ಬಾಂಬೆ ಟೀಂ..! ಇದು ಸಮ್ಮಿಶ್ರ ಸರ್ಕಾರವನ್ನ ಉರುಳಿಸಿದ ತಂಡ.. 17 ಭಿನ್ನಮತೀಯ ಶಾಸಕರ ಟೀಂ ಇದು.. ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರ್ಕಾರವನ್ನ ಬೀಳಿಸಿದ ಈ ಟೀಂನ ಸದಸ್ಯರು, ಬಿಜೆಪಿ ಸೇರಿದ್ರು. ಕುಮಾರಸ್ವಾಮಿ ಸಿಎಂ ಪಟ್ಟ ಕಳೆದುಕೊಳ್ಳುವಂತೆ ಮಾಡಿದ್ದೂ ಇದೇ ಮಿತ್ರ ಮಂಡಳಿ.. ಇವರಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. 2019ರಲ್ಲಿ ಉಪ ಚುನಾವಣೆ ಕೂಡಾ ಎದುರಾಗಿತ್ತು. ಬಾಂಬೆ ಟೀಂನ ಬಹುತೇಕ ಶಾಸಕರು ಈ ಚುನಾವಣೆಯಲ್ಲಿ ಗೆದ್ದರು. ಅವರಿಗೆಲ್ಲಾ ಮಂತ್ರಿ ಪಟ್ಟವೂ ಸಿಕ್ತು. ಈಗ ಮತ್ತೆ ಎಲೆಕ್ಷನ್ ಬಂದಿದೆ. ಈ ಎಲೆಕ್ಷನ್ ಟೈಮಲ್ಲಿ ಬಾಂಬೆ ಟೀಂನ ಎಲ್ಲ ಶಾಸಕರೂ ಬಿಜೆಪಿಯಲ್ಲೇ ಇರ್ತಾರಾ? ಅಥವಾ ಬಿಜೆಪಿಗೆ ಕೈ ಕೊಟ್ಟು ಮತ್ತೆ ತಮ್ಮ ತವರು ಪಕ್ಷಕ್ಕೆ ಹಾರ್ತಾರಾ?
ಕಾದು ನೋಡುವ ತಂತ್ರ ಅನುಸರಿಸುತ್ತಿದೆಯಾ 'ಬಾಂಬೆ ಟೀಂ'?
ಏನಿದು ‘ಬಾಂಬೆ ಟೀಂ’? ಮಿತ್ರ ಮಂಡಳಿ ಸದಸ್ಯರು ಯಾರು?
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದ 17 ಶಾಸಕರನ್ನ ಬಾಂಬೆ ಟೀಂ ಅಂತಾರೆ. ಮುಂಬೈನ ರೆಸಾರ್ಟ್ ಒಂದರಲ್ಲಿ ಇವರೆಲ್ಲಾ ವಾಸ್ತವ್ಯ ಹೂಡಿದ್ದ ಕಾರಣ ಬಾಂಬೆ ಟೀಂ ಅನ್ನೋ ಹೆಸರು ಬಂತು. ಅದಕ್ಕಿಂತಾ ಹೆಚ್ಚಾಗಿ ಈ ಬಾಂಬೆ ಟೀಂ ಪದವನ್ನ ಜನಪ್ರಿಯ ಮಾಡಿದ್ದು ಹಳ್ಳಿ ಹಕ್ಕಿ ವಿಶ್ವನಾಥ್..! ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಚಿವರಾದ ಡಾ. ಕೆ. ಸುಧಾಕರ್, ಎಸ್. ಟಿ. ಸೋಮಶೇಖರ್, ಮುನಿರತ್ನ, ಕೆ. ಸಿ. ನಾರಾಯಣ ಗೌಡ, ಕೆ. ಗೋಪಾಲಯ್ಯ, ಬಿ. ಸಿ. ಪಾಟೀಲ್, ಆನಂದ್ ಸಿಂಗ್, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಈ ಮಿತ್ರ ಮಂಡಳಿಯ ಪ್ರಮುಖ ಸದಸ್ಯರು. ಇವರಲ್ಲದೆ, ಮಾಜಿ ಸಚಿವರಾದ ನಾಗೇಶ್, ಆರ್. ಶಂಕರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಶ್ರೀಮಂತ ಪಾಟೀಲ್, ಶಾಸಕ ಮಹೇಶ್ ಕುಮಟಳ್ಳಿ, ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡಾ ಬಾಂಬೆ ಟೀಂನ ಸದಸ್ಯರು..
ಮಿತ್ರ ಮಂಡಳಿಯ ಯಾರ ಪರಿಸ್ಥಿತಿ ಈಗ ಹೇಗಿದೆ?
ಮಿತ್ರ ಮಂಡಳಿಯ 17 ಶಾಸಕರ ಪೈಕಿ ಮೂವರು ಜೆಡಿಎಸ್ನಿಂದ ಬಂದಿದ್ದರೆ, ಮಿಕ್ಕ 13 ಮಂದಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರಿದ್ದರು. ಈ ಪೈಕಿ 10 ಮಂದಿ ಬಿಜೆಪಿ ಸರ್ಕಾರದಲ್ಲಿ ಹಾಲಿ ಸಚಿವರಾಗಿದ್ದಾರೆ. ನಾಲ್ಕು ಮಂದಿ ಈಗಾಗಲೇ ಸಚಿವ ಸ್ಥಾನದ ರುಚಿ ಕಂಡು ಮಾಜಿ ಸಚಿವರಾಗಿದ್ದಾರೆ. ಇನ್ನು 2019ರ ಉಪ ಚುನಾವಣೆಯಲ್ಲಿ ಮೂವರು ಸದಸ್ಯರು ಸೋಲನ್ನೂ ಕಂಡಿದ್ದಾರೆ. ಈ ಪೈಕಿ ಮುಂದಿನ ದಿನಗಳಲ್ಲಿ ಯಾರು ಬಿಜೆಪಿಯಲ್ಲೇ ಮುಂದುವರೆಯುತ್ತಾರೆ? ಯಾರು ಮತ್ತೆ ವಲಸೆಯ ಹಾದಿ ಹಿಡಿಯುತ್ತಾರೆ.. ಇದೇ ಈ ಕ್ಷಣದ ಸಸ್ಪೆನ್ಸ್..! ಆದ್ರೆ, ಮೇಲ್ನೋಟಕ್ಕೆ ಹೇಳೋದಾದ್ರೆ, ಮಿತ್ರ ಮಂಡಳಿಯ 10 ಮಂತ್ರಿಗಳು ಸದ್ಯದ ಮಟ್ಟಿಗೆ ಬಿಜೆಪಿಯಲ್ಲೇ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಹಾರುವ ‘ಹಕ್ಕಿ’ ಯಾವುದು?
ಯಾರು ಬಿಜೆಪಿಯಿಂದ ಹೊರಗೆ ಹಾರಬಹುದು ಅನ್ನೋ ಪ್ರಶ್ನೆ ಬಂದರೆ ಮೊದಲು ಕಣ್ಣಿಗೆ ಬೀಳೋದೇ ಎಚ್. ವಿಶ್ವನಾಥ್.. ಹಳ್ಳಿ ಹಕ್ಕಿ ಈಗ ವಿಧಾನ ಪರಿಷತ್ ಸದಸ್ಯ.. 2019ರ ಉಪ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಹುಣಸೂರಿನಿಂದ ಬಿಜೆಪಿ ಟಿಕೆಟ್ ಸಿಕ್ಕಿತ್ತು. ಆದ್ರೆ, ಅವರು ಸೋಲು ಕಂಡರು. ನಂತರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯ್ತು. ಆದ್ರೆ, ಸಚಿವ ಸ್ಥಾನ ಸಿಗಲಿಲ್ಲ. ಆ ಸಿಟ್ಟು ವಿಶ್ವನಾಥ್ ಅವರಿಗೆ ಇದೆ. ಜೊತೆಗೆ ಬಿಜೆಪಿ ಸದಸ್ಯರ ವಿರುದ್ಧವೇ ಆಗಾಗ ಬಹಿರಂಗವಾಗಿ ಕೆಂಡ ಕಾರುತ್ತಾರೆ. ಬಾಂಬೆ ಟೀಂ ಅನ್ನೋ ಪುಸ್ತಕ ಬರೆದು ಬಿಜೆಪಿಗೆ ಸ್ವಲ್ಪ ಮುಜುಗರವನ್ನೂ ತಂದಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದ ವಿಶ್ವನಾಥ್, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಹಾರುತ್ತಾರೆ ಅನ್ನೋ ಮಾತಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಬಿಜೆಪಿ ದಯ ಪಾಲಿಸಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ.. ಇದು ವಿಶ್ವನಾಥ್ ಎದುರಿಗೆ ಇರುವ ತಾಂತ್ರಿಕ ಕಾರಣ. ಒಂದು ವೇಳೆ ವಿಶ್ವನಾಥ್ ಈಗ ಸುಮ್ಮನಾದ್ರೆ ಅವರ ರಾಜಕೀಯ ಜೀವನಕ್ಕೇ ಫುಲ್ ಸ್ಟಾಪ್ ಬೀಳಬಹುದು. ವಿಶ್ವನಾಥ್ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಒಂದು ರೌಂಡ್ ಹಾಕಿದ್ದಾರೆ. ಇದೀಗ ವಿಶ್ವನಾಥ್ ಅವರ ಮಗ ಪೂರ್ವಜ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ವಿಶ್ವನಾಥ್ ಕೂಡಾ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ನನ್ನ ಮಗನಿಗೆ ಟಿಕೆಟ್ ಕೊಡಿ ಅಂತಾ ಬೇಡಿಕೆ ಇಡಬಹುದು.
ಗೆದ್ದ ಸೋತವರು.. ಸೋತು ಗೆದ್ದವರು..!
ಬಾಂಬೆ ಟೀಂ ಮಿತ್ರ ಮಂಡಳಿ ಪೈಕಿ ಕೆಲವರ ಸ್ಥಿತಿ ಸೂಕ್ಷ್ಮವಾಗಿದೆ. ಈ ಪೈಕಿ ಮೊದಲ ಹೆಸರು, ಪ್ರತಾಪ್ ಗೌಡ ಪಾಟೀಲ್.. ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಸೋಲು ಕಂಡು ಮುಖಭಂಗ ಅನುಭವಿಸಿದರು. ಮುಂದಿನ ಚುನಾವಣೆಯಲ್ಲೂ ಮಸ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದಾರೆ.
ಇನ್ನು ಮತ್ತೊಬ್ಬ ಶಾಸಕ ಶ್ರೀಮಂತ್ ಪಾಟೀಲ್ ಕಥೆ ಏನು? ಕಾಗವಾಡ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಶಾಸಕರಾಗಿದ್ದಾರೆ.. ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿತ್ತಾದರೂ, ಬೊಮ್ಮಾಯಿ ಸಂಪುಟದಲ್ಲಿ ಶ್ರೀಮಂತ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.. ಆದ್ರೆ ಮುಂದಿನ ಚುನಾವಣೆಯಲ್ಲೂ ಕಾಗವಾಡದಿಂದ ಬಿಜೆಪಿ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿದೆ.
ಮಹೇಶ್ ಕುಮಟಳ್ಳಿ ಪರಿಸ್ಥಿತಿ ಅತಂತ್ರ?
ಕಾಂಗ್ರೆಸ್ನಿಂದ ಬಿಜೆಪಿ ಹಾರಿದ ಮಹೇಶ್ ಕುಮಟಳ್ಳಿ, ಸದ್ಯ ಅಥಣಿ ಶಾಸಕರು.. ಆದ್ರೆ, ಮುಂದಿನ ಚುನಾವಣೆಯಲ್ಲೂ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿಯಿಂದಲೇ ಬಿಜೆಪಿ ಟಿಕೆಟ್ ಸಿಗುತ್ತಾ ಅನ್ನೋ ಡೌಟ್ ಇದೆ. ಏಕೆಂದರೆ, ಲಕ್ಷ್ಮಣ ಸವದಿಯವರು ಮಹೇಶ್ ಕುಮಟಳ್ಳಿಗಾಗಿ ಅಥಣಿ ಕ್ಷೇತ್ರವನ್ನ ಬಿಟ್ಟು ಕೊಟ್ಟಿದ್ದರು. ಇದೀಗ ಮತ್ತೊಂದು ಅವಧಿಗೆ ಲಕ್ಷ್ಮಣ ಸವದಿ ತಮ್ಮ ಕ್ಷೇತ್ರವನ್ನ ಬಿಟ್ಟು ಕೊಡ್ತಾರಾ? ಇದು ಸದ್ಯದ ಪ್ರಶ್ನೆ.. ಒಂದು ವೇಳೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದಿದ್ದರೆ ಅವರ ಕಥೆ ಏನು? ಇದೇ ವಿಚಾರವಾಗಿ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ, ಶೀತಲ ಸಮರ ಏರ್ಪಟ್ಟಿದೆ ಅನ್ನೋ ಮಾತುಗಳೂ ಇವೆ..
ಬೇಲಿ ಮೇಲೆ ಕೂತಿದ್ದಾರಾ ವಲಸಿಗರು?
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ ಹಾರಿದ 17 ಶಾಸಕರ ತಂಡಕ್ಕೆ ಬಾಂಬೆ ಟೀಂ, ಮಿತ್ರ ಮಂಡಳಿ ಅನ್ನೋ ಹಲವು ಹೆಸರುಗಳಿದ್ದರೂ ಕೂಡಾ ನಾವೆಲ್ಲರೂ ಬಿಜೆಪಿ ಟೀಂ ಅಂತಾ ಪದೇ ಪದೇ ಹೇಳ್ತಾನೇ ಇದ್ದಾರೆ. ಆದ್ರೆ, ಚುನಾವಣೆ ಟೈಮಲ್ಲಿ ತೀರ್ಮಾನಕ್ಕೆ ಬರಬಹುದಾ? ಅಥವಾ ಚುನಾವಣೆ ನಂತರ ಒಂದು ನಿರ್ಧಾರಕ್ಕೆ ಬರಬಹುದಾ? ಮೂಲಗಳ ಪ್ರಕಾರ, ವಿಶ್ವನಾಥ್ ಹೊರತುಪಡಿಸಿ ಎಲ್ಲರೂ ಕೂಡಾ ಸದ್ಯದ ಮಟ್ಟಿಗೆ ಬಿಜೆಪಿಯಲ್ಲೇ ಇರೋದು ಪಕ್ಕಾ.. ಕೆಲವು ದಿನಗಳ ಹಿಂದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದ ಸಚಿವ ನಾರಾಯಣ ಗೌಡ ಕೂಡಾ ನಾನು ಬಿಜೆಪಿಯಲ್ಲೇ ಇರ್ತೇನೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಗಾಳಿ ಬೀಸಿದ ಕಡೆಗೆ ಹಾರುತ್ತಾ ಬಾಂಬೆ ಟೀಂ?
ಇಲ್ಲಿ ಹಲವು ಪ್ರಶ್ನೆಗಳಿವೆ.. ಚುನಾವಣೆ ನಂತರ ಕಾಂಗ್ರೆಸ್ಗೆ ಬಹುಮತದ ಕೊರತೆ ಎದುರಾದರೆ ಮಿತ್ರ ಮಂಡಳಿ ಮತ್ತೆ ಕಾಂಗ್ರೆಸ್ಗೆ ಹಾರಬಹುದಾ? ಸದ್ಯದ ಮಟ್ಟಿಗೆ ರಿಸ್ಕ್ ಬೇಡ ಅಂತಾ ಸುಮ್ಮನಿದ್ದಾರಾ? ಈ ಪ್ರಶ್ನೆಗೆ ಚುನಾವಣೆ ಫಲಿತಾಂಶದವರೆಗೆ ಕಾಯಬೇಕು.. ಒಂದು ವೇಳೆ ಅತಂತ್ರ ವಿಧಾನಸಭೆ ಎದುರಾದರೆ ಈ ಎಲ್ಲಾ ನಾಟಕಗಳು ಶುರು ಆಗಬಹುದು..