ಬೆಂಗಳೂರು: ಅಶೋಕ್ ಖೇಣಿ ಜೈಲಿಗೆ ಹೋಗಿ ಬಂದಿಲ್ಲ. ಅವರು ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯೂ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹೊಸದಿಲ್ಲಿ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿರುವ ಅವರು, '' ಆನಂದ್ ಸಿಂಗ್ ಆಗಲಿ, ಖೇಣಿಯಾಗಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲ. ಟಿಕೆಟ್ ಭರವಸೆಯನ್ನೂ ನೀಡಲಾಗಿಲ್ಲ. ಉಭಯ ನಾಯಕರು ಬೇಷರತ್ ಆಗಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಟಿಕೆಟ್ ಸಂಬಂಧ ಹೈಕಮಾಂಡ್ ತೀರ್ಮಾನಿಸಲಿದೆ,'' ಎಂದರು.
''ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರು ಜೈಲಿಗೆ ಹೋಗಿ ಬಂದಿರುವುದೂ ನಿಜ. ಆದರೆ, ಪುನಃ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಣೆ ಮಾಡಿದೆ,'' ಎಂದು ಆಕ್ಷೇಪಿಸಿದರು.
ಸಾಬೀತಾದರೆ ಕ್ರಮ
''ನೈಸ್ ಕಂಪನಿ ಅಕ್ರಮ ನಡೆಸಿರುವುದು ಸಾಬೀತಾದರೆ ತಕ್ಷಣವೇ ಖೇಣಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮಾರ್ಚ್ ಅಂತ್ಯದೊಳಗೆ ಅಭ್ಯರ್ಥಿಗಳ ಆಯ್ಕೆ
''ಮಾರ್ಚ್ ಅಂತ್ಯದೊಳಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಮಾಡಿ ಹೈಕಮಾಂಡ್ಗೆ ಶಿಫಾರಸು ಮಾಡಲಾಗುವುದು. ನಂತರ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ,'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
''ಈ ಬಾರಿಯ ಚುನಾವಣೆ ನನ್ನ ಮತ್ತು ಮೋದಿ ನಡುವಿನ ಹೋರಾಟವಲ್ಲ. ಇದು ಜಾತ್ಯತೀತ ಸಿದ್ಧಾಂತ ಮತ್ತು ಕೋಮುವಾದದ ನಡುವಿನ ಹೋರಾಟವಾಗಿದೆ. ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದಷ್ಟೂ ಅದರಿಂದ ಕಾಂಗ್ರೆಸ್ಗೆ ಲಾಭವಾಗಲಿದೆ,'' ಎಂದರು.
''ಪ್ರತ್ಯೇಕ ಲಿಂಗಾಯತ ಧರ್ಮ ಸಂಬಂಧ ತಜ್ಞರ ಸಮಿತಿಯು ಅಲ್ಪಸಂಖ್ಯಾತರ ಆಯೋಗಕ್ಕೆ ವರದಿ ನೀಡಿದೆ. ಅದು ಇನ್ನೂ ಸರಕಾರಕ್ಕೆ ತಲುಪಿಲ್ಲ. ಲಭ್ಯವಾದ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು,'' ಎಂದು ಭರವಸೆ ನೀಡಿದರು.
ಬಿಜೆಪಿಯವರೇ ನರಹಂತಕರು
ಸಂಸದ ನಳಿನ್ಕುಮಾರ್ ಕಟೀಲ್ ನೀಡಿದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ,''ಬಿಜೆಪಿಯವರೇ ನರಹಂತಕರು ಮತ್ತು ಭಯೋತ್ಪಾದಕರು. ನರಹಂತಕ, ಭಯೋತ್ಪಾದಕ ಎಂಬ ಪದ ಹುಟ್ಟಿರುವುದೇ ಬಿಜೆಪಿಯವರಿಂದ ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಟ್....
ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಹೆಚ್ಚುವರಿ ತೊಗರಿ ಖರೀದಿಗೆ ಅನುಮತಿ ಕೇಳಲಾಗಿದೆ. ಈಗಾಗಲೇ 2.65 ಮೆಟ್ರಿಕ್ ಟನ್ ಖರೀದಿಸಲಾಗಿದ್ದು ಇನ್ನು 2.35 ಮೆಟ್ರಿಕ್ ಟನ್ ಖರೀದಿಗೆ ಅವಕಾಶ ಕೇಳಲಾಯಿತು. ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಸಮ್ಮತಿ ನೀಡಿದ್ದಾರೆ.
- ಸಿದ್ದರಾಮಯ್ಯ, ಸಿಎಂ
====
ಬಾಕ್ಸ್...
ಮಧುಸೂದನ ಮಿಸ್ತ್ರಿ ಅಧ್ಯಕ್ಷತೆಯಲ್ಲಿ ಅಭ್ಯರ್ಥಿಗಳ ಅಯ್ಕೆಗೆ ಎಐಸಿಸಿ ರಚಿಸಿರುವ ಪರಿಶೀಲನಾ ಸಮಿತಿಯ ಮೊದಲ ಸಭೆ ಇದೇ 27 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.