ಆ್ಯಪ್ನಗರ

H Vishwanath: ಸಿದ್ದರಾಮಯ್ಯ ಜೊತೆ ಎಚ್ ವಿಶ್ವನಾಥ್ ಮಾತುಕತೆ; ಕುತೂಹಲ ಕೆರಳಿಸಿದ ಹಳ್ಳಿಹಕ್ಕಿ ನಡೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವ ವೇಳೆ ಈ ಬೆಳವಣಿಗೆ ನಡೆದಿರುವುದು ಕುತೂಹಲ ಕೆರಳಿಸಿದೆ. ಎಚ್‌ ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ ಕಡೆ ಹೋಗುವ ಸಾಧ್ಯತೆ ಇದ್ದು, ಹಳ್ಳಿಹಕ್ಕಿಯ ನಡೆ ಬಿಜೆಪಿಗರಲ್ಲಿ ಆತಂಕ ಮೂಡಿಸಿದೆ.

Edited byಅವಿನಾಶ ವಗರನಾಳ | Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 6 Dec 2022, 4:07 pm

ಹೈಲೈಟ್ಸ್‌:


  • ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಎಚ್‌ ವಿಶ್ವನಾಥ್‌ ಮಾತುಕತೆ
  • ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ಹಳ್ಳಿಹಕ್ಕಿ ನಡೆ
  • ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಭೇಟಿ ಮಾಡಿದ ಎಚ್‌ ವಿಶ್ವನಾಥ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web H Vishwanath Meets Siddaramaiah
ಬಿಜೆಪಿ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಮಂಗಳವಾರ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಎಚ್ ವಿಶ್ವನಾಥ್, ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಬಳಿಕ ಕೆಲ ಹೊತ್ತು ಮಾತುಕತೆ ನಡೆಸಿದರು.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಚ್ ವಿಶ್ವನಾಥ್ ಭೇಟಿ ಆದ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ್ ಬಳಿಕ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಜೆಡಿಎಸ್ ನಲ್ಲೂ ಅಸಮಾಧಾನಗೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇದೀಗ ಬಿಜೆಪಿಯಲ್ಲಿದ್ದರೂ ಪಕ್ಷದ ಕೆಲವು ನಿಲುವುಗಳ ವಿರುದ್ಧವಾಗಿ ಹೇಳಿಕೆ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ‌ ನಡುವೆ ಸಿದ್ದರಾಮಯ್ಯ ಅವರನ್ನು ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿ ಮಾಡಿದ್ದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು, ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಸಾಧ್ಯ ಈಶ್ವರ್ ಖಂಡ್ರೆ, ವಿಶ್ವನಾಥ್ ಅವರು ನಮ್ಮ ನಾಯಕರನ್ನು ಭೇಟಿ ಆಗಿದ್ದಾರೆ, ಮಾತನಾಡುತ್ತಿದ್ದಾರೆ, ಕಾದು ನೋಡಿ. ಬಹಳ ಜನ ನಮ್ಮ ನಾಯಕರನ್ನು ಭೇಟಿ ಮಾಡಿದ್ದಾರೆ. ಹೊರಗೆ ಬಂದ ಮೇಲೆ ಅವರನ್ನೇ ಕೇಳಿ, ನಿಮಗೆ ಉತ್ತರ ಸಿಗಲಿದೆ ಎಂದರು.

ಅಂತಿಮವಾಗಿ ತೀರ್ಮಾನ ಆಗುವ ತನಕ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಬಹಳಷ್ಟು ನಾಯಕರು ಗೌಪ್ಯವಾಗಿ ನಮ್ಮ ನಾಯಕರನ್ನು ಭೇಟಿಯಾಗಿದ್ದಾರೆ. ದಿನೇ ದಿನೇ ಭೇಟಿಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ. ಎಷ್ಟು ಸಂಖ್ಯೆ ಅಂತ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ, ಕಾದು ನೋಡಿ. ಎಲ್ಲಾ ರಿವರ್ಸ್ ಆಗ್ತಾ ಇದೆ ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.

Siddaramaiah: ಕೋಲಾರದಿಂದ ಎರಡನೇ ಸಿಎಂ ಕೊಡಬೇಕೆಂದು ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ: ಕೆ ಶ್ರೀನಿವಾಸಗೌಡ
ಕಾಂಗ್ರೆಸ್‌ಗೆ ಮರಳುತ್ತಾರಾ ಎಚ್‌ ವಿಶ್ವನಾಥ್‌?
ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಈಗ ಬಿಜೆಪಿಯಲ್ಲಿರುವ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. 2019ರಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಜಿಗಿದಿದ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸಿದ ಬಾಂಬೆ ಟೀಂನಲ್ಲಿನ 17 ಶಾಸಕರಲ್ಲಿ ಎಚ್‌ ವಿಶ್ವನಾಥ್‌ ಕೂಡ ಇದ್ದರು. ಆದರೆ, ಎಚ್‌ ವಿಶ್ವನಾಥ್‌ ಅವರಿಗೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಎಚ್‌ ವಿಶ್ವನಾಥ್‌ ಉಪಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದರು.

Zameer Ahmed: ಸಮ್ಮಿಶ್ರ ಸರ್ಕಾರ ಬಂದ್ರೂ ಮುಸ್ಲಿಮರನ್ನು ಸಿಎಂ ಮಾಡಲಿ ನೋಡೋಣ: ಎಚ್‌ಡಿಕೆಗೆ ಜಮೀರ್ ಅಹ್ಮದ್‌ ಓಪನ್ ಚಾಲೆಂಜ್
ಅದರ ಬಳಿಕ ಬಿಜೆಪಿ ಎಚ್‌ ವಿಶ್ವನಾಥ್‌ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಿತ್ತು. ಆದರೆ, ನ್ಯಾಯಾಲಯ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಸಿಗಬೇಕು ಎಂದು ನಿರ್ದೇಶನ ನೀಡಿದ್ದಕ್ಕೆ ಎಚ್‌ ವಿಶ್ವನಾಥ್‌ ಅವರಿಗೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದ ಅನೇಕ ಸಲ ಬಿಜೆಪಿ ನಾಯಕರನ್ನು ಎಚ್‌ ವಿಶ್ವನಾಥ್‌ ಟೀಕಿಸಿದ್ದರು. ಅದಲ್ಲದೇ ಬಿಜೆಪಿ ಸರ್ಕಾರದ ಅನೇಕ ನಿರ್ಧಾರಗಳನ್ನು ಎಚ್‌ ವಿಶ್ವನಾಥ್‌ ಬಹಿರಂಗವಾಗಿಯೇ ಟೀಕಿಸಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ