ಬೆಂಗಳೂರು :ನಮ್ಮ ಧರ್ಮಶಾಸ್ತ್ರಗಳಲ್ಲಿನ ಸಾರವನ್ನು ಬಿಟ್ಟು ಪಾಶ್ಚಾತ್ಯ ನ್ಯಾಯಾಲಯಗಳಲ್ಲಿನ ತೀರ್ಪುಗಳ ಸಾರಾಂಶಗಳತ್ತ ನಾವು ಆಕರ್ಷಿತರಾಗಿದ್ದೇವೆ ಎಂದು ಸಾಹಿತಿ ಎಸ್.ಎಲ್. ಬೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಿಥಿಕ್ ಸೊಸೈಯಲ್ಲಿ ಭಾನುವಾರ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ 'ಶ್ರೀವತ್ಸ ಸ್ಮೃತಿ'ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
''ನಮ್ಮ ಪರಂಪರೆಯನ್ನು ಕಡೆಗಣಿಸುತ್ತಿರುವ ದೇಶದ ನ್ಯಾಯಾಲಯಗಳು ಅಮೆರಿಕ, ಬ್ರಿಟನ್ ನ್ಯಾಯಾಧಿಧೀಶರ ತೀರ್ಪುಗಳಲ್ಲಿನ ಹೇಳಿಕೆಗಳನ್ನು ಉಲ್ಲೇಖಿಸಿ ನ್ಯಾಯ ತೀರ್ಮಾನ ಮಾಡುತ್ತಿವೆ. ಕಾನೂನು, ವಿವಾಹ ಹಾಗೂ ಭೂ ಒಡೆತನದಲ್ಲಿ ಬ್ರಿಟಿಷರು ತಂದ ಸುಧಾರಣೆಗಳನ್ನು ಭಾರತೀಯರು ವಿರೋಧಿಧಿಸಿದಾಗ, 'ನಿಮ್ಮ ಧರ್ಮಶಾಸ್ತ್ರದ ಕಾನೂನುಗಳನ್ನು ಸಂಗ್ರಹಿಸಿ ನಮಗೆ ಕೊಡಿ' ಎಂದು ಪಿ.ವಿ.ಕಾಣೆ ಅವರಂತಹ ವಿದ್ವಾಂಸರಿಗೆ ಸ್ವತಃ ಬ್ರಿಟಿಷರೇ ಮನವಿ ಮಾಡಿದ್ದರು,''ಎಂದು ಹೇಳಿದರು.
''ಉಪದೇಶ ಕಾವ್ಯ ಆಡು ಮಾತಿಗೆ ಹತ್ತಿರವಾಗುತ್ತಿದೆ ಎಂಬ ಕಾರಣಕ್ಕೆ ನಾಡಿಗರು ಈ ಮಾದರಿ ಬಳಸಿದರು. ನವ್ಯದ ಕವಿಯಾಗಿ ಮೂಲ ಬೇರು ಹುಡುಕುವ ಪ್ರಯತ್ನ ಮಾಡಿದರು. ಅವರು ನವ್ಯರ ಗುಂಪಿನಲ್ಲಿದ್ದರೂ ಲಾಭ ಮಾಡಿಕೊಳ್ಳಲಿಲ್ಲ. ಹೊರಗಿದ್ದು ನಷ್ಟ ಅನುಭವಿಸಿದರು. ಹಿಂದಿನ ಕವಿಗಳೆಲ್ಲ ಕೇವಲ ಹೊಗಳುವ ಇಲ್ಲವೇ ಬೈಯ್ಯುವ ಕೆಲಸ ಮಾಡಿದ್ದಾರೆ. ಆದರೆ, ನಾಡಿಗರು ಕೀಟಲೆ ರಸವನ್ನು ಪರಿಚಯಿಸಿದ್ದಾರೆ. ನಿಜವಾದ ಸೃಷ್ಟಿಶೀಲತೆ, ಸೃಜನಶೀಲತೆ ಅವರಲ್ಲಿ ಇತ್ತು'' ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ದು.ಗು.ಲಕ್ಷ್ಮಣ್, ಕೂರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಮಾಲತಿ ನಾಡಿಗ, ಎಂ.ಎ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ರಿಜಿಸ್ಟರ್ನಲ್ಲಿ ಸಹಿ ಮಾಡಿ ಪತ್ನಿ ಮುಟ್ಟಬೇಕು
''ನಮ್ಮ ಧರ್ಮಶಾಸ್ತ್ರವೇ ನಮ್ಮ ಸಂವಿಧಾನ. ಪತ್ನಿಯೊಂದಿಗೆ ಬಲವಂತವಾಗಿ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರ ಎನ್ನುತ್ತಾರೆ.ಇದನ್ನು ಕಾನೂನು ಮಾಡುವ ಪಯತ್ನ ನಡೆಯುತ್ತಿದೆ. ಹಾಗೇನಾದರೂ ಕಾನೂನು ಜಾರಿಯಾದರೆ ರಿಜಿಸ್ಟರ್ನಲ್ಲಿ ಸಹಿ ಮಾಡಿ ಒಪ್ಪಿಗೆ ಪಡೆದ ನಂತರ ಹೆಂಡತಿಯನ್ನು ಮುಟ್ಟಬೇಕಾದ ಸ್ಥಿತಿ ನಿರ್ಮಾಣವಾಗಬಹುದು'' ಎಂದು ಬೈರಪ್ಪ ಹಾಸ್ಯ ಚಟಾಕಿ ಹಾರಿಸಿದರು.
''ಅಲ್ಪಸಂಖ್ಯಾತರ ತಲಾಖ್ ನಿಷೇಧದ ಕುರಿತು ಯಾರೂ ಮಾತನಾಡುವುದಿಲ್ಲ. ಇದೆಲ್ಲ ಹಿಂದೂ ಸಮಾಜ ಒಡೆಯುವ ಹುನ್ನಾರ. ಇದರ ಯೋಜನೆಗಳು ವ್ಯಾಟಿಕನ್ನಲ್ಲಿ ಸಿದ್ಧವಾಗುತ್ತವೆ. ಹೀಗಾಗಿ, ನಮ್ಮ ಸಮಾಜ, ಸಂಸಾರ, ದಾಂಪತ್ಯ ಬದುಕು ಗಟ್ಟಿತನದಿಂದ ಕೂಡಿದ್ದರೆ ಯಾವ ಹುನ್ನಾರಗಳೂ ನಡೆಯದು'' ಎಂದು ಬೈರಪ್ಪ ಹೇಳಿದರು.
'ಶಬರಿಮಲೆ ದೇವಾಲಯ ಪ್ರವೇಶ ವಿವಾದ ಕುರಿತು ಮಾತನಾಡಿದ ಎಸ್.ಎಲ್. ಭೈರಪ್ಪ, ''ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡದಿದ್ದರೆ ತಾರತಮ್ಯ ಮಾಡಿದಂತೆ ಎಂದು ವಿವಾದ ಸೃಷ್ಟಿಸುತ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ಋುತುಮತಿ ಆಗುವ ಮುನ್ನ ಹಾಗೂ ಮುಟ್ಟು ನಿಂತ ನಂತರ ಹೋಗಲು ಅವಕಾಶ ಇದೆಯಲ್ಲ. ಅಸುರರನ್ನು ಸಂಹರಿಸಲು ಪುರುಷ ದೈವಗಳಿಗೆ ಸಾಧ್ಯವಾಗದಿದ್ದಾಗ ಚಾಮುಂಡೇಶ್ವರಿ ರಾಕ್ಷಸರನ್ನು ನಾಶ ಮಾಡಿದಳು. ಆಕೆಯನ್ನು ಶಕ್ತಿ ದೇವತೆ ಎಂದು, ಸರಸ್ವತಿಯನ್ನು ವಿದ್ಯಾದೇವತೆ ಎಂದು ಪೂಜಿಸುತ್ತೇವೆ. ಹಾಗೆಂದು ಯಾರಾದರೂ ನ್ಯಾಯಾಲಯದ ಮೆಟ್ಟಿಲು ಏರಿ ದಾವೆ ಹೂಡಬಹುದಲ್ಲಾ, ಮೌಲ್ಯಗಳು ಹೇಳುವುದನ್ನು ಒಪ್ಪಿಕೊಳ್ಳಬೇಕು ಅಷ್ಟೆ'' ಎಂದರು.