ಆ್ಯಪ್ನಗರ

​ಬಿಎಸ್‌ವೈ ಬೇಡವಾಗಿದ್ದರೆ ವಯಸ್ಸಾಗಿದೆಯೆಂದು ರಾಜೀನಾಮೆ ಕೇಳಲಿ: ಬಸನಗೌಡ ಪಾಟೀಲ ಯತ್ನಾಳ್

ಈಗಲೂ ಸಂತ್ರಸ್ತರ ಪರ ಮಾತನಾಡುತ್ತೇನೆ. ಮುಂದೆಯೂ ಹೋರಾಡುತ್ತೇನೆ. ನೋಟಿಸ್‌ಗೆ ಉತ್ತರ ನೀಡಲ್ಲ. ನಾನು ಯಾವ ತಪ್ಪು ಮಾಡಿಲ್ಲ, ಯಾವುದೇ ಶಿಸ್ತುಕ್ರಮಕ್ಕೂ ಅಂಜುವುದಿಲ್ಲ. - ಬಸನಗೌಡ ಪಾಟೀಲ ಯತ್ನಾಳ್

Vijaya Karnataka Web 10 Oct 2019, 10:32 am
‘‘ನೆರೆ ಸಂತ್ರಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತಂದು, ಅವರಾಗಿಯೇ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡುವ ಕುತಂತ್ರವನ್ನು ಕೆಲವರು ಹೆಣೆಯುತ್ತಿದ್ದಾರೆ. ಹೊಸದಿಲ್ಲಿಯಲ್ಲಿ ಕುಳಿತ ಕೆಲವರು ನಡೆಸುತ್ತಿರುವ ಈ ಹುನ್ನಾರ ನಡೆಯುವುದಿಲ್ಲ,’’ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
Vijaya Karnataka Web basanagouda patil yatnal


ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘‘ಇಂಥ ಕೆಲಸಕ್ಕೆ ಕೈ ಹಾಕಿದರೆ ರಾಜ್ಯದ ಜನತೆ ಪಾಠ ಕಲಿಸಲಿದೆ. ನಾನು ಸಂತ್ರಸ್ತರ ಪರ ಮಾತನಾಡಿದ್ದು ತಪ್ಪು ಎಂದಾದರೆ ಯಾವುದೇ ಶಿಸ್ತು ಕ್ರಮಕ್ಕೂ ಅಂಜಲ್ಲ,’’ ಎಂದು ಗುಡುಗಿದರು.

ಸಂದರ್ಶನ: ಮಂಜುನಾಥ ಕೊಣಸೂರು, ವಿಜಯಪುರ
ಮಾಧ್ಯಮಗಳ ಬಳಿ ಹೋಗದೆ ನೇರವಾಗಿ ಮುಖಂಡರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಬಹುದಿತ್ತಲ್ಲವೇ?
- ಪ್ರವಾಹ ಬಂದು 65 ದಿನ ಕಳೆದರೂ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಲಿಲ್ಲ. ಉತ್ತರ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌, ಅಮಿತ್‌ಶಾ ಬಂದುಹೋದರೂ ಪರಿಹಾರ ಕೊಡಲಿಲ್ಲ. ಹಾಗಾಗಿ ಮಾಧ್ಯಮದ ಮುಂದೆ ಬಂದೆ. ಜನಪ್ರತಿನಿಧಿಯಾಗಿ ನೆರೆ ಸಂತ್ರಸ್ತರ ಕಣ್ಣೀರು ನೋಡಿಕೊಂಡು ಸುಮ್ಮನಿರಬೇಕಿತ್ತೇ. ಕಾಡಿ ಬೇಡಿದ್ದಕ್ಕೆ 1200 ಕೋಟಿ ಕೊಟ್ಟಿದ್ದಾರೆ. 5000 ಕೋಟಿಯನ್ನಾದರೂ ಕೊಡಬೇಕಿತ್ತು.

ಕುಟುಕು ಮಾತಿನ ಯತ್ನಾಳ್‌ಗೆ ನೊಟೀಸ್‌ ಕಂಟಕಗಳು

ಯಡಿಯೂರಪ್ಪ ನಾಯಕತ್ವ ಬದಲಿಸಿದರೆ ಏನಾಗಬಹುದು?
- ದಿಲ್ಲಿಯ ಎಸಿ ರೂಮ್‌ನಲ್ಲಿ ಕುಳಿತ ವ್ಯಕ್ತಿ ಯಡಿಯೂರಪ್ಪ ಅವರ ಬದಲಾವಣೆ ಕುತಂತ್ರ ರೂಪಿಸಿದ್ದು, ನೆರೆ ಸಂತ್ರಸ್ತರಿಗೆ ಕೇಂದ್ರ ನೆರವು ನೀಡಬಾರದು. ಇದಾದರೆ ಯಡಿಯೂರಪ್ಪ ಅವರಿಗೆ ಕೆಟ್ಟು ಹೆಸರು ಬಂದು ತಾವಾಗಿಯೇ ರಾಜೀನಾಮೆ ನೀಡುತ್ತಾರೆಂಬ ದುರಾಲೋಚನೆ ಅವರಲ್ಲಿದೆ. ಆ ವ್ಯಕ್ತಿಯ ಮಾತು ಕೇಳಿ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಕರ್ನಾಟಕದ ಜನತೆ ಸರಿಯಾಗಿ ಉತ್ತರ ಕೊಡಲಿದೆ. ಸಿಎಂ ಆಗುವ ಕನಸು ಕಾಣುತ್ತಿರುವ ವ್ಯಕ್ತಿ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಲ್ಲಿ ನಿಂತು ಗೆಲ್ಲಲಿ. ಸಿಎಂ ಬದಲಾವಣೆ ಮಾಡುವುದಿದ್ದರೆ ಯಾಕೆಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು, ಬಿಎಸ್‌ವೈ ನಂತರ ಯಾರೆಂಬುದರ ಬಗ್ಗೆ ಸಮೀಕ್ಷೆ ಮಾಡಿಸಿ, ಯಾರು ಯೋಗ್ಯ ಅವರನ್ನು ಮಾಡಿ. ಅದನ್ನು ಬಿಟ್ಟು 10 ವೋಟ್‌ ಪಡೆಯಲಾಗದ ವ್ಯಕ್ತಿಯನ್ನು ಸಿಎಂ ಮಾಡಿದರೆ ರಾಜ್ಯದ ಜನತೆ ಸುಮ್ಮನಿರಲ್ಲ.

ಯತ್ನಾಳ್‌ ಮೇಲೆ ಮುನಿಸಿಲ್ಲ, ಸಿಎಂ ಜೊತೆ ಭಿನ್ನಾಭಿಪ್ರಾಯವಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ಯಡಿಯೂರಪ್ಪ ಕೇಂದ್ರ ನಾಯಕರ ಮೇಲಿನ ಸಿಟ್ಟಿಗೆ ನಿಮ್ಮ ಮೂಲಕ ಉತ್ತರ ಕೊಡಿಸುತ್ತಾರೆಂಬ ಮಾತುಗಳಿವೆ?
-ನಾನು ಯಾರ ಪ್ರಭಾವಕ್ಕೂ ಒಳಗಾಗುವವನಲ್ಲ, ಯಾರ ಮಾತನ್ನೂ ಕೇಳುವುದಿಲ್ಲ. ಸ್ವಂತಶಕ್ತಿಯಿಂದ ರಾಜಕಾರಣ ಮಾಡುತ್ತಿದ್ದೇನೆ. 2024ರ ಚುನಾವಣೆಯಲ್ಲಿ ನನ್ನ ಫೋಟೊ ಬಳಸದೆ ಆರಿಸಿ ಬನ್ನಿ ಎಂದು ಸಂಸದರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ. ನನಗೆ ಮೋದಿ ಅವರ ಬಗ್ಗೆ ಗೌರವವಿದೆ. ಮೋದಿ ಅವರ ಫೋಟೊ ಬಳಸದೆ ಗೆಲ್ಲುವ ಸವಾಲನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ಸವಾಲನ್ನು ರಾಜ್ಯದ 25 ಸಂಸದರು ಸ್ವೀಕರಿಸಲಿ.

ನನಗೂ ಸಿಎಂ ಆಗುವ ಅವಕಾಶವಿದೆ: ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌

ನಾನು ಮೌನವಾಗಿದಿದ್ದರೆ ಬಿಎಸ್‌ವೈ ಮಾಜಿ ಆಗುತ್ತಿದ್ದರು!
ವಿಜಯಪುರ: ‘‘ಕೇಂದ್ರದ ಇಬ್ಬರು ಸಚಿವರು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ನಾನೇನಾದರೂ ನೆರೆ ಸಂತ್ರಸ್ತರ ಬಗ್ಗೆ ನಾನು ಧ್ವನಿ ಎತ್ತದಿದ್ದರೆ ಯಡಿಯೂರಪ್ಪ 15 ದಿನದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗುತ್ತಿತ್ತು,’’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಬುಧವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘‘ಕೇಂದ್ರದ ಇಬ್ಬರು ಸಚಿವರು ಯಡಿಯೂರಪ್ಪ ಅವರನ್ನು ಮುಗಿಸಲು ಪ್ರಯತ್ನಿಸುತ್ತಿರುವ ಬಗ್ಗೆ ನನಗೆ ದಿಲ್ಲಿಯಿಂದ ಮಾಹಿತಿ ಸಿಕ್ಕಿದೆ,’’ ಎಂದು ಹೇಳಿದರು.

ಯಡಿಯೂರಪ್ಪ ಬಗ್ಗೆ ನಿಮಗೆ ಅಸಮಾಧಾನವಿದ್ದರೆ, ಅವರು ಬೇಡವಾಗಿದ್ದರೆ ‘76 ವಯಸ್ಸಾಗಿದೆ. ಪಕ್ಷದ ನಿಯಮದಂತೆ ರಾಜೀನಾಮೆ ಕೊಡಿ’ ಎಂದು ಕೇಳಲಿ, ಬೇಕಿದ್ದರೆ ಹೊಸ ನಾಯಕನನ್ನು ಆಯ್ಕೆ ಮಾಡಲಿ. ಅದನ್ನು ಬಿಟ್ಟು ಸಂತ್ರಸ್ತರಿಗೆ ಪರಿಹಾರ ಕೊಡೋಕ್ಕೆ ಅಡ್ಡ ಹಾಕುವುದು, ಯಡಿಯೂರಪ್ಪ ವಿರೋಧಿಗಳನ್ನು ಪದಾಧಿಕಾರಿಗಳನ್ನಾಗಿ ಮಾಡುವುದು ಸರಿಯಲ್ಲ ಎಂದು ಕೇಂದ್ರದ ಇಬ್ಬರು ಸಚಿವರ ಹೆಸರು ಹೇಳದೆ ಯತ್ನಾಳ್ ವಾಗ್ದಾಳಿ ನಡೆಸಿದರು.

‘‘ನನ್ನನ್ನು ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ. ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲ. ನನ್ನ ಶಕ್ತಿ ನೋಡಿ ಅಮಿತ್‌ ಶಾ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸೇರಿಸಿಕೊಂಡಿದ್ದಾರೆ,’’ ಎಂದು ತಿಳಿಸಿದರು.

ಕುತಂತ್ರದಿಂದ ಬಿಎಸ್‌ವೈ ಜೈಲಿಗೆ ಕಳುಹಿಸಿದವರೇ ಜೈಲಿಗೆ ಹೋಗುವ ಸಮಯ: ಯತ್ನಾಳ್

ನೋಟಿಸ್‌ಗೆ ಉತ್ತರಿಸಲ್ಲ ಹೈಕಮಾಂಡ್‌ ಗಟ್ಟಿಯಾಗಿದೆ. ಶಿಸ್ತುಕ್ರಮ ಕೈಗೊಂಡರೆ ಏನು ಮಾಡುತ್ತೀರಿ?- ನಾನು ಯಾವ ತಪ್ಪು ಮಾಡಿಲ್ಲ, ಯಾವುದೇ ಶಿಸ್ತುಕ್ರಮಕ್ಕೂ ಅಂಜುವುದಿಲ್ಲ. ಈಗಲೂ ಸಂತ್ರಸ್ತರ ಪರ ಮಾತನಾಡುತ್ತೇನೆ. ಮುಂದೆಯೂ ಹೋರಾಡುತ್ತೇನೆ. ನೋಟಿಸ್‌ಗೆ ಉತ್ತರ ನೀಡಲ್ಲ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರಿಗಿಂತ ಶಿಸ್ತು ಸಮಿತಿ ದೊಡ್ಡದೇನಲ್ಲ. ಹೀಗಾಗಿ ಮೂವರು ನಾಯಕರಿಗೆ ಪತ್ರ ಬರೆದಿದ್ದೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ