ಆ್ಯಪ್ನಗರ

ಬೆಳಿಗ್ಗೆ ಜೆಡಿಎಸ್‌ನಿಂದ ಉಚ್ಛಾಟನೆ‌, ಸಂಜೆ ಕಾಂಗ್ರೆಸ್‌ಗೆ ಸೇರ್ಪಡೆ!

ಆರ್‌ಆರ್‌ ನಗರ ಉಪಚುನಾವಣೆಗೂ ಮುನ್ನ ಬೆಂಗಳೂರು ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಚ್‌. ಚಂದ್ರಶೇಖರ್ ಹಾಗೂ ಜೆಡಿಎಸ್‌ ವಕ್ತಾರ ಸಿದ್ದರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Vijaya Karnataka 19 Oct 2020, 10:41 pm
ಬೆಂಗಳೂರು: ಬೆಂಗಳೂರು ಮಹಾನಗರ ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಚ್‌. ಚಂದ್ರಶೇಖರ್‌ ಅವರನ್ನು ಬೆಳಗ್ಗೆ ಜೆಡಿಎಸ್‌ನಿಂದ ಉಚ್ಛಾಟಿಸಲಾಗಿದ್ದು, ಸ್ವಲ್ಪ ಹೊತ್ತಲ್ಲೇ ಅವರು ಕಾಂಗ್ರೆಸ್‌ ಸೇರಿದರು. ಈ ನಡುವೆ, ಜೆಡಿಎಸ್‌ ವಕ್ತಾರ ಸಿದ್ದರಾಜು ಕೂಡಾ ಕಾಂಗ್ರೆಸ್‌ ಸೇರಿದ್ದಾರೆ.
Vijaya Karnataka Web DK Shivakumar


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಚಂದ್ರಶೇಖರ್‌ ಸೇರಿದಂತೆ ಹಲವು ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಕಾಂಗ್ರೆಸ್‌ ಪಕ್ಷ ಒಬ್ಬ ಉತ್ತಮ ಯುವ ವಿದ್ಯಾವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಅವರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅವರ ಗೆಲುವಿಗೆ ಪಣ ತೊಡಬೇಕು ಎಂದು ಸೂಚನೆ ನೀಡಿದರು. ಶಾಸಕಿ ಸೌಮ್ಯರೆಡ್ಡಿ, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಾಟನೆ

ಇದಕ್ಕೂ ಮುನ್ನ ಚಂದ್ರಶೇಖರ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ 6 ವರ್ಷಗಳ ಕಾಲ ಜೆಡಿಎಸ್‌ನಿಂದ ಉಚ್ಚಾಟಿಸಿ ಬೆಂಗಳೂರು ಘಟಕದ ಅಧ್ಯಕ್ಷ ಆರ್‌ ಪ್ರಕಾಶ್‌ ಆದೇಶ ಹೊರಡಿಸಿದ್ದರು. ಪಕ್ಷದಿಂದ ಸಾಕಷ್ಟು ಅನುಕೂಲಗಳನ್ನು ಪಡೆದಿದ್ದರೂ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಪಕ್ಷ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ಪಕ್ಷಕ್ಕೆ ಅಕ್ಷಮ್ಯ ಅಪರಾಧವೆಸಗಿದ್ದೀರಿ. ಈ ಕಾರಣದಿಂದ ತಮ್ಮನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಲಾಗಿದೆ.

ಡಿಕೆಶಿ ಸಭೆ

ಆರ್‌.ಆರ್‌.ನಗರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌, ಎಂ.ಡಿ. ವಿಜಯದೇವ್‌, ಸತೀಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ