ಆ್ಯಪ್ನಗರ

ಬೋಟ್‌ ಹೌಸಿಂಗ್‌ ವ್ಯವಸ್ಥೆಗೆ ಇನ್ಫೋಸಿಸ್‌ ಸಹಭಾಗಿತ್ವ:ಕೋಟ

ಕರಾವಳಿ ಪ್ರವಾಸೋದ್ಯಮಕ್ಕೆ ಬೋಟ್‌ ಹೌಸಿಂಗ್‌ ವ್ಯವಸ್ಥೆ ಬಲಪಡಿಸಲು ಇನ್ಫೋಸಿಸ್‌ ಸಂಸ್ಥೆ ಸಹಭಾಗಿತ್ವ ಪಡೆಯಲಾಗುವುದು ಎಂದು ಬಂದರು, ಮೀನುಗಾರಿಕೆ ...

Vijaya Karnataka 28 Aug 2019, 5:00 am
ಬೆಂಗಳೂರು : ಕರಾವಳಿ ಪ್ರವಾಸೋದ್ಯಮಕ್ಕೆ ಬೋಟ್‌ ಹೌಸಿಂಗ್‌ ವ್ಯವಸ್ಥೆ ಬಲಪಡಿಸಲು ಇನ್ಫೋಸಿಸ್‌ ಸಂಸ್ಥೆ ಸಹಭಾಗಿತ್ವ ಪಡೆಯಲಾಗುವುದು ಎಂದು ಬಂದರು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Vijaya Karnataka Web bt


ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿ,''ಕಿರು ಬಂದರುಗಳ ಅಭಿವೃದ್ಧಿ, ಜೆಟ್‌ ನಿರ್ಮಾಣ ಕಾಮಗಾರಿ ಚುರುಕುಗೊಳಿಸಲು ಸೂಚಿಸಲಾಗಿದೆ. ಕಾರವಾರದ ಸರ್ವಋುತು ಬಂದರನ್ನು ಕೇಂದ್ರದ ಸಾಗರಮಾಲಾದಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಡಲು ಕೊರತ ತಡೆಗೆ ಎಡಿಬಿ ನೆರವಿನ ಯೋಜನೆ ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಬಂದರು ವಿಸ್ತರಣೆಗೆ ಭೂಸ್ವಾಧೀನದ ಸಮಸ್ಯೆಯಿದೆ. ಇದನ್ನು ಪರಿಹರಿಸಲು 15 ದಿನದೊಳಗೆ ಉಡುಪಿ ಅಥವಾ ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಮೀನುಗಾರರ ಸೊಸೈಟಿಯಲ್ಲಿ ನೋಂದಣಿ ಮಾಡಿಕೊಂಡಿರುವ 2,500 ಕುಟುಂಬಗಳಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿ ಕೊಡುವ ಪ್ರಸ್ತಾವವಿದೆ. ಇದರ ಮಾರ್ಗಸೂಚಿ ಸಡಿಲಗೊಳಿಸಲಾಗುವುದು,''ಎಂದರು.

ಬೋಟ್‌ ಸಂಪರ್ಕಕ್ಕೆ ಆ್ಯಪ್‌

''ಸುವರ್ಣ ತ್ರಿಭುಜ ಬೋಟ್‌ ದುರಂತದ ಹಿನ್ನೆಲೆಯಲ್ಲಿ ಬೋಟ್‌ಗಳ ಸಂಪರ್ಕ ಸಂಬಂಧ ಇಸ್ರೊ ಸಹಾಯದಿಂದ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೀನುಗಾರರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಯೋಚನೆಯೂ ಇದೆ,'' ಎಂದು ಹೇಳಿದರು.

ಸಾಲ ವಸೂಲಿಗೆ ತಡೆ

''ಮೀನುಗಾರ ಕುಟುಂಬದ 23 ಸಾವಿರ ಮಹಿಳೆಯರ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಇದಕ್ಕೆ 80 ಕೋಟಿ ರೂ. ಅಗತ್ಯವಿದೆ. ಆದರೆ, ಬ್ಯಾಂಕ್‌ನವರು ಸಾಲ ವಸೂಲಿಗೆ ಒತ್ತಡ ತರುತ್ತಿರುವ ದೂರು ಬಂದಿದೆ. ಹಾಗಾಗಿ ಸಾಲ ಮರು ಪಾವತಿ ಪ್ರಕ್ರಿಯೆಗೆ ತಡೆ ನೀಡಲು ಸೂಚಿಸಲಾಗಿದೆ,'' ಎಂದು ಸ್ಪಷ್ಟ ಪಡಿಸಿದರು.

ಬೋಟ್‌ಗಳಿಗೆ 400 ಲೀಟರ್‌ ಡೀಸೆಲ್‌

ಡೀಸೆಲ್‌ ಚಾಲಿತ ಬೋಟ್‌ಗಳಿಗೆ ಸದ್ಯಕ್ಕೆ ಸಬ್ಸಿಡಿ ದರದಲ್ಲಿ 300 ಲೀಟರ್‌ ನೀಡುತ್ತಿದ್ದ ಡೀಸೆಲ್‌ ಪ್ರಮಾಣ 400 ಲೀಟರ್‌ಗೆ ಹೆಚ್ಚಿಸಲು ಸಿಎಂ ಒಪ್ಪಿದ್ದಾರೆ. ಹಾಗೆಯೇ ನಾಡದೋಣಿಗೆ ಸಬ್ಸಿಡಿ ದರದಲ್ಲಿ 178 ಲೀಟರ್‌ ಬದಲು 300 ಲೀಟರ್‌ ಸೀಮೆ ಎಣ್ಣೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪೂಜಾರಿ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ