ಆ್ಯಪ್ನಗರ

ಬಿಜೆಪಿ ಶಾಸಕರು ಇನ್ನೂ 3 ದಿನ ದಿಲ್ಲಿಯಲ್ಲಿ ಠಿಕಾಣಿ

ಮುಂಬಯಿ ಹೊಟೇಲ್‌ನಲ್ಲಿ ಶಾಸಕ ಅಶ್ವತ್ಥನಾರಾಯಣ ಜತೆಗೆ ಉಮೇಶ್‌ ಜಾಧವ್‌ ಇರುವ ಫೋಟೊ ಮಾಧ್ಯಮಗಳಿಗೆ ಸೋರಿಕೆಯಾಗಿರುವುದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಕಾರಣವಾಗಿದೆ.

Vijaya Karnataka Web 15 Jan 2019, 10:23 pm
ಬೆಂಗಳೂರು: ಇನ್ನು ಮೂರು ದಿನ ನೀವೆಲ್ಲ ಹೊಸದಿಲ್ಲಿಯಲ್ಲೇ ಇರಬೇಕೆಂದು ತಮ್ಮ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದು, ತಡರಾತ್ರಿ ಶುಭಸುದ್ದಿ ನೀಡುತ್ತೇನೆಂಬ ಭರವಸೆ ನೀಡಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಪಕ್ಷದ ಎಲ್ಲಾ ಶಾಸಕರ ಜತೆಗೆ ಉಪಾಹಾರ ಸೇವಿಸಿದ ಬಳಿಕ ಔಪಚಾರಿಕವಾಗಿ ಮಾತನಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿರುವ ಅವರು, ಪಕ್ಷೇತರ ಶಾಸಕರು ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಮಧ್ಯಾಹ್ನದ ಹೊತ್ತಿಗೆ ಹಿಂತೆಗೆದುಕೊಳ್ಳುತ್ತಾರೆ. ತಡರಾತ್ರಿ ಇನ್ನಷ್ಟು ಶಾಕಿಂಗ್‌ ನ್ಯೂಸ್‌ ಇದೆ. ಇನ್ನೂ ಮೂರು ದಿನ ಇಲ್ಲಿಯೇ ಇರಬೇಕೆಂದು ಸೂಚನೆ ನೀಡಿದರು. ಈಗಾಗಲೇ ಬೆಂಗಳೂರಿಗೆ ತೆರಳಿರುವ ಶಾಸಕರಿಗೂ ಮತ್ತೆ ವಾಪಸ್‌ ಬರುವಂತೆ ಸೂಚನೆ ನೀಡಲಾಗಿದ್ದು, ಬಿಜೆಪಿಯ ಯಾವುದೇ 'ವಿಕೆಟ್‌' ರನೌಟ್‌ ಆಗದಂತೆ ನೋಡಿಕೊಳ್ಳಲು ವಿಶೇಷ ಮುತುವರ್ಜಿ ನೀಡಲಾಗುತ್ತಿದೆ.

ನಾಗೇಂದ್ರ, ರಮೇಶ್‌ ಜಾರಕಿಹೊಳಿ, ಮಹೇಶ್‌ ಕಮಟಹಳ್ಳಿ, ಕಂಪ್ಲಿ ಗಣೇಶ್‌, ಉಮೇಶ್‌ ಜಾಧವ್‌, ಪ್ರತಾಪ್‌ ಗೌಡ ಪಾಟೀಲ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಪಾಳಯದಲ್ಲಿ ಬೆಳಗ್ಗೆಯಿಂದಲೇ ಚರ್ಚೆ ನಡೆಯುತ್ತಿದ್ದು, ಮೂರನೇ ಹಂತದಲ್ಲಿ ಇನ್ನೂ 8 ಜನರು ರಾಜೀನಾಮೆ ಕೊಡಬಹುದು ಎಂದು ಹೇಳಲಾಗುತ್ತಿದೆ.

ವರಿಷ್ಠರು ಗರಂ

ಆಪರೇಷನ್‌ ಕಮಲ ಕಾರ್ಯಾಚರಣೆ ಇಷ್ಟು ಗುಟ್ಟಾಗಿ ನಡೆಯುತ್ತಿದ್ದರೂ ಮುಂಬಯಿ ಹೊಟೇಲ್‌ನಲ್ಲಿ ಶಾಸಕ ಅಶ್ವತ್ಥನಾರಾಯಣ ಜತೆಗೆ ಉಮೇಶ್‌ ಜಾಧವ್‌ ಇರುವ ಫೋಟೊ ಮಾಧ್ಯಮಗಳಿಗೆ ಸೋರಿಕೆಯಾಗಿರುವುದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಕಾರಣವಾಗಿದೆ. ಈ ಸಂಬಂಧ ಕೆಲವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಮುಂಬಯಿನಲ್ಲಿರುವ ಕಾಂಗ್ರೆಸ್‌ ಶಾಸಕರಿಗೆ ಸಂಪೂರ್ಣ ರಕ್ಷಣೆ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿರುವ ಬಿಜೆಪಿ ಶಾಸಕರಿಗೆ ಸೂಕ್ತ ರಕ್ಷಣೆ ನೀಡುವ ವಿಚಾರ ಸಂಬಂಧ ಅಲ್ಲಿನ ಮುಖ್ಯಮಂತ್ರಿ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಹೊಟೇಲ್‌ನಲ್ಲೇ ಸಂಕ್ರಾಂತಿ

ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮದ ಹೊಟೇಲ್‌ನಲ್ಲೇ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಮಧ್ಯಾಹ್ನ 12ಕ್ಕೆ ಎಲ್ಲರೂ ಒಟ್ಟಿಗೆ ಸೇರಿ ಹಬ್ಬ ಆಚರಿಸಿದ್ದು, ದಕ್ಷಿಣ ಭಾರತ ಶೈಲಿಯಲ್ಲಿ ಊಟ ತಯಾರಿಸುವುದಕ್ಕೆ ಸೂಚನೆ ನೀಡಲಾಗಿತ್ತು. ಮಧ್ಯಾಹ್ನ ಯಡಿಯೂರಪ್ಪ ಜತೆಗೆ ಬಿಜೆಪಿ ಶಾಸಕರು ಎಳ್ಳು, ಬೆಲ್ಲ ಹಾಗೂ ಪೊಂಗಲ್‌ ಸವಿದರು. ಹಿರಿಹಿರಿ ಹಿಗ್ಗಿದ್ದ ಯಡಿಯೂರಪ್ಪ ಶುಭಸುದ್ದಿ ಬರುತ್ತದೆ, ಎಲ್ಲರೂ ಸಹಕರಿಸಿ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಇನ್ನೂ ಕೆಲ ದಿನ ಇರುತ್ತೇವೆ

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ''ನಾವು ಎಷ್ಟು ದಿನ ಇಲ್ಲಿರುತ್ತೇವೆ ಎಂಬುದು ಗೊತ್ತಿಲ್ಲ. ಪರಿಸ್ಥಿತಿ ಆಧರಿಸಿ ಇನ್ನೂ ಕೆಲ ದಿನ ಇರುತ್ತೇವೆ. ಮೂರ್ನಾಲ್ಕು ಜನರು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತೆರಳಿದ್ದು, ಸದ್ಯದಲ್ಲೇ ವಾಪಸ್‌ ಬರುತ್ತಾರೆ'' ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಇಡೀ ರಾಜಕೀಯ ಕ್ಷಿಪ್ರಕ್ರಾಂತಿಯ ಮಾಹಿತಿಗಳನ್ನು ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಐವರು ನಾಯಕರು ಮಾತ್ರ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ