Please enable javascript.ಫಲಕೊಟ್ಟ ಭರವಸೆ; ತಗ್ಗಿದ ಈಶಾನ್ಯರ ಗುಳೆ - ಫಲಕೊಟ್ಟ ಭರವಸೆ; ತಗ್ಗಿದ ಈಶಾನ್ಯರ ಗುಳೆ - Vijay Karnataka

ಫಲಕೊಟ್ಟ ಭರವಸೆ; ತಗ್ಗಿದ ಈಶಾನ್ಯರ ಗುಳೆ

ವಿಕ ಸುದ್ದಿಲೋಕ 19 Aug 2012, 11:12 pm
Subscribe

ಭಯದ ಭೀತಿ ತೊಲಗಿಸುವ ಸರಕಾರದ ಭರವಸೆಗೆ ಕೊನೆಗೂ ಮನ್ನಣೆ ಸಿಕ್ಕಿದ್ದು,ಈಶಾನ್ಯ ರಾಜ್ಯಗಳ ನಾಗರಿಕರ ಗುಳೆ ಭಾನುವಾರ ತಾತ್ಕಾಲಿಕ ಸ್ಥಗಿತಗೊಂಡಿದೆ.

ಫಲಕೊಟ್ಟ ಭರವಸೆ; ತಗ್ಗಿದ ಈಶಾನ್ಯರ ಗುಳೆ
* ಈಶಾನ್ಯ ರಾಜ್ಯಗಳ ನಾಗರಿಕರ ಗುಳೆ ತಾತ್ಕಾಲಿಕ ಸ್ಥಗಿತ
* ಬೆದರಿಕೆ: ಮತ್ತೆ ಇಬ್ಬರ ಬಂಧನ
* ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ
* ನಾಗಾಲ್ಯಾಂಡ್ ಸಚಿವರ ನಿಯೋಗ ನಗರಕ್ಕೆ ಭೇಟಿ, ಪರಿಶೀಲನೆ

ಬೆಂಗಳೂರು: ಭಯದ ಭೀತಿ ತೊಲಗಿಸುವ ಸರಕಾರದ ಭರವಸೆಗೆ ಕೊನೆಗೂ ಮನ್ನಣೆ ಸಿಕ್ಕಿದ್ದು,ಈಶಾನ್ಯ ರಾಜ್ಯಗಳ ನಾಗರಿಕರ ಗುಳೆ ಭಾನುವಾರ ತಾತ್ಕಾಲಿಕ ಸ್ಥಗಿತಗೊಂಡಿದೆ.

ಈ ಮಧ್ಯೆ ರಂಜಾನ್ ಆಚರಣೆಗೆ ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಹಾಗೂ ಈಶಾನ್ಯ ರಾಜ್ಯಗಳ ನಾಗರಿಕರಲ್ಲಿ ಆವರಿಸಿರುವ ಭಯ ಹೋಗಲಾಡಿಸಲು ಭಾನುವಾರದಿಂದ ಎರಡು ದಿನ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಕೇಂದ್ರದ ನಾನಾ ಪಡೆಯ 600 ಮಂದಿ ಸೇರಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಕೋರಮಂಗಲ, ನೀಲಸಂದ್ರ, ಆನೇಪಾಳ್ಯ, ಶಿವಾಜಿನಗರ ಮೊದಲಾದ ಕಡೆ ಪೊಲೀಸರು ಗಸ್ತು ತಿರುಗುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ಮಸೀದಿ ಸೇರಿದಂತೆ ಪ್ರಮುಖ ಪ್ರಾರ್ಥನೆ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗಿದೆ. ಈ ಪ್ರದೇಶಗಳಲ್ಲಿ ಗೃಹ ಸಚಿವ ಆರ್.ಅಶೋಕ್ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂಡಿ ಭಾನುವಾರ ರಾತ್ರಿ ಭದ್ರತೆ ಉಸ್ತುವಾರಿ ಪರಿಶೀಲಿಸಿ, ಜನರ ಭೀತಿ ನಿವಾರಿಸುವ ಪ್ರಯತ್ನ ಮಾಡಿದರು.

ಮತ್ತೆ ಇಬ್ಬರ ಬಂಧನ : ಈಶಾನ್ಯ ರಾಜ್ಯಗಳ ನಾಗರಿಕರ ಮೇಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಭಾನುವಾರ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿಸಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಈಶಾನ್ಯ ರಾಜ್ಯಗಳ ನಾಗರಿಕರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮುಂದುವರಿದಿದೆ. ವದಂತಿಗಳಿಗೆ ಕಿವಿಗೊಟ್ಟು ನಗರ ತೊರೆಯುವುದು ಬೇಡ. ಸೂಕ್ತ ರಕ್ಷಣೆ ಕೊಡುತ್ತೇವೆ. ಮಸೀದಿಗಳಲ್ಲಿ ಆಶ್ರಯ ನೀಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದು, ಯುವ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು ಈಶಾನ್ಯ ರಾಜ್ಯಗಳ ನಾಗರಿಕ ಸಂಘಟನೆಗಳ ಜತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

ಕುಗ್ಗಿದ ಜನಸಂದಣಿ : ಮೂರ‌್ನಾಲ್ಕು ದಿನಗಳಿಂದ ಗಿಜಿಗುಡುತ್ತಿದ್ದ ನಗರ ರೈಲು ನಿಲ್ದಾಣ ಭಾನುವಾರ ಸಹಜ ಸ್ಥಿತಿಯಲ್ಲಿತ್ತು. ಗುವಾಹಟಿಗೆ ಯಾವುದೇ ವಿಶೇಷ ರೈಲಿನ ವ್ಯವಸ್ಥೆ ಇರಲಿಲ್ಲ. ಸೋಮವಾರ ದಿಬ್ರೂಘಡ ಎಕ್ಸ್‌ಪ್ರೈಸ್ ರೈಲು ಸಂಚರಿಸುವುದರಿಂದ ಈ ರೈಲಿನಲ್ಲಿ ನೂರಾರು ಮಂದಿ ತವರಿಗೆ ಪ್ರಯಾಣಿಸುವ ಆಲೋಚನೆಯಲ್ಲಿದ್ದಾರೆ.

ಸಚಿವರ ಭೇಟಿ : ಅಸ್ಸಾಂ ರಾಜ್ಯದ ಸಚಿವರು ಭೇಟಿ ನೀಡಿದ ಬಳಿಕ ನಾಗಾಲ್ಯಾಂಡ್‌ನ ಇಂಧನ ಸಚಿವ ಬಿ.ವೈ.ಸೇಮಾ ನೇತೃತ್ವದ ನಿಯೋಗ ಭಾನುವಾರ ನಗರಕ್ಕೆ ಆಗಮಿಸಿ ಗೃಹ ಸಚಿವ ಆರ್.ಅಶೋಕ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ನಗರದಲ್ಲಿ ನೆಲೆಸಿರುವ ರಾಜ್ಯದ ನಾಗರಿಕರಿಗೆ ರಕ್ಷಣೆ ನೀಡುವಂತೆ ಕೋರಿದ ನಿಯೋಗ, ಸರಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿತು.

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸೇಮಾ, ನಗರದಲ್ಲಿ ಆತಂಕದ ವಾತಾವರಣವಿಲ್ಲ. ವದಂತಿ ಹಿನ್ನೆಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

ಅಸ್ಸಾಂನ ಉನ್ನತ ಶಿಕ್ಷಣ ಸಚಿವರು ಸೋಮವಾರ ನಗರಕ್ಕೆ ಆಗಮಿಸಿ, ಇಲ್ಲಿನ ನಾನಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಲಿದ್ದಾರೆ. ನಗರದ ಖಾಸಗಿ ಕಾಲೇಜುಗಳಲ್ಲಿ ಅಸ್ಸಾಂನ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಭಾರಿ ಭದ್ರತೆ : ಮುಂಜಾಗ್ರತೆ ಕ್ರಮವಾಗಿ ನಗರದ ಭದ್ರತೆಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಎಆರ್‌ಪಿಎಫ್, ಆರ್‌ಎಎಎಫ್ ಒಳಗೊಂಡಂತೆ ನಾನಾ ಕೇಂದ್ರ ತುಕಡಿಗಳ 600 ಯೋಧರು, ರಾಜ್ಯ ಮೀಸಲು ಪಡೆಯ 25 ತುಕಡಿಗಳು, ಸಿವಿಲ್ ಪೊಲೀಸರು ಮತ್ತು ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 17 ಸಾವಿರ ಸಿವಿಲ್ ಪೊಲೀಸರು, ಮೀಸಲು ಪಡೆಯ 6 ತುಕಡಿ, 3 ಕೇಂದ್ರೀಯ ಮೀಸಲು ಪಡೆ, 3 ಕ್ಷಿಪ್ರ ಕಾರ್ಯಪಡೆ, ತರಬೇತಿ ನಿರತ 1,500 ಪೊಲೀಸರು, 500 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ 20 ಸಾವಿರಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ