ಆ್ಯಪ್ನಗರ

ಸರ್ದಾರ್‌ ಪಟೇಲ್‌ಗೆ ಪ್ರಧಾನಿ ಸ್ಥಾನವನ್ನು ನೆಹರೂ ತಪ್ಪಿಸಿಲ್ಲ: ಪರಮೇಶ್ವರ್‌

ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇ ಮೊದಲ ಪ್ರಧಾನಿ

Vijaya Karnataka Web 14 Nov 2018, 11:55 am
ತುಮಕೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಧಾನಿ ಆಗುವ ಅವಕಾಶವನ್ನು ಜವಾಹರಲಾಲ್‌ ನೆಹರು ಕಸಿದುಕೊಂಡರು ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಬಿಜೆಪಿ ರಾಜಕೀಯ ಇತಿಹಾಸ ಓದಿದರೆ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದವರೇ ನೆಹರು ಎಂಬುದು ತಿಳಿಯುತ್ತಿತ್ತು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
Vijaya Karnataka Web ಪರಮೇಶ್ವರ್‌
ಪರಮೇಶ್ವರ್‌


ತುಮಕೂರು ಕೆಪಿಸಿಸಿ ಕಚೇರಿಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

ಕಳೆದ 70 ವರ್ಷದಲ್ಲಿ ಅಭಿವೃದ್ಧಿ ರಾಷ್ಟ್ರಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ದೇಶದ ಅಭಿವೃದ್ಧಿ ದೊಡ್ಡಮಟ್ಟದಲ್ಲಿ ಆಗಿದೆ. ಈ ಅಭಿವೃದ್ಧಿಗೆ ಅಡಿಪಾಯ ಹಾಕಿದವರೇ ನೆಹರು ಅವರು.‌ ಶಿಕ್ಷಣ, ಹಸಿರು ಕ್ರಾಂತಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರವೂ ಮುಂದುವರೆದಿದೆ. ರಾಜಕೀಯ ಇತಿಹಾಸ ತಿಳಿಯದ ಬಿಜೆಪಿ‌ ನೆಹರು ಅವರ ಬಗ್ಗೆ ಅನವಶ್ಯಕ ಟೀಕೆ ಮಾಡುತ್ತಿದ್ದಾರೆ ಎಂದರು.

ನೆಹರು ಸ್ವಾತಂತ್ರ್ಯ ಸಂದರ್ಭದಲ್ಲಿ ಸಾಕಷ್ಟು ಹೋರಾಟ ಮಾಡಿದವರು. ಅವರು ಪ್ರಧಾನಿಯಾಗಲು ಯಾವುದೇ ಲಾಭಿ ಮಾಡಲಿಲ್ಲ. ಎಲ್ಲರ ಸಹಮತದಿಂದಲೇ ಪ್ರಧಾನಿಯಾಗಿದ್ದಾರೆ. ವಲ್ಲಭಭಾಯಿ ಪಟೇಲ್ ಅವರಿಂದ ಪ್ರಧಾನಿ ಹುದ್ದೆ ಕಸಿದುಕೊಂಡರು ಎಂಬ ಹೇಳಿಕೆಯನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹಿಂತರುವುದಾಗಿ ಹೇಳಿ ನೋಟು ಅಮಾನ್ಯೀಕರಣ ಮಾಡಿದರು. ಆದರೆ ಇದರ ಲಾಭ ಕೇವಲ ಉದ್ಯಮಿಗಳಿಗೆ ಆಯಿತೇ ವಿನಃ ಜನಸಾಮಾನ್ಯರಿಗಲ್ಲ.‌ಕಪ್ಪು ಹಣ ಹಿಂತರುವ ಹೇಳಿಕೆಯೂ ಸುಳ್ಳಾಯಿತು. ಇದನ್ನು ಜನಸಾಮಾನ್ಯರು ನೋಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

ಜನಾರ್ದನ ರೆಡ್ಡಿ ಬಂಧಿಸಿರುವ ಸಂಬಂಧ ನ್ಯಾಯಾಲಯ ಈಗಾಗಲೇ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಕೇಳಿದೆ. ಪೊಲೀಸರು ಸಹ ಸೂಕ್ತ ಆಧಾರವಿಲ್ಲದೇ ಯಾರನ್ನು ಬಂಧಿಸುವುದಿಲ್ಲ. ನ್ಯಾಯಾಲಯಕ್ಕೆ ಪೊಲೀಸರು ಸಮರ್ಥ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಜನಾರ್ದನ ರೆಡ್ಡಿ ಬಂಧನ ರಾಜಕೀಯ ಪ್ರೇರಿತವಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿ ಸರಕಾರದ ಕಾರ್ಯಕ್ರಮವಾಗಿದೆ. ಟಿಪ್ಪುಜಯಂತಿ ಅತ್ಯಂತ ಸೂಕ್ಷ್ಮವಾದ್ದರಿಂದ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವವರ ಮೇಲೆ ನಿಗಾ ವಹಿಸುವಂತೆ‌ ನಾನೇ ಸೂಚನೆ ನೀಡಿದ್ದೆ. ಯಾರನ್ನೂ ಉದ್ದೇಶ ಪೂರ್ವಕವಾಗಿ ಬಂಧಿಸಿಲ್ಲ. ಟಿಪ್ಪು ಬಗ್ಗೆ ಟೀಕೆ, ಟಿಪ್ಪಣೆ ವ್ಯಕ್ತಪಡಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರಚೋದನಕಾರಿ ಹೇಳಿಕೆ ಸಹಿಸುವುದಿಲ್ಲ ಎಂದು ಪರಮೇಶ್ವರ್ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ