ಆ್ಯಪ್ನಗರ

ದಲ್ಲಾಳಿಗಳ ಕೈಯ್ಯಲ್ಲಿ ಸರಕಾರಿ ಕಚೇರಿ! ಬೆಂಗಳೂರಲ್ಲಿ 'ಮಾಪನಶಾಸ್ತ ಇಲಾಖೆ' ಮಾನ ಹೋಯ್ತು!

ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದ್ರೆ, ಇಲ್ಲಿ ಸರ್ಕಾರಿ ಕೆಲಸ ಮಧ್ಯವರ್ತಿಗಳ ಕೆಲಸ ಎಂಬಂತಾಗಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಕಚೇರಿಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಂಗುಬಡಿದು ಹೋಗಿದ್ದಾರೆ.

Vijaya Karnataka 30 Sep 2019, 9:41 pm
ಬೆಂಗಳೂರು: ಖಾಸಗಿ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳಿಂದ ನಡೆಯುತ್ತಿದ್ದ ಸರಕಾರಿ ಕಚೇರಿಯೊಂದನ್ನು ಎಸಿಬಿ ದಾಳಿಯಿಂದ ಬೆಳಕಿಗೆ ಬಂದಿದೆ! ಭ್ರಷ್ಟಾಚಾರ ಆರೋಪದ ಮೇಲೆ ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯ ಮಿನರ್ವ ವೃತ್ತ ಮತ್ತು ಬಸವೇಶ್ವರ ನಗರದ ಕಚೇರಿಗಳ ಮೇಲೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ದಾಳಿ ನಡೆಸಿದರು. ಈ ವೇಳೆ, 10 ಲಕ್ಷ ರೂ. ನಗದು ವಶಪಡಿಸಿಕೊಂಡು 22 ಆರೋಪಿಗಳನ್ನು ಬಂಧಿಸಿದರು. ಈ ವೇಳೆ, ಸರಕಾರಿ ಅಧಿಕಾರಿಗಳ ಕೈಯಲ್ಲಿಇರಬೇಕಾದ ಗೌಪ್ಯ, ಮಹತ್ವದ ದಾಖಲೆಗಳನ್ನೂ ಖಾಸಗಿಯವರೇ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
Vijaya Karnataka Web govt office


ಮಿನರ್ವ ವೃತ್ತದ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳ ಬಳಿ 7.12 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಸಂಬಂಧ ಮಧ್ಯವರ್ತಿಗಳಾದ ಸಿದ್ದಪ್ಪ, ಚಂದ್ರಶೇಖರ್‌, ಯಲ್ಲಪ್ಪ, ನವೀದ್‌, ಶ್ರೀನಿವಾಸ, ವದೂದ್‌, ಅರ್ಕಲಪ್ಪ, ಪ್ರಕಾಶ್‌, ಸೆಂಥಿಲ್‌ ಕುಮಾರ್‌, ಶಶಿಕುಮಾರ್‌ ಹಾಗೂ ಪ್ರಕಾಶ್‌ ಅವರನ್ನು ಬಂಧಿಸಲಾಗಿದೆ. ಮೋದಿ ರಸ್ತೆಯ ಕಚೇರಿಯಲ್ಲಿ ಖಾಸಗಿಯವರಿಂದ 2.73 ಲಕ್ಷ ರೂ. ಪತ್ತೆಯಾಗಿದೆ. ಇಲ್ಲಿ ಚೇತನ್‌ ಕುಮಾರ್‌, ಶಿವಕುಮಾರ್‌, ಗೋಪಾಲಕೃಷ್ಣ, ಹರೀಶ್‌ ಬಾಬು, ಪ್ರಮೋದ್‌, ಕುಮಾರ್‌, ಕೆಂಪಣ್ಣ, ಮಂಜು, ಕಾಂತರಾಜು, ಪದ್ಮನಾಭ್‌ ಮತ್ತು ವೆಂಕಟೇಶ್‌ ಎಂಬುವರನ್ನು ಬಂಧಿಸಲಾಗಿದೆ.

ಖಾಸಗಿ ವ್ಯಕ್ತಿಗಳ ಬಳಿ ಇನ್ನೂರಕ್ಕೂ ಹೆಚ್ಚು 'ಸರ್ಟಿಫಿಕೇಟ್‌ ಆಫ್‌ ವೇರಿಫಿಕೇಷನ್‌' ಪ್ರಮಾಣಪತ್ರಗಳು, ತೂಕ ಮಾಪನಕ್ಕೆ ಸಂಬಂಧಿಸಿದ ಇತರ ವಸ್ತುಗಳು, ಮಾಪನಯಂತ್ರ ಸರಿ ಇದೆಯೇ ಎಂಬುದನ್ನು ಪರಿಶೀಲಿಸುವ ಕ್ಯಾಲಿಬರೇಷನ್‌ ಸಾಧನಗಳು ಸಿಕ್ಕಿಬಿದ್ದಿವೆ.

ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿ ಸರಕಾರಿ ಕಚೇರಿ ಕೆಲಸ..!

ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಶದಲ್ಲಿಇರಬೇಕಾದ ದಾಖಲೆಗಳು, ಪ್ರಮಾಣಪತ್ರ, ಅಳತೆ ಮತ್ತು ತೂಕಕ್ಕೆ ಸಂಬಂಧಿಸಿದ ಸರಕಾರಿ ವಸ್ತುಗಳು, ಮಧ್ಯವರ್ತಿಗಳು ಮತ್ತು ಖಾಸಗಿಯವರ ಕೈಯಲ್ಲಿ ಸಿಕ್ಕಿಬಿದ್ದಿವೆ. ಇದು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ತಕ್ಕಡಿ ಹೇಗಿದ್ದರೂ ಪ್ರಮಾಣಪತ್ರ..!

ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, ಅಂಗಡಿ ಮಳಿಗೆಗೆ ಖುದ್ದು ಹೋಗಿ ಮಾಪನ ಯಂತ್ರ ಸರಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಕ್ಯಾಲಿಬರೇಷನ್‌ ಸಾಧನ ಬಳಸಿ ತೂಕ ಯಂತ್ರ ಪರಿಶೀಲಿಸಬೇಕು. ಕಾನೂನು ಪ್ರಕಾರ ಇದ್ದಲ್ಲಿ ನಿಗದಿತ ಶುಲ್ಕವನ್ನು ಸಂಗ್ರಹಿಸಿ ಪ್ರಮಾಣಪತ್ರ ನೀಡಬೇಕು. ಆದರೆ, ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವ ಬದಲು ಖಾಸಗಿ ವ್ಯಕ್ತಿಗಳು, ಏಜೆಂಟರನ್ನು ನೇಮಿಸಿಕೊಂಡಿದ್ದರು. ಅಂಗಡಿಗೆ ಭೇಟಿ ನೀಡುವ ಏಜೆಂಟರು ಯಾವುದೇ ಪರಿಶೀಲನೆ ನಡೆಸದೇ, ತೂಕದ ಯಂತ್ರಗಳು ಸರಿ ಇದೆ ಎಂದು ಸೀಲ್‌ ಹಾಕಿ ಪ್ರಮಾಣಪತ್ರ ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಲಂಚ ಪಡೆದುಕೊಂಡು ಅದನ್ನು ಅಧಿಕಾರಿ, ಸಿಬ್ಬಂದಿಗೆ ನೀಡುತ್ತಿದ್ದರು. ಇದರಿಂದ ಅಮಾಯಕ ಗ್ರಾಹಕರಿಗೆ ವಂಚನೆಯಾಗುತ್ತದೆ. ಈ ಸಂಬಂಧ ಬರುವ ದಿನಗಳಲ್ಲಿಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಲಾಗುತ್ತದೆ ಎಂದ ಎಸಿಬಿಯ ಅಧಿಕಾರಿ ತಿಳಿಸಿದರು.

ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರ್ತಿದ್ದ ಗಂಡ: ಬಡಿದು ಬಿಸಾಕಿದ ಹೆಂಡ್ತಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ