ಆ್ಯಪ್ನಗರ

ಎಜಿ ನೇಮಕದಲ್ಲಿ ಉ.ಕ.ಗೆ ಅನ್ಯಾಯ: ಸಿಎಂ, ಡಿಸಿಎಂಗೆ ಪ್ರತಿಭಟನಾ ಪತ್ರ ಬರೆದ ಹೊರಟ್ಟಿ

ಸಮ್ಮಿಶ್ರ ಸರಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಜೆಡಿಎಸ್‌ನಲ್ಲೂ ಅಸಮಾಧಾನ ಕಾಣಿಸಿಕೊಂಡಿದ್ದು, ಹೆಚ್ಚುವರಿ ಅಡ್ವೊಕೇಟ್‌ ...

Vijaya Karnataka 16 Jun 2019, 5:00 am
ಬೆಂಗಳೂರು: ಸಮ್ಮಿಶ್ರ ಸರಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಜೆಡಿಎಸ್‌ನಲ್ಲೂ ಅಸಮಾಧಾನ ಕಾಣಿಸಿಕೊಂಡಿದ್ದು, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ನೇಮಕ ವಿಚಾರ ಮುಂದಿಟ್ಟುಕೊಂಡು ಜೆಡಿಎಸ್‌ ಉಪಾಧ್ಯಕ್ಷ ಹಾಗೂ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಅವರು ಮೈತ್ರಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
Vijaya Karnataka Web basavaraj horatti


ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್‌ಗೆ ಶನಿವಾರ ಪತ್ರ ಬರೆದಿರುವ ಹೊರಟ್ಟಿ ''ನಾನಾ ನೇಮಕಾತಿಗಳು ಸೇರಿ ಹಲವು ವಿಚಾರಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮುಂದುವರಿದಿದೆ'' ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಹೊರಟ್ಟಿ ಅವರು ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಸಭಾಪತಿ ಸ್ಥಾನವೂ ಕೈತಪ್ಪಿದ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದರು. ನಿರೀಕ್ಷೆ ಕೈಗೂಡದ ಬೆನ್ನಲ್ಲೇ ಅವರು ಎಲ್ಲ ರೀತಿಯಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಾ ಬಂದರೂ ಸರಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರದ ಸಾರ

''ರಾಜ್ಯದಲ್ಲಿ 5 ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಕಲಬುರಗಿ ಮತ್ತು ಧಾರವಾಡ ಹೈಕೋರ್ಟ್‌ ಪೀಠಗಳಿಗೆ ನಿಗದಿಯಾಗಿರುವ ತಲಾ ಒಂದು ಹುದ್ದೆಗಳಿಗೆ ಯಾರನ್ನೂ ನೇಮಕ ಮಾಡಿಲ್ಲ. ಕಲಬುರಗಿ ಪೀಠದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಾಡಗೌಡ ಅವರನ್ನು ಬದಲಿಸಿ ಮಂಗಳೂರು ಮೂಲದ ಸಂದೇಶ ಚೌಟ ಅವರನ್ನು ನೇಮಕ ಮಾಡಲಾಗಿದೆ. ಧಾರವಾಡಕ್ಕೂ ಮಂಗಳೂರು ಮೂಲದ ದಿನೇಶ್‌ ರಾವ್‌ ಅವರನ್ನು ನೇಮಕ ಮಾಡಲಾಗಿದೆ. ಈ ಇಬ್ಬರೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪೊನ್ನಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೂ ಬೆಂಗಳೂರಿನವರನ್ನು ನೇಮಕ ಮಾಡಲು ಹುನ್ನಾರ ನಡೆದಿದೆ. ಸ್ಥಳೀಯ ವಕೀಲರಿಗೆ ಯೋಗ್ಯತೆ ಇದ್ದರೂ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡದೆ ಅನ್ಯಾಯ ಮಾಡಲಾಗುತ್ತಿದೆ'' ಎಂದು ದೂರಿದ್ದಾರೆ.

''ಅನುದಾನ ಬಿಡುಗಡೆ, ಉನ್ನತ ಅಧಿಕಾರಿಗಳ ನೇಮಕ, ಕುಲಪತಿಗಳ ನೇಮಕ ಎಲ್ಲದರಲ್ಲೂ ಅವಕಾಶಗಳು ದಕ್ಷಿಣ ಭಾಗದವರ ಪಾಲಾಗುತ್ತಿವೆ. ಸಿಎಂ ಮತ್ತು ಡಿಸಿಎಂ ಉತ್ತರ ಕರ್ನಾಟಕ ಭಾಗದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ತಾವು ಪದೇಪದೆ ಮಾಡಿಕೊಳ್ಳುತ್ತಿರುವ ಸಮರ್ಥನೆ ಅರ್ಥ ಕಳೆದುಕೊಳ್ಳುತ್ತಿದೆ. ಕೂಡಲೇ ಈ ಅನ್ಯಾಯ ಸರಿಪಡಿಸಲು ಮುಂದಾಗಬೇಕು'' ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ