ಕಾಂಗ್ರೆಸ್‌ ಮುಖಂಡರ ಗಮನಕ್ಕೆ ತರದೇ ಜಾರಿಗೆ ಪ್ರಯತ್ನಿಸಿದಾಗ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡೂ ಪಕ್ಷದವರು ಒಟ್ಟಿಗೆ ಕುಳಿತು ಇಂಥ ವಿಚಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಮೊದಲ ಬಾರಿಗೆ ಸಂಪುಟ ಸಭೆಯಲ್ಲಿ ರೇವಣ್ಣ ಮುಖಭಂಗ ಅನುಭವಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ