ಆ್ಯಪ್ನಗರ

Karnataka Bandh: ಕಾರ್ಮಿಕ ಮುಷ್ಕರದ 2ನೇ ದಿನ: ರಾಜ್ಯದ ಕೆಲವೆಡೆ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲು ತೂರಾಟ

ಮೊದಲ ದಿನವಾದ ನಿನ್ನೆ ಬೆಳಗ್ಗೆ ಕಾರ್ಮಿಕ ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಹೊತ್ತು ಏರುತ್ತಿದ್ದಂತೆ ವಾಹನಗಳ ಸಂಚಾರ ಹೆಚ್ಚಾಯಿತು. ವ್ಯಾಪಾರ ವಹಿವಾಟುಗಳು ಬಹುತೇಕ ಸಾಮಾನ್ಯವಾಗಿ ನಡೆದಿದ್ದವು. ಹೀಗಾಗಿ ಬಂದ್ ಎಂಬುದು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗಿತ್ತು.

Vijaya Karnataka Web 9 Jan 2019, 6:33 pm
ಬೆಂಗಳೂರು: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರ ಇಂದು ಮುಂದುವರಿದಿದ್ದು, ಬೆಂಗಳೂರಿನ ಹಲವು ಕಡೆ ನಿನ್ನೆ 12 ಹಾಗೂ ಇಂದು 30 ಸೇರಿದಂತೆ ಒಟ್ಟು 42 ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಲಾಗಿದೆ. ವಿಲ್ಸನ್ ಗಾರ್ಡನ್, ಮಾದನಾಯಕನಹಳ್ಳಿ ಮೊದಲಾದ ಕಡೆ 4 ವೊಲ್ವೊ ಬಸ್ ಹಾಗೂ 8 ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಕಲ್ಲು ಎಸೆಯಲಾಗಿದೆ. ಬಳ್ಳಾರಿಯಲ್ಲೂ ಬಸ್‌ಗಳ ಮೇಲೆ ಕಲ್ಲು ತೂರಿದ ಘಟನೆಗಳು ವರದಿಯಾಗಿವೆ.

ಒಟ್ಟು 46 ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ. ಗಾಜುಗಳು ಪುಡಿ, ಪುಡಿ. ಮೂವರು ಚಾಲಕರಿಗೆ ಗಾಯ. ಬೆರಳೆಣಿಕೆಯಷ್ಟು ಬಸ್ ಸಂಚಾರ. ಬಸ್ ನಿಲ್ದಾಣಗಳಲ್ಲಿ ಕಾದು ನಿಂತಿರುವ ಜನರು. ಶಾಲಾ- ಕಾಲೇಜು ವಿದ್ಯಾರ್ಥಿಗಳ ಪರದಾಟ.

ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಬಂದ್‌ ಕರೆ ವಿಫಲ

ಮಾಗಡಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ 6 ಸಾರಿಗೆ ಬಸ್‌ಗಳ‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. 4 ಬಿಎಂಟಿಸಿ, 2 ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ರಾಮನಗರ ಜಿಲ್ಲೆ‌ ಮಾಗಡಿ ತಾಲೂಕಿನ‌ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಳಗ್ಗೆ ಎಂದಿನಂತೆ ಸಂಚಾರ ಮಾಡುತ್ತಿದ್ದ ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಸದ್ಯ ಮಾಗಡಿಯಿಂದ ಹೋಗಬೇಕಿದ್ದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ಇಲ್ಲದೇ ಪ್ರಯಾಣಿಕರ ಪರದಾಡುತ್ತಿದ್ದಾರೆ.

ಕೇಂದ್ರ ಸರಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ನೀಡಿದ ಎರಡನೇ ದಿನದ ಭಾರತ್ ಬಂದ್‌ ಕರೆಗೂ ನೀರಸ ಪ್ರತಿಕ್ರಿಯೆ ಕಾಣಿಸುತ್ತಿದೆ. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ವಿರಳ ಸಂಚಾರ ನಡೆಸುತ್ತಿವೆ. ಶಾಲಾ ಕಾಲೇಜುಗಳು ತೆರೆದಿದ್ದು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಮೇಲು ರಸ್ತೆಯಲ್ಲಿ ಟೋಲ್ ಗೇಟ್ ನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ರಾತ್ರಿ 12 ಗಂಟೆ ಹತ್ತು ನಿಮಿಷ ಸುಮಾರಿಗೆ ಘಟನೆ ನಡೆದಿದೆ.


ಕಲ್ಲು ತೂರಾಟದಿಂದ ಬಹುತೇಕ ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಸದ್ಯ ಕೇವಲ ಶೇ 10ರಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ ಎಂದು ಬಿಎಂಟಿಸಿ ಆಡಳಿತ ನಿರ್ದೇಶಕ ಎನ್‌. ವಿ. ಪ್ರಸಾದ್ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಕೆಎಸ್ಸಾರ್ಟಿಸಿ ಶೇ 79, ವಾಯುವ್ಯ ಕರ್ನಾಟಕ ಸಾರಿಗೆ ಶೇ 54 ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಶೇ 50ರಷ್ಟು ಬಸ್‌ಗಳ ಸಂಚಾರ ನಡೆಸುತ್ತಿವೆ.

ಓಲಾ, ಊಬರ್‌ ಮತ್ತು ಇತರ ಖಾಸಗಿ ಕ್ಯಾಬ್‌ಗಳ ಸೇವೆ ಎಂದಿನಂತೆ ಇದೆ.


ಮೊದಲ ದಿನವಾದ ನಿನ್ನೆ ಬೆಳಗ್ಗೆ ಕಾರ್ಮಿಕ ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಹೊತ್ತು ಏರುತ್ತಿದ್ದಂತೆ ವಾಹನಗಳ ಸಂಚಾರ ಹೆಚ್ಚಾಯಿತು. ವ್ಯಾಪಾರ ವಹಿವಾಟುಗಳು ಬಹುತೇಕ ಸಾಮಾನ್ಯವಾಗಿ ನಡೆದಿದ್ದವು. ಹೀಗಾಗಿ ಬಂದ್ ಎಂಬುದು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗಿತ್ತು.

ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಬಲವಂತದ ಬಂದ್:
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಬಲವಂತದ ಬಂದ್ ನಡೆದಿದೆ. ಹಳೇ ನಿಲ್ಸಾಣದಲ್ಲಿ ಬಸ್ ಸ್ಥಗಿತ ಮಾಡಿದ ಡಿಸಿಪಿ. ಮುಂಜಾನೆಯಿಂದ ಸುಗಮವಾಗಿ ಓಡಾಡುತ್ತಿದ್ದ ಬಸ್‌ಗಳನ್ನು ಪೊಲೀಸರೇ ತಡೆದರು. ಪೊಲೀಸರ ನಡೆಯಿಂದ ಪ್ರಯಾಣಿಕರು ಕಂಗಾಲಾದರು. ಬಸ್ ಸ್ಥಗಿತ ಮಾಡುವಂತೆ ಸಾರಿಗೆ ಇಲಾಖೆಗೆ ಸಿಬ್ಬಂದಿಗೆ ಬೆದರಿಸಿದ ಡಿಸಿಪಿ ರವೀಂದ್ರ ಗಡಾದಿ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಬಸ್ ಸೇವೆ ಬಂದ್‌ಗೆ ಪೊಲೀಸರ ಒತ್ತಾಯ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ. ಬಸ್ ಹೊರ ಹೋಗದಂತೆ ಗೇಟ್ ಹಾಕಿದ ಪೊಲೀಸರು.
ಮಹಾನಗರದಲ್ಲಿ ಶಾಲಾ ಕಾಲೇಜುಗಳು ಸುಗಮವಾಗಿ ಪುನಾರಂಭಗೊಂಡಿವೆ.‌ ಆದರೆ ಕೆಲವು ಖಾಸಗಿ ಶಾಲೆಗಳು ಬುಧವಾರವೂ ರಜೆ ಮುಂದುವರಿಸಿವೆ.

ಮಂಡ್ಯ : ಪಾಂಡವಪುರದಲ್ಲಿ ಎರಡನೇ ದಿನದ ಭಾರತ್ ಬಂದ್ ಸಂಪೂರ್ಣ ವಿಫಲ
ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಂದ್ ಪೂರ್ಣ ವಿಫಲವಾಗಿದೆ. ಬಂದ್ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ನೌಕರರು, ಗ್ರಾಪಂ ನೌಕರರ ಒಕ್ಕೂಟ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.


ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಿಂದ ಹೊರಟ ಪ್ರತಿಭಟನಾ ರ‍್ಯಾಲಿ ಪಟ್ಟಣದ ವಿವಿಧ ಬೀದಿಗಳ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿದರು. ಬಳಿಕ ಪಟ್ಟಣದ ಐದು ದೀಪದಲ್ಲಿ ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ರೂಪಾ ಅವರಿಗೆ ಮನವಿ ಸಲ್ಲಿಸಿದರು.

ಹಾಸನದಲ್ಲಿ ಬಂದ್ ಇಲ್ಲ:
ಹಾಸನ: ಹಾಸನ ಜಿಲ್ಲಾದ್ಯಂತ ಸಹಜ ಸ್ಥಿತಿಯಿದ್ದು ಕಾರ್ಮಿಕ ಮುಷ್ಕರ ಹಾಗೂ ಬಂದ್ ಬಿಸಿ ತಟ್ಟಿಲ್ಲ. ವಾಹನ, ಬಸ್ ಸಂಚಾರ ಎಂದಿನಂತೆ ನಡೆದಿದೆ. ಸರಕಾರಿ ಕಚೇರಿ, ಶಾಲೆ, ಕಾಲೇಜು, ನ್ಯಾಯಾಲಯದ ಕಲಾಪ ಎಂದಿನಂತೆ ನಡೆಯುತ್ತಿದೆ.

ಬೆಳಗಾವಿಯಲ್ಲಿ ಸಹಜ ಸ್ಥಿತಿ:
ಬೆಳಗಾವಿ:
ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಕರೆಯಲಾಗಿದ ಎರಡು ದಿನಗಳ ಭಾರತ ಬಂದ್ ಗೆ ಎರಡನೇ ದಿನವಾದ ಬುಧವಾರ ನಗರದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಭಾರತ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಸಾರಿಗೆ ಸಂಚಾರ ಬಂದ್ ಮಾಡಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ನಗರ ಸಾರಿಗೆ ಮತ್ತು ವಿಭಾಗೀಯ ಸಾರಿಗೆ ಬಸ್ ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಶಾಲಾ- ಕಾಲೇಜು, ಆಟೋ, ಟಂಟಂ, ಅಂಗಡಿ ಮುಂಗಟ್ಟು ಎಂದಿನಂತೆ ಬೆಳಗಾವಿ ನಗರದಲ್ಲಿ ಆರಂಭವಾಗಿವೆ.

ಬಾಗಲಕೋಟದಲ್ಲಿ ಬಸ್‌ ಬಂದ್‌:
ಬಾಗಲಕೋಟೆ: ಎರಡನೇ ದಿನ ಬಂದ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗಲಕೋಟೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ನೌಕರರು ಸೇವೆಗಾಗಿ ಆಗಮಿಸಿದ್ದರೂ ಪ್ರತಿಭಟನಾಕಾರರು ತಡೆಯೊಡ್ಡಿದ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ನಿಲ್ದಾಣ ಎದುರು ಸಿಐಟಿಯು ಕಾಯ೯ಕರ್ತರು ಜಮಾಯಿಸುತ್ತಿದ್ದಾರೆ. ಆದರೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವಹಿವಾಟು ಎಂದಿನಂತಿದೆ. ಆಟೋ ಸಂಚಾರವೂ ಸಹಜ ಸ್ಥಿತಿಯಲ್ಲಿದ್ದು, ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿಲ್ಲ.

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾರ್ಮಿಕರ ಮುಷ್ಕರದ ಬಿಸಿ ಕಾಣಿಸುತ್ತಿಲ್ಲ. ಜನಜೀವನ ಸಹಜಸ್ಥಿತಿಯಲ್ಲಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ಸಂಚಾರವೂ ಸಹಜ ಸ್ಥಿತಿಯಲ್ಲಿದೆ. ಮೈಸೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿಯಲ್ಲಿದೆ.

ಕೊಪ್ಪಳದಲ್ಲಿ ಎಂದಿನಂತೆ ಬಸ್‌ ಸಂಚಾರ

ಕೊಪ್ಪಳ: ನಗರ ಹಾಗೂ ಗ್ರಾಮೀಣ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭವಾಗಿದೆ. ಶಾಲೆ, ಕಾಲೇಜು, ವ್ಯಾಪಾರ, ವಹಿವಾಟು, ಜನ ಸಂಚಾರ ಎಂದಿನಂತೆ ಇದೆ. ಗಂಗಾವತಿಯಲ್ಲಿ ಒತ್ತಾಯ ಪೂರ್ವಕವಾಗಿ ಅಂಗಡಿ ಬಂದ್ ಮಾಡಲಾಗುತ್ತಿದೆ. ಕಾರ್ಯಾಚರಣೆಗೆ ಮುಂದಾದ ಬಸ್‌ಗಳ ಮೇಲೆ ಕಲ್ಲು ತೂರುವುದಾಗಿ ಮುಷ್ಕರದ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕಲ್ಲು ತೂರುವ ಭಯದಿಂದ ಅಧಿಕಾರಿಗಳು ಬಸ್ ಹೊರ ಬಿಟ್ಟಿಲ್ಲ. ಕೊಪ್ಪಳದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ಮೇಲೆ ಗಂಗಾವತಿಯಲ್ಲಿ ನಿನ್ನೆ ತಡ ರಾತ್ರಿ ಕಲ್ಲು ಎಸೆಯಲಾಗಿದೆ. ಹಿಂಬದಿಯ ಗ್ಲಾಸ್ ಪುಡಿಯಾಗಿದೆ. ಕುಷ್ಟಗಿ ಬಸ್ ನಿಲ್ದಾಣದ ಮುಂದೆ ಮಹಿಳಾ ಹೋರಾಟಗಾರರು ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಬಸ್‌ಗೆ ಅಡ್ಡ ಮಲಗಿ ಕಾರ್ಯಾಚರಣೆ ಮಾಡದಂತೆ ಒತ್ತಾಯ ಮಾಡಿದ್ದಾರೆ. ನಂತರ ಬಸ್ಸನ್ನು ಡಿಪೋಗೆ ಕಳುಹಿಸಲಾಗಿದೆ.

ರಾಯಚೂರು: ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತ:
ರಾಯಚೂರು: ಕಾರ್ಮಿಕ ಸಾರ್ವತ್ರಿಕ ಮುಷ್ಕರ ಹಿನ್ನಲೆಯಲ್ಲಿ ಮುಂಜಾನೆ ಸಂಚಾರ ಆರಂಭಿಸಿದ್ದ ಬಸ್‌ಗಳಲ್ಲಿ ಕೆಲವು ಸ್ಥಗಿತಗೊಂಡಿವೆ. ರಾಜ್ಯದ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಯಚೂರು ಕೇಂದ್ರ ಬಸ್ ನಿಲ್ದಾಣದಿಂದ ಹೋಗುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದು ವಹಿವಾಟು ಆರಂಭಿಸಿವೆ. ಆದರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾರ್ಮಿಕ ಸಂಘಟನೆಗಳಿಂದ ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಯಲಿದೆ.

ಉಡುಪಿ ಸಹಜ ಸ್ಥಿತಿಗೆ:

ಉಡುಪಿ: ಉಡುಪಿಯಲ್ಲಿ‌ ‌ಜನಜೀವನ ಎಂದಿನಂತಿದೆ. ಖಾಸಗಿ ಸಿಟಿ, ಸರ್ವೀಸ್, ಎಕ್ಸ್‌ಪ್ರೆಸ್ ಹಾಗೂ ಸರಕಾರಿ ಬಸ್‌ಗಳು ಓಡಾಟ ನಡೆಸಿವೆ. ಎಡಪಕ್ಷ‌ ಬೆಂಬಲಿತ‌‌‌ ಕಾರ್ಮಿಕ‌ ಸಂಘಟನೆಗಳ‌ ಎರಡನೇ ದಿನದ‌ ಮುಷ್ಕರ‌‌‌ ಮನವಿಗೆ‌ ಜನತೆ ಸ್ಪಂದಿಸಿಲ್ಲ.

ಸಿಐಟಿಯು‌ ವತಿಯಿಂದ‌ ಪ್ರತಿಭಟನೆ‌ ಅಂಗವಾಗಿ‌ ಬೋರ್ಡ್‌ ಹೈಸ್ಕೂಲ್‌ ಬಳಿಯಿಂದ ಜಾಥಾ ನಡೆದಿದೆ. ಸಿಟಿ, ಸರ್ವೀಸ್ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ