ಆ್ಯಪ್ನಗರ

ಮಾಧುಸ್ವಾಮಿ ವಜಾಕ್ಕೆ ಬಿಜೆಪಿಯಲ್ಲೇ ಒತ್ತಡ..! ಪಕ್ಷ ಸಂಘಟನೆಗೂ ಲಾಭವಿಲ್ಲ..?

ಕೋಲಾರದ ರೈತ ಮಹಿಳೆಯನ್ನು ನಿಂದಿಸಿ, ವಿವಾದ ಮೈಮೇಲೆ ಎಳೆದುಕೊಂಡಿರುವ ಕಾನೂನು ಸಚಿವ ಜಿ.ಸಿ.ಮಾಧುಸ್ವಾಮಿ ತಾಳ್ಮೆಯಿಂದ ವರ್ತಿಸಬೇಕಿತ್ತು ಎಂದು ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ವೈಯಕ್ತಿವಾಗಿ ಅವರ ರಾಜೀನಾಮೆಗೆ ಒತ್ತಾಯಿಸುವುದಿಲ್ಲ ಎಂದಿದ್ದಾರೆ.

Vijaya Karnataka Web 22 May 2020, 10:21 pm
ಬೆಂಗಳೂರು: ರೈತ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಡಳಿತಾರೂಢ ಬಿಜೆಪಿಯಲ್ಲೇ ಒತ್ತಡ ಹೆಚ್ಚುತ್ತಿದೆ.
Vijaya Karnataka Web bjp ministers also unhappy with madhuswamy asking to sack him as minister
ಮಾಧುಸ್ವಾಮಿ ವಜಾಕ್ಕೆ ಬಿಜೆಪಿಯಲ್ಲೇ ಒತ್ತಡ..! ಪಕ್ಷ ಸಂಘಟನೆಗೂ ಲಾಭವಿಲ್ಲ..?


ಮಾಧುಸ್ವಾಮಿ ಪ್ರಾರಂಭದಿಂದಲೂ ಬಿಜೆಪಿಗೆ ನಿಷ್ಠರಾಗಿಲ್ಲ. ಜನತಾ ಪರಿವಾರ ಮೂಲದ ಅವರು ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿದ್ದರು. ಅದಾದ ಬಳಿಕ ಬಿಎಸ್‌ವೈ ಅವರೊಂದಿಗೆ ಬಿಜೆಪಿಗೂ ಬಂದಿದ್ದಾರೆ. ಆದರೆ, ಯಾವತ್ತೂ ಅವರು ಪಕ್ಷದ ರೀತಿ ರಿವಾಜುಗಳಿಗೆ ಬೆಲೆ ಕೊಟ್ಟವರಲ್ಲ. ತಮ್ಮದೇ ಬೇರೆಯ ಶೈಲಿ ಎಂಬಂತಿದ್ದಾರೆ. ಈ ಬಗ್ಗೆ ಮೊದಲಿನಿಂದಲೂ ಬಿಜೆಪಿಯಲ್ಲಿಅಸಮಾಧಾನವಿತ್ತು ಎನ್ನಲಾಗಿದೆ.

​ಪಕ್ಷ ಸಂಘಟನೆಗೂ ಲಾಭವಿಲ್ಲ..!

ಮಾಧುಸ್ವಾಮಿ ಅವರಿಂದ ಪಕ್ಷದ ಸಂಘಟನೆಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಅವರಿಗೆ ಉಸ್ತುವಾರಿ ವಹಿಸಲಾಗಿರುವ ತುಮಕೂರು ಜಿಲ್ಲೆಯಲ್ಲೂ ಪಕ್ಷ ಸಂಘಟನೆ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಈ ನಡುವೆಯೂ ಅವರಿಗೆ ಹಾಸನ ಜಿಲ್ಲೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಜತೆಗೆ ಮಹತ್ವದ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಖಾತೆಗಳನ್ನು ನೀಡಲಾಗಿದೆ. ಇಷ್ಟೆಲ್ಲ ಜವಾಬ್ದಾರಿಗಳಿದ್ದರೂ ತಾವು ನಡೆದಿದ್ದೇ ದಾರಿ ಎಂಬಂತೆ ಅವರು ವರ್ತಿಸುತ್ತಿದ್ದಾರೆ. ಪಕ್ಷದ ಕೆಳ ಹಂತದ ಮುಖಂಡರು, ಕಾರ್ಯಕರ್ತರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹಾಗಾಗಿ ಇಂಥವರಿಗೆ ಆದ್ಯತೆ ಕೊಟ್ಟಿದ್ದು ಸಾಕು ಎಂಬ ಆಕ್ಷೇಪದ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿವೆ.

​ಸಿಎಂ ಕ್ರಮ ಕೈಗೊಳ್ಳದಿದ್ದರೆ ಹೈಕಮಾಂಡ್‌ಗೆ ಮೊರೆ..?

ಸಚಿವ ಮಾಧುಸ್ವಾಮಿ ವರ್ತನೆ ಬಗ್ಗೆ ಹಲವು ಬಾರಿ ಸಿಎಂ ಯಡಿಯೂರಪ್ಪ ಅವರ ಗಮನ ಸೆಳೆಯಲಾಗಿದೆ. ಈ ಘಟನೆ ಬಗ್ಗೆ ಸಿಎಂ ಅವರೂ ಗರಂ ಆಗಿದ್ದಾರೆ. ಈ ಸಂಬಂಧ ಹೈಕಮಾಂಡ್‌ಗೂ ತಿಳಿಸಲು ಪಕ್ಷದ ಕೆಲವರು ಮುಂದಾಗಿದ್ದಾರೆ. ಸಿಎಂ ಕ್ರಮ ಕೈಗೊಳ್ಳದ್ದರೆ ಹೈಕಮಾಂಡ್‌ನಿಂದಲೇ ಒತ್ತಡ ಹೇರಿಸಬೇಕು ಎಂಬ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

​ಸಹ ಸಚಿವರ ಜತೆಗೂ ಸಂಘರ್ಷ

ಮಾಧುಸ್ವಾಮಿ ನಡವಳಿಕೆ ಬಗ್ಗೆ ಅವರ ಸಂಪುಟದ ಸಹೋದ್ಯೋಗಿಗಳಿಗೂ ಭಯಂಕರ ಕೋಪವಿದೆ. ಯಾಕೆಂದರೆ ತಾವೊಬ್ಬರೇ ಬುದ್ಧಿವಂತ ಎಂಬಂತೆ ನಡೆದುಕೊಳ್ಳುವ ಮಾಧುಸ್ವಾಮಿ, ಎಲ್ಲ ಸಚಿವರ ಇಲಾಖೆ ವಿಚಾರದಲ್ಲೂ ಸಂಪುಟ ಸಭೆಯಲ್ಲಿ ಮಾತನಾಡುತ್ತಾರೆ. ಉತ್ತಮ ಸಲಹೆ, ಸೂಚನೆ ಕೊಟ್ಟರೆ ಸ್ವೀಕರಿಸಬಹುದು. ಆದರೆ, ಏನೋ ಒಂದು ಕ್ಯಾತೆ ತೆಗೆಯುವುದೇ ಅವರ ಅಭ್ಯಾಸವಾಗಿ ಹೋಗಿದೆ. ಹಾಗಾಗಿ ಕೆಲವು ಸಚಿವರೂ ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವುದು ಉತ್ತಮವೆಂಬ ಅಭಿಪ್ರಾಯ ನೀಡಿದ್ದಾರೆಂದು ತಿಳಿದು ಬಂದಿದೆ.

​ರೈತ ಸಂಘ ಪ್ರತಿಭಟನೆ..

ಕೋಲಾರ ಜಿಲ್ಲೆಯ ಕೆರೆಗಳ ಒತ್ತುವರಿ ಬಗ್ಗೆ ಗಮನಕ್ಕೆ ತರುವ ಪ್ರಯತ್ನ ಮಾಡಿದ ರೈತ ಮಹಿಳೆ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದನ್ನು ಆಕ್ಷೇಪಿಸಿ ಸಚಿವ ಮಾಧುಸ್ವಾಮಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಲವೆಡೆ ಪ್ರತಿಭಟನೆ ನಡೆಸಿತು. ತುಮಕೂರು ಜಿಲ್ಲೆಯ ಪಾವಗಡ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಗಳಲ್ಲಿ ನಡೆದ ಪ್ರತಿಭಟನೆ ವೇಳೆ ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಲಾಯಿತು. ಬಳಿಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ