ಆ್ಯಪ್ನಗರ

ವಿಶ್ವನಾಥ್ ಜೊತೆಗಿನ ಸಂಧಾನ ಸಕ್ಸಸ್ ! ಹಳ್ಳಿ ಹಕ್ಕಿಗೆ ಬಿಎಸ್‌ವೈ ನೀಡಿದ ಆಫರ್‌ ಏನು?

ಮಂತ್ರಿ ಸ್ಥಾನ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್ ಜೊತೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ರಹಸ್ಯ ಮಾತುಕತೆ ನಡೆಸಿದ್ದು ಸಂಧಾನ ಬಹುತೇಕ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

Vijaya Karnataka Web 3 Feb 2020, 12:09 pm
ಬೆಂಗಳೂರು: ಸಚಿವ ಸ್ಥಾನದ ಕೈ ತಪ್ಪುವ ಕಾರಣಕ್ಕಾಗಿ ಅಸಮಧಾನಗೊಂಡಿರುವ ಹಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್ ಜೊತೆಗೆ ಬಿಎಸ್‌ವೈ ಸಂಧಾನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳಗ್ಗೆ ಸಿಎಂ ಜೊತೆಗೆ ರಹಸ್ಯ ಮಾತುಕತೆ ನಡೆಸಿದ ಹಳ್ಳಿ ಹಕ್ಕಿ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದರು. ವಿಶ್ವನಾಥ್ ಅವರನ್ನು ಸಮಾಧಾನಗೊಳಿಸಿದ ಸಿಎಂ ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
Vijaya Karnataka Web bjp leader h vishwanath meets bs yeddyurappa
ವಿಶ್ವನಾಥ್ ಜೊತೆಗಿನ ಸಂಧಾನ ಸಕ್ಸಸ್ ! ಹಳ್ಳಿ ಹಕ್ಕಿಗೆ ಬಿಎಸ್‌ವೈ ನೀಡಿದ ಆಫರ್‌ ಏನು?


ಫೆಬ್ರವರಿ ಆರರಂದು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅಧಿಕೃತವಾಗಿ ಭಾನುವಾರ ಘೋಷಣೆ ಮಾಡಿದ್ದಾರೆ. ಆದರೆ ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಎಚ್‌.ವಿಶ್ವನಾಥ್ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದರು.

‘ಸಿದ್ಧರಾಮಯ್ಯ ದಿವಾಳಿಯೆದ್ದ ಮನಸ್ಸಿನ ಸಾಕ್ಷಿ ಪ್ರಜ್ಞೆ’ ಅನಂತ್ ಕುಮಾರ್ ಹೆಗಡೆ ಕಿಡಿ

ಸಚಿವ ಸ್ಥಾನ ನೀಡದಿರಲು ಕಾನೂನು ಕಾರಣ ನೀಡುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಬೆಂಗಳೂರಿನ ಡಾಲರ್ಸ್‌ ಕಾಲೊನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಎಚ್‌. ವಿಶ್ವನಾಥ್ ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ವಿ. ಸೋಮಣ್ಣ ಕೂಡಾ ಉಪಸ್ಥಿತರಿದ್ದರು.

ಮಾತುಕತೆ ಸಂಧರ್ಭದಲ್ಲಿ ಸಚಿವ ಸ್ಥಾನ ನೀಡದಿರುವ ಕುರಿತಾಗಿ ಸಿಎಂ ಮುಂದೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬಂದೆ. ಆದರೆ ಚುನಾವಣೆಯಲ್ಲೂ ಸೋಲಾಯಿತು ಹಾಗೂ ಸಚಿವ ಸ್ಥಾನವೂ ಸಿಗುತ್ತಿಲ್ಲ, ಹಾಗಾದರೆ ನಾವು ಮಾಡಿದ ತ್ಯಾಗಕ್ಕೆ ಬೆಲೆ ಇಲ್ವೇ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈ ಭೇಟಿಯಾದ ಹಳ್ಳಿ ಹಕ್ಕಿ; ಧವಳಗಿರಿಯಲ್ಲಿ ನಡೆಯುತ್ತಿದೆ 'ರಹಸ್ಯ' ಮಾತುಕತೆ

ಈ ವೇಳೆ ವಿಶ್ವನಾಥ್ ಅವರನ್ನು ಸಮಾಧಾನ ಪಡಿಸಿದ ಸಿಎಂ, ನೀವು ಹಿರಿಯ ನಾಯಕರು ಯಾವುದೇ ಕಾರಣಕ್ಕೂ ನಿಮಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸುವುದಿಲ್ಲ. ಸದ್ಯ ಕಾನೂನಿನ ತೊಡಕಿದೆ. ಮುಂದಿನ ವರ್ಷದ ಮೇ ಅಥವಾ ಜೂನ್‌ ತಿಂಗಳಲ್ಲಿ ಏಳು ವಿಧಾನಪರಿಷತ್ ಸ್ಥಾನಗಳು ತೆರವಾಗಲಿವೆ.

ಈ ಸಂದರ್ಭದಲ್ಲಿ ನಿಮ್ಮನ್ನು ಎಮ್.ಎಲ್‌.ಸಿ ಮಾಡಿ ಸಚಿವರನ್ನಾಗಿ ಮಾಡಲಾಗುವುದು ಎಂಭ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ಜೊತೆಗಿದ್ದ ಸಚಿವ ವಿ. ಸೋಮಣ್ಣ ಕೂಡ ಕೂಡಾ ಸಮಾಧಾನ ಮಾಡಿದ್ದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ, ಯಾವುದೇ ಮುಜುಗರ ಆಗದಂತೆ ಗೌರವದಿಂದ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು ಎನ್ನುತ್ತಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ