ಆ್ಯಪ್ನಗರ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ : ಆರೋಪಿಗಳ ಜಾಮೀನು ಅರ್ಜಿ ಕಾಯ್ದಿರಿಸಿದ ಕೋರ್ಟ್‌

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 16 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ 1ನೇ ಸಿಸಿಎಚ್‌ ನ್ಯಾಯಾಲಯ ಫೆ...

Vijaya Karnataka 26 Jan 2019, 5:00 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 16 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ 1ನೇ ಸಿಸಿಎಚ್‌ ನ್ಯಾಯಾಲಯ ಫೆ.7ಕ್ಕೆ ಆದೇಶ ಕಾಯ್ದಿರಿಸಿದೆ.
Vijaya Karnataka Web hamer


ಬಂಧನದಲ್ಲಿರುವ ಅಮೋಲ್‌ ಕಾಳೆ, ಪರಶುರಾಮ್‌ ವಾಗ್ಮೊರೆ, ಅಮಿತ್‌ ಬದ್ದಿ, ಗಣೇಶ್‌ ಮಿಸ್ಕಿನ್‌, ಮನೋಹರ್‌ ಯಡವೆ, ಸುಜಿತ್‌ ಕುಮಾರ್‌, ರಾಜೇಶ್‌ ಬಂಗೇರಾ, ಸುರೇಶ್‌ ಕುಮಾರ್‌, ಸುಧನ್ವ ಗೊಂದಳೇಕರ್‌, ಸೂರ್ಯವಂಶಿ, ಅಮಿತ್‌ ದೆಗ್ವೇಕರ್‌ ಸೇರಿ ಒಟ್ಟು 16 ಮಂದಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದೇ ವೇಳೆ ನವೀನ್‌ ಕುಮಾರ್‌ ಮತ್ತು ಮೋಹನ್‌ ನಾಯಕ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯು ನಡೆಯುತ್ತಿದೆ.

''ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವೂ, ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಹೇರುವಲ್ಲಿ ಕೆಲವು ಪ್ರಮುಖ ಷರತ್ತುಗಳನ್ನು ಪಾಲಿಸಿಲ್ಲ. ಆರೋಪಿಗಳ ವಿರುದ್ಧ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು ತಿರುಚಲಾಗಿದೆ,'' ಎಂದು ಆರೋಪಿಗಳ ಪರ ವಕೀಲ ಉಮಾಶಂಕರ್‌ ಮೇಗುಂದಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

''ಪ್ರಕರಣದಲ್ಲಿ 180 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿರುವುದು ತಪ್ಪು. ಯಾವುದೇ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರೆ ರಿಜಿಸ್ಟರ್‌ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಈ ಪ್ರಕರಣದಲ್ಲಿ ನಮೂದಿಸಿಲ,'' ಎಂದು ಉಮಾಶಂಕರ್‌ ವಾದಿಸಿದ್ದಾರೆ.

ಆದರೆ, ವಿಶೇಷ ಸರಕಾರಿ ಅಭಿಯೋಜಕ ಬಾಲನ್‌ ಅವರು, ''175 ದಿನಗಳಲ್ಲಿ (ನ.23, 2018) ಆರೋಪಪಟ್ಟಿ ಸಲ್ಲಿಸಲಾಗಿದೆ. ಇನ್ನು ಕೋಕಾ ಕಾಯಿದೆಯ ಪ್ರಕಾರ ಇಬ್ಬರಿಗಿಂತ ಹೆಚ್ಚು ಜನ ಸಂಘಟಿತರಾಗಿ ಅಪರಾಧ ಕೃತ್ಯ ಎಸಗಿದ್ದಾರೆ ಕೋಕಾ ಹೇರಬಹುದು,'' ಎಂದು ವಾದ ಮಂಡಿಸಿದ್ದಾರೆ. ಶುಕ್ರವಾರ ಜಾಮೀನು ಅರ್ಜಿಯ ವಿಚಾರಣೆ ಮುಗಿಸಿದ ನ್ಯಾಯಾಲಯ, ಫೆ.7ಕ್ಕೆ ಆದೇಶ ಕಾಯ್ದಿರಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ