ಆ್ಯಪ್ನಗರ

ಡಿಸಿಎಂ ಸಿಕ್ಕಿಲ್ಲ, ಬೆಂಗಳೂರು ಉಸ್ತುವಾರಿಯೂ ಸಿಗಲ್ವಾ ? ಆರ್. ಅಶೋಕ್‌ಗಿದು ಶಾಕಿಂಗ್ ನ್ಯೂಸ್ !

ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಕಣ್ಣಿಟ್ಟಿದ್ದ ಆರ್.ಅಶೋಕ್ ಅವರಿಗೆ ಮತ್ತೊಂದು ನಿರಾಶೆ ಕಾದಿದೆ. ಡಿಸಿಎಂ ಪಟ್ಟ ಕೈ ತಪ್ಪಿದ ಬೆನ್ನಲ್ಲೇ ಉಸ್ತುವಾರಿ ಸಚಿವ ಸ್ಥಾನವೂ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಅಶೋಕ್ ಬದಲಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಪಾಲಾಗುತ್ತದೆ ಎನ್ನಲಾಗಿದೆ.

Vijaya Karnataka Web 12 Sep 2019, 6:39 pm
ಬೆಂಗಳೂರು: ಬಿಜೆಪಿ ಪ್ರಭಾವಿ ನಾಯಕ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬಿಎಸ್‌ವೈ ಸರಕಾರದಲ್ಲಿ ಮಹತ್ವದ ಸ್ಥಾನಮಾನ ಸಿಗುತ್ತದೆ ಎಂಬ ಕಾರ್ಯಕರ್ತರ ನಿರೀಕ್ಷೆ ಮತ್ತೆ ಮತ್ತೆ ಹುಸಿಯಾಗುತ್ತಿದೆ.
Vijaya Karnataka Web R ashok


ನೂತನ ರಾಜ್ಯ ಸರಕಾರದಲ್ಲಿ ಮೂವರು ಡಿಸಿಎಂಗಳ ನೇಮಕ ಮಾಡುವ ಸಂದರ್ಭದಲ್ಲಿ ಅಶೋಕ್ ಅವರನ್ನು ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಅಶೋಕ್ ಹೆಸರು ಕೈಬಿಡಲಾಗಿತ್ತು. ಬದಲಾಗಿ ಕೇವಲ ಕಂದಾಯ ಖಾತೆಯನ್ನಷ್ಟೇ ಅವರಿಗೆ ನೀಡಲಾಗಿದೆ. ಪಕ್ಷದ ವರಿಷ್ಠರ ಈ ನಿರ್ಧಾರ ಅಶೋಕ್ ಅಸಮಾಧಾನಕ್ಕೂ ಕಾರಣವಾಗಿತ್ತು. ಅವಕಾಶ ಕೈ ತಪ್ಪಿದ್ದ ಹಿನ್ನಲೆಯಲ್ಲಿ ಕೆಲವೊಂದು ಮಹತ್ವದ ಸಭೆಗೆ ಗೈರಾಗಿ ಅಂತರ ಕಾಯ್ದುಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಅವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಅದೇನೆಂದರೆ ಅಶೋಕ್ ಕಣ್ಣಿಟ್ಟಿದ್ದ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವೂ ಅನ್ಯರ ಪಾಲಾಗುವ ಸಾಧ್ಯತೆಗಳು ಬಹುತೇಕ ಹೆಚ್ಚಾಗಿದೆ.

ಅಶೋಕ್ ಬದಲಾಗಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಅವರನ್ನೇ ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪೂರಕ ಎಂಬುವಂತೆ ಡಿಸಿಎಂ ಅಶ್ವತ್ಥ್ ನಾರಾಯಣ ನೀಡಿರುವ ಹೇಳಿಕೆ ಅನುಮಾನವನ್ನು ಪುಷ್ಠೀಕರಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್ ದೊರೆಸ್ವಾಮಿ ಭೇಟಿಯ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ ತಾವೇ ಬೆಂಗಳೂರು ಉಸ್ತುವಾರಿ ಸಚಿವರಾಗುವ ಕುರಿತಾಗಿ ಸುಳಿವು ನೀಡಿದ್ದಾರೆ. ನಿಮಗೆ ಬೆಂಗಳೂರು ಸಮಸ್ಯೆ ಹೇಳಿದರೆ ಪರಿಹಾರ ಸಿಗುತ್ತಾ ಎಂದು ದೊರೆಸ್ವಾಮಿ ಡಿಸಿಎಂ ಅಶ್ವತ್ಥ್ ನಾರಾಯಣ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅವರು ಸದ್ಯ ಬೆಂಗಳೂರು ಉಸ್ತುವಾರಿ ನೋಡಿಕೊಳ್ಳಲು ಸಿಎಂ ಬಿ.ಎಸ್ ಯಡಿಯೂರಪ್ಪ ನನಗೆ ಸೂಚಿಸಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಬೆಂಗಳೂರು ನಗರದ ಪಕ್ಷದ ಹಿಡಿತ ಆರ್. ಅಶೋಕ್ ಕೈಯಲ್ಲಿತ್ತು. ಆದರೆ ಬರಬರುತ್ತಾ ಇದೀಗ ಅದು ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಶೋಕ್ ಬದಲಾಗಿ ಪಕ್ಷದಲ್ಲಿ ಡಾ. ಅಶ್ವತ್ಥ್ ನಾರಾಯಣ ಅವರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಪತನದ ಸಂದರ್ಭದಲ್ಲಿ ಅಶ್ವತ್ಥ್ ನಾರಾಯಣ ಪಾತ್ರ ಬಹುಮುಖ್ಯವಾಗಿತ್ತು. ಬಿ.ಎಸ್ ಯಡಿಯೂರಪ್ಪ ಅವರಿಗೂ ಆಪ್ತರಾಗಿರುರುವುದರಿಂದ ನೇರವಾಗಿ ಅವರ ಮೂಲಕವೇ ಕಾರ್ಯಾಚರಣೆ ನಡೆಸುತ್ತಿದ್ದರು.

ಈ ಎಲ್ಲಾ ಬೆಳವಣಿಗೆಗಳ ಪರಿಣಾಮ ನೂತನ ಬಿ.ಎಸ್.ವೈ ಸರಕಾರದಲ್ಲಿ ಅಶ್ವತ್ಥ್ ನಾರಾಯಣ ಅವರಿಗೆ ಮಹತ್ವದ ಸ್ಥಾನಮಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಅದರಂತೆಯೇ ಡಿಸಿಎಂ ಪಟ್ಟ ಸಿಕ್ಕಿದ್ದು ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವೂ ಅವರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದು ಪಕ್ಷದಲ್ಲಿ ಆರ್. ಅಶೋಕ್ ಹಿನ್ನಡೆಗೆ ಕಾರಣವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ