ಆ್ಯಪ್ನಗರ

ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ, ಆರ್‌ ಶಂಕರ್‌ ಅನರ್ಹ: ಸ್ಪೀಕರ್ ಘೋಷಣೆ

ಕಳೆದ ಹದಿನೈದು ದಿನದಿಂದ ಕರ್ನಾಟಕ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಹಿರಿಯ ನಾಯಕರೂ ಹಾಗೂ ವಿಧಾನಸಭಾ ಸ್ಪೀಕರ್‌ ಆದ ಕೆಆರ್‌ ರಮೇಶ್ ಕುಮಾರ್‌.

Vijaya Karnataka Web 25 Jul 2019, 10:38 pm
ಬೆಂಗಳೂರು: ದೋಸ್ತಿ ಸರಕಾರದ ವಿರುದ್ಧ ಬಂಡಾಯ ಸಾರಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್‌ ಕುಮಟಳ್ಳಿ,ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಅವರನ್ನು ಪಕ್ಷಾಂತರ ನಿಷೇಧ ಕಾಯಿದೆಯಡಿ ವಿಧಾನಸಭಾ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
Vijaya Karnataka Web ಕೆಆರ್‌ ರಮೇಶ್‌ ಕುಮಾರ್‌ ಸುದ್ದಿಗೋಷ್ಠಿ
ಕೆಆರ್‌ ರಮೇಶ್‌ ಕುಮಾರ್‌ ಸುದ್ದಿಗೋಷ್ಠಿ


ಬೆಂಗಳೂರಿನ ಶಕ್ತಿಸೌಧ ವಿಧಾನಸೌದಲ್ಲಿ ರಮೇಶ್‌ ಕುಮಾರ್‌ ತುರ್ತು ಸುದ್ದಿಗೋಷ್ಠಿ ನಡೆಸಿದರು.

ಶಾಸಕರ ಅನರ್ಹತೆ: ಕಾನೂನು ಹೋರಾಟದ ಹಾದಿ

ಅನರ್ಹಗೊಂಡ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ವಿಧಾನಸಭೆ ಅವಧಿ ಇರುವವರೆಗೂ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ಇವರು ಕಾನೂನು ಹೋರಾಟ ನಡೆಸಬಹುದು ಎಂದು ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಉಳಿದ 13 ಅತೃಪ್ತ ಶಾಸಕರ ‌ರಾಜೀನಾಮೆ‌ ವಿಚಾರವನ್ನು ಶೀಘ್ರವಾಗಿ ಇತ್ಯರ್ಥ ‌ಮಾಡಲಾಗುವುದು. ವಾರ, ತಿಂಗಳಲ್ಲ, ಕೆಲವೇ ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಶಾಸಕರ ಅನರ್ಹತೆ ಕುರಿತು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.


ಕಳೆದ ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಆರ್‌. ಶಂಕರ್‌ ನಂತರ ಪತ್ರ ಬರೆದು ಕಾಂಗ್ರೆಸ್‌ ಪಕ್ಷದಲ್ಲಿ ವಿಲೀನವಾಗುವ ಕುರಿತು ಮನವಿ ಮಾಡಿದ್ದರು. ಇದಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಪತ್ರ ಬರೆದಿದ್ದರು. ಹೀಗಾಗಿ ಶಂಕರ್ ಅವರಿಗೆ ಕಾಂಗ್ರೆಸ್‌ ಸಾಲಿನಲ್ಲಿ ಸ್ಥಾನ ನೀಡಲಾಯಿತು. ನಂತರ ಕಳೆದ ಜುಲೈ ಮೊದಲ ವಾರದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಪತ್ರ ಬರೆದಿದ್ದರು. ರಾಜ್ಯಪಾಲರಿಗೂ ಈ ಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ ಪಕ್ಷದಲ್ಲಿ ವಿಲೀನಗೊಂಡಿದ್ದ ಶಂಕರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ್ದರು. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಆರ್‌. ಶಂಕರ್‌ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್‌ ಘೋಷಿಸಿದರು.

2023ರ ಮೇ 23ರವರೆಗೂ ಆರ್‌. ಶಂಕರ್‌ ಅವರು ಅನರ್ಹಗೊಂಡಿರುತ್ತಾರೆ ಎಂದು ಸ್ಪೀಕರ್ ತಿಳಿಸಿದರು.

ಪಕ್ಷೇತರ ಶಾಸಕ ಆರ್.ಶಂಕರ್, ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ ಕಾಂಗ್ರೆಸ್ ಜತೆ ವಿಲೀನಗೊಳಿಸಲು ಮನವಿ ಮಾಡಿದ್ದರು. ಅದನ್ನು ನಾವು ಪುರಸ್ಕರಿಸಿ ಕಾಂಗ್ರೆಸ್ ಪಕ್ಷದ ಸದಸ್ಯ ಎಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಬಿಜೆಪಿ ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಮನವಿ ಮಾಡಿದ್ದರು. ಈ ಸಂಬಂಧ ನೋಟಿಸ್ ಸಹ ಶಂಕರ್‌ಗೆ ಎರಡು ಬಾರಿ ‌ನೋಟಿಸ್‌ ನೀಡಲಾಗಿತ್ತು. ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ಕೆಲವು ದಿನಗಳ ಹಿಂದೆ ಎಲ್ಲರಿಗೂ ಗೊತ್ತಿರುವಂತೆ ಶಾಸಕರು ರಾಜೀನಾಮೆ ನೀಡಿದ್ದರು. ಕೆಲವು ಶಾಸಕರ ವಿರುದ್ಧ ಆಯಾ ಆಯಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ದೂರು ಸಲ್ಲಿಸಿದ್ದರು. ಅನರ್ಹಗೊಳಿಸುವ ಕುರಿತು ಆಗ್ರಹಿಸಿದ್ದರು. ಎರಡು ದಿನಗಳಲ್ಲಿ ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು ಎಂದು ರಮೇಶ್‌ ಕುಮಾರ್‌ ಹೇಳಿದರು.

ಸುಪ್ರೀಂ ಕೋರ್ಟ್‌ ಕೂಡ ಈ ಪ್ರಕರಣದ ಮೇಲೆ ನಿಗಾ ವಹಿಸಿದೆ. ಹೀಗಾಗಿ ಅತ್ಯಂತ ಮುನ್ನೆಚ್ಚರಿಕೆ ಹಾಗೂ ನಿಯಮಾವಳಿಗಳನ್ನು ಅಧ್ಯಯನ ಮಾಡಿ ಪರಿಶೀಲನೆ ಮಾಡಲಾಯಿತು ಎಂದು ವಿಧಾನಸಭಾಧ್ಯಕ್ಷರು ಮಾಹಿತಿ ನೀಡಿದರು.

ವಿಶ್ವಾಸಮತಯಾಚನೆ ಕಲಾಪವನ್ನು ತಮ್ಮದೇ ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು ಸುಸೂತ್ರವಾಗಿ ನಡೆಸುವಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ