ಆ್ಯಪ್ನಗರ

ಜ್ಯೋತಿಷ್ಯ ವೈಜ್ಞಾನಿಕ ಸತ್ಯ: ಪ್ರೊ. ಪದ್ಮಾ ಶೇಖರ್‌

ಜ್ಯೋತಿಷ್ಯ ಕೇವಲ ಹೇಳಿಕೆಯಲ್ಲ, ಅದೊಂದು ವೈಜ್ಞಾನಿಕ ಸತ್ಯ. ಜ್ಯೋತಿಷ ಹೇಳುವವನಲ್ಲಿ ವೈಜ್ಞಾನಿಕ ಮನೋಭಾವ ಇದ್ದಾಗ ಮಾತ್ರ ಅದು ವಾಸ್ತವಕ್ಕೆ ಹತ್ತಿರವಾಗುತ್ತದೆ.

Vijaya Karnataka Web 30 Jul 2018, 8:03 am
ಬೆಂಗಳೂರು: ಜ್ಯೋತಿಷ್ಯ ಕೇವಲ ಹೇಳಿಕೆಯಲ್ಲ, ಅದೊಂದು ವೈಜ್ಞಾನಿಕ ಸತ್ಯ. ಜ್ಯೋತಿಷ ಹೇಳುವವನಲ್ಲಿ ವೈಜ್ಞಾನಿಕ ಮನೋಭಾವ ಇದ್ದಾಗ ಮಾತ್ರ ಅದು ವಾಸ್ತವಕ್ಕೆ ಹತ್ತಿರವಾಗುತ್ತದೆ. ಜ್ಯೋತಿಷಿಗಳು ಜನಪರವಾಗಿ, ಜೀವನ್ಮುಖಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪದ್ಮಾ ಶೇಖರ್‌ ಹೇಳಿದರು.
Vijaya Karnataka Web 1


ವಿಜಯ ಕರ್ನಾಟಕ ಬೋಧಿವೃಕ್ಷ ಸ್ಪಿರಿಚುಯಲ್‌ ಕನೆಕ್ಟ್ ಅಡಿಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯದ ಜ್ಯೋತಿಷಿ ಹಾಗೂ ಜ್ಯೋತಿಷ ಬೋಧನಾ ಒಕ್ಕೂಟಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಜ್ಯೋತಿಷ ಸಲಹಾ ಶಿಬಿರದಲ್ಲಿ ಅವರು ಮಾತನಾಡಿದರು.

‘‘ಜನರ ಮನಸ್ಥಿತಿ ವಿಭಿನ್ನವಾಗಿರುತ್ತದೆ. ನಮ್ಮ ದೃಷ್ಟಿ ಸರಿ ತಪ್ಪುಗಳ ನಿರ್ಣಯಕ್ಕಿಂತ ಮನಸ್ಥಿತಿ ಸರಿಪಡಿಸುವ ನಿಟ್ಟಿನಲ್ಲಿರಬೇಕು. ಈ ಹಿನ್ನೆಲೆಯಲ್ಲೇ ಸಂಸ್ಕೃತ ವಿಶ್ವವಿದ್ಯಾಲಯ ವೈಜ್ಞಾನಿಕವಾದ ಜ್ಯೋತಿಷ ಶಾಸ್ತ್ರಕ್ಕೆ ಆದ್ಯತೆ ನೀಡುತ್ತಿದೆ. ಈ ವಿಭಾಗದಲ್ಲಿ ಸುಮಾರು 55 ಸಂಸ್ಥೆಗಳು ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಯೋತಿಷ ಅಧ್ಯಯನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜ್ಯೋತಿಷದಲ್ಲಿ ಬಿ.ಎ ಹಾಗೂ ಎಂ.ಎ ಪದವಿ ಪ್ರಾರಂಭಿಸಲಾಗುವುದು,’’ಎಂದು ಕುಲಪತಿ ಪದ್ಮಾಶೇಖರ್‌ ಹೇಳಿದರು.

‘‘ಫಲಜ್ಯೋತಿಷ ಲೌಕಿಕವಾದುದು. ವಾಸ್ತವವಾಗಿ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದೇ ನಿಜವಾದ ಜ್ಯೋತಿಷ. ಎಲ್ಲವನ್ನೂ ಮೂಢನಂಬಿಕೆ ಎಂದು ತಿರಸ್ಕರಿಸಲು ಸಾಧ್ಯವಿಲ್ಲ. ಕರ್ಮ ಸಿದ್ಧಾಂತವನ್ನು ನಾವು ಒಪ್ಪುತ್ತೇವೆ ಎಂದಾದರೆ ಜ್ಯೊತಿಷವನ್ನು ಒಪ್ಪಿಕೊಳ್ಳಬೇಕು,’’ ಎಂದು ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ಜ್ಯೋತಿಷರ ಹಾಗೂ ಜ್ಯೋತಿಷ ಬೋಧನಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್‌. ಕೃಷ್ಣಕುಮಾರ್‌ ಮಾತನಾಡಿ ‘‘ಜ್ಯೊತಿಷ ಒಂದು ಇಂಡಿಕೇಟರ್‌ ಅಷ್ಟೆ. ಆದರೆ ಅದುವೇ ಪ್ರಿಡಿಕ್ಟರ್‌ ಅಲ್ಲ. ಜ್ಯೋತಿಷ ಎಂದಿಗೂ ಸುಳ್ಳಲ್ಲ. ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಜ್ಯೋತಿಷಿ ಸುಳ್ಳಾಗಬಹುದು. ಜನ ನಂಬಿ ನಮ್ಮ ಬಳಿ ಬರುತ್ತಾರೆ. ಅವರ ನಂಬಿಕೆಯನ್ನು ದೃಢಪಡಿಸಬೇಕೇ ಹೊರತು ವೃಥಾ ಭಯಪಡಿಸುವುದು ಸರಿಯಲ್ಲ. ಈ ಅಂಶವನ್ನು ತೈತ್ತರೀಯ ಉಪನ್ನಿಷತ್ತಿನ ವಾಕ್ಯವೂ ದೃಢಪಡಿಸುತ್ತದೆ,’’ ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಓಂಕಾರಾಶ್ರಮದ ಸ್ವಾಮಿ ಮಧುಸೂಧನಾನಂದಪುರಿ ಸ್ವಾಮೀಜಿ ‘‘ಜ್ಯೋತಿಷ ಶಾಸ್ತ್ರವು ಸಿದ್ಧಾಂತವನ್ನು ಆಧರಿಸಿದೆ. ಗ್ರಹಗತಿಗಳ ಸ್ಥಾನವನ್ನು ಸೂಚಿಸುತ್ತದೆ. ಹಾಗಾಗಿ ಜ್ಯೋತಿಷ ಶಾಸ್ತ್ರದ ಪ್ರಕಾರ ಸೂಚಿಸುವ ಪರಿಹಾರವು ವೈಜ್ಞಾನಿಕವಾಗಿರುತ್ತದೆಯೋ ಹೊರತು ಅವೈಜ್ಞಾನಿಕವಲ್ಲ ,’’ ಎಂದರು.

ಜ್ಯೋತಿಷ ಸಲಹಾ ಶಿಬಿರಕ್ಕೆ ಬೆಳಗಿನಿಂದಲೇ ಜನ ಕಿಕ್ಕಿರಿದು ನೆರೆದಿದ್ದರು. ಬಹುತೇಕರು ಟೆಕ್ಕಿಗಳು, ಯುವಕರೇ ಹೆಚ್ಚಿದ್ದುದು ವಿಶೇಷ. ಹಿರಿಯ ನಾಗರಿಕರು, ಮಹಿಳೆಯರಿಗೆಂದೇ ಪ್ರತ್ಯೇಕ ಕೌಂಟರ್‌ಗಳಿದ್ದವು. ಜ್ಯೋತಿಷ, ಜಾತಕ ವಿಭಾಗಕ್ಕೆಂದೇ ಪ್ರತ್ಯೇಕ ನಾಲ್ಕು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಹಸ್ತಸಾಮುದ್ರಿಕ, ವಾಸ್ತು, ಪ್ರಶ್ನಾಶಾಸ್ತ್ರ, ಸಂಖ್ಯಾಶಾಸ್ತ್ರದ ಕೌಂಟರ್‌ಗಳಲ್ಲೂ ಯುವಕರೇ ಹೆಚ್ಚಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ಜ್ಯೋತಿಷಿಗಳು ಜನರಿಗೆ ಸೂಕ್ತ ಸಲಹೆ ನೀಡಿದರು.

ಡಾ. ಟಿ.ಎಸ್‌.ವಾಸನ್‌, ಡಾ. ಅರುಳಾಲಲನ್‌, ವಿಜಯ ಕಾಲೇಜಿನ ಗೌರವ ಕಾರ್ಯದರ್ಶಿ ಪ್ರೊ. ಆರ್‌.ವಿ. ಪ್ರಭಾಕರ್‌, ಡಾ. ಎಸ್‌.ಕೆ.ಜೈನ್‌, ಪ್ರೊ. ಎಚ್‌. ಚಂದ್ರಶೇಖರ್‌, ಶ್ರೀ ಹರಿದಾಸ್‌, ಡಾ. ಆನಂದತೀರ್ಥಾಚಾರ್‌, ಡಾ. ಅನಂತರಾಘವನ್‌, ಜ್ಯೋತಿಷ ಬೋಧನಾ ಒಕ್ಕೂಟದ ಕಾರ್ಯದರ್ಶಿ ಬಿ. ಗಜೇಂದ್ರ ಮತ್ತಿತರರು ಭಾಗವಹಿಸಿದ್ದರು.

ಜ್ಯೋತಿಷ ಶಿಬಿರದಂತಹ ಕಾರ್ಯಕ್ರಮ ಆಯೋಜಿಸಿದಾಗ ಜನರಲ್ಲಿ ಜ್ಯೋತಿಷದ ಬಗ್ಗೆ ಸ್ಪಷ್ಟತೆ ಬರುತ್ತದೆ. ನೈಜ ಜ್ಯೋತಿಷಿಗಳು ಬೆಳಕಿಗೆ ಬರುವಂತಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡ ನಂತರ ನಮ್ಮಲ್ಲೂ ಉತ್ಸಾಹ ಮೂಡಿದೆ. ಜ್ಯೋತಿಷ ವಿದ್ಯಾರ್ಥಿಯಾಗುವ ಆಸೆ ಮೂಡಿದೆ.
- ರಾಜಕುಮಾರ್‌, ಟೆಕಿ ಮತ್ತು ವಿಜಯಲಕ್ಷ್ಮಿ , ಗೃಹಿಣಿ

ಜ್ಯೋತಿಷ ಸಲಹಾ ಶಿಬಿರ ಸಾಕಷ್ಟು ತೃಪ್ತಿ ತಂದಿತು. ನನ್ನನ್ನು ಕಾಡುತ್ತಿದ್ದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಯಿತು. ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು.
- ಯೋಗೀಶ್‌, ವೀಸಾ ಕೌನ್ಸಿಲರ್‌, ಬೆಂಗಳೂರು

ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದಲ್ಲಾ ಒಂದು ಗೊಂದಲ, ತಳಮಳವಿರುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತವಕವಿರುತ್ತದೆ. ಈ ದಿಸೆಯಲ್ಲಿ ಪತ್ರಿಕೆ ಹಮ್ಮಿಕೊಂಡಿರುವ ಜ್ಯೋತಿಷ ಸಲಹಾ ಶಿಬಿರ ಉಪಯುಕ್ತವಾಗಿದೆ. ಜ್ಯೋತಿಷದ ಬಗೆಗಿನ ತಪ್ಪು ಅಭಿಪ್ರಾಯಗಳು ದೂರಾಗುವಂತೆ ಮಾಡಿದ್ದು ಈ ವಿಷಯದಲ್ಲಿ ಆಸಕ್ತಿ ಹುಟ್ಟಿಸಿದೆ.
- ಕೃಷ್ಣಕುಮಾರ್‌, ಸಾಫ್ಟ್‌ವೇರ್‌ ಉದ್ಯಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ