ಆ್ಯಪ್ನಗರ

ಜ್ಯೋತಿಷ್ಯಗಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ

ವಂಶಪಾರಂಪರ್ಯ ಜ್ಯೋತಿಷ್ಯಗಾರರ ಹಿತಕಾಯಲು ಜ್ಯೋತಿಷ್ಯಗಾರರ ...

Vijaya Karnataka 14 Oct 2018, 5:00 am
ಬೆಂಗಳೂರು: ವಂಶಪಾರಂಪರ್ಯ ಜ್ಯೋತಿಷ್ಯಗಾರರ ಹಿತಕಾಯಲು ಜ್ಯೋತಿಷ್ಯಗಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದರು.
Vijaya Karnataka Web 1310-2-2-0RR (3


ನಗರದ ಶಿಕ್ಷಕರ ಸದನದಲ್ಲಿ ರಾಜ್ಯ ವಂಶಪಾರಂಪರ್ಯ ಜ್ಯೋತಿಷ್ಯಗಾರರ 5ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ,''ರಾಜ್ಯ ಸರಕಾರ ಬ್ರಾಹ್ಮಣದ ಅಭಿವೃದ್ಧಿ ನಿಗಮ ಸ್ಥಾಪಿಸಿ, 20 ಕೋಟಿ ರೂ.ಗಳಷ್ಟು ಅನುದಾನ ನೀಡಿರುವುದು ಶ್ಲಾಘನೀಯವಾಗಿದ್ದು, ಅದೇ ರೀತಿ ಜ್ಯೋತಿಷ್ಯಗಾರರ ಅಭಿವೃದ್ಧಿ ನಿಗಮವೂ ಅವಶ್ಯಕವಾಗಿದೆ,'' ಎಂದರು.

''ಜ್ಯೋತಿಷ್ಯ ಎಂದರೆ ನಂಬಿಕೆ ಮತ್ತು ಸತ್ಯ ಎಂದು ಅರ್ಥ. ಜ್ಯೋತಿಷಿಗಳು ಮನುಕುಲದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಇದರ ಬಗ್ಗೆ ವ್ಯಂಗ್ಯವಾಡುವುದು ಸರಿಯಲ್ಲ,'' ಎಂದು ಸ್ವಾಮೀಜಿ ಹೇಳಿದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್‌,''ಸಿದ್ದಾರ್ಥ ಬುದ್ಧನಾಗುವುದನ್ನು ಜ್ಯೋತಿಷಿಗಳು ಮೊದಲೇ ತಿಳಿಸಿದ್ದರು. ಹಾಗಾಗಿ ಜೀವನದ ವಾಸ್ತವಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯಕ್ಕೆ ವಿಜ್ಞಾನದ ಬೆಂಬಲ ಅಗತ್ಯ,'' ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆಂಗಲ್‌ ಹನುಮಂತಯ್ಯ ಮಾತನಾಡಿ, ''ಟಿವಿ ವಾಹಿನಿಗಳಲ್ಲಿ ಬರುವ ಜ್ಯೋತಿಷಿಗಳಿಂದಾಗಿ ಜನರಲ್ಲಿ ಜ್ಯೋತಿಷ್ಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತಿದ್ದು, ವಂಶಪಾರಂಪರ್ಯ ಜ್ಯೋತಿಷಿಗಳ ಮೇಲಿನ ನಂಬಿಕೆ ಸಹ ಹಾಳಾಗಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ರಾಜ್ಯದಲ್ಲಿ ಮೂಲ ಜ್ಯೋತಿಷಿಗಳನ್ನು ಹುಡುಕುವುದು ಕಷ್ಟವಾಗಿದೆ. ಒಂದೊಂದು ಪ್ರಾಂತ್ಯಗಳಲ್ಲಿ ಪ್ರತ್ಯೇಕವಾದ ಹೆಸರುಗಳಿಂದ ಜ್ಯೋತಿಷಿಗಳನ್ನು ಗುರುತಿಸುತ್ತಾರೆ. ಬೈರಾಗಿ, ಸೋಲಿಗ, ಸುಡುಗಾಡು ಸಿದ್ಧ ಇತ್ಯಾದಿ ಪಂಗಡಗಳು ಪಾರಂಪಕರಿಕವಾಗಿ ಜ್ಯೋತಿಷ್ಯ ಹೇಳುತ್ತಾ ಬಂದಿವೆ. ವಂಶಪಾರಂಪರ್ಯ ಜ್ಯೋತಿಷ್ಯಗಾರರು ಸಾಮಾಜಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ಎಲ್ಲಾ ಸರಕಾರಗಳು ನಮ್ಮನ್ನು ಬಳಕೆ ಮಾಡಿಕೊಂಡಿವೆಯೇ ಹೊರತು, ನೆರವು ನೀಡಿಲ್ಲ,''ಎಂದರು.

ಸಂಘದ ಗೌರವಾಧ್ಯಕ್ಷ ಶೇಷಪ್ಪ, ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದ ಬಸವ ಮಹಾಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ