ಆ್ಯಪ್ನಗರ

‘ಲಂಕೇಶ್‌-ಮೋಹಕ ರೂಪಕಗಳ ನಡುವೆ’ ಕೃತಿ ಬಿಡುಗಡೆ ಮಾಡಿದ ಕವಿ ಸಿದ್ದಲಿಂಗಯ್ಯ ಹೇಳಿಕೆ

ಕನ್ನಡ ಭಾಷೆಯನ್ನು ಮಡಿವಂತಿಕೆಯಿಂದ ಹೊರತಂದು, ಜನಸಾಮಾನ್ಯರ ಮಾತುಗಳನ್ನೇ ಬರವಣಿಗೆಯಲ್ಲಿ ಬಳಸುವ ಮೂಲಕ ಭಾಷೆಗೆ ಹೊಸ ಶಕ್ತಿ ನೀಡಿದ ಕೀರ್ತಿ ಸಾಹಿತಿ ಲಂಕೇಶ್‌ ಅವರಿಗೆ ಸಲ್ಲುತ್ತದೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಸ್ಮರಿಸಿದರು.

Vijaya Karnataka 19 Aug 2019, 5:00 am
ಬೆಂಗಳೂರು : ಕನ್ನಡ ಭಾಷೆಯನ್ನು ಮಡಿವಂತಿಕೆಯಿಂದ ಹೊರತಂದು, ಜನಸಾಮಾನ್ಯರ ಮಾತುಗಳನ್ನೇ ಬರವಣಿಗೆಯಲ್ಲಿ ಬಳಸುವ ಮೂಲಕ ಭಾಷೆಗೆ ಹೊಸ ಶಕ್ತಿ ನೀಡಿದ ಕೀರ್ತಿ ಸಾಹಿತಿ ಲಂಕೇಶ್‌ ಅವರಿಗೆ ಸಲ್ಲುತ್ತದೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಸ್ಮರಿಸಿದರು.
Vijaya Karnataka Web 1808-2-2-15


ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಪಲ್ಲವ ಪ್ರಕಾಶನ ಹಾಗೂ ಕನ್ನಡ ಜನಶಕ್ತಿ ಕೇಂದ್ರ ಭಾನುವಾರ ಆಯೋಜಿಸಿದ್ದ ಲೇಖಕ ಶೂದ್ರ ಶ್ರೀನಿವಾಸ್‌ ಅವರ 'ಲಂಕೇಶ್‌-ಮೋಹಕ ರೂಪಕಗಳ ನಡುವೆ' ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

''ಕರ್ನಾಟಕದಲ್ಲಿ ಮುಖ್ಯಮಂತ್ರಿ, ಮಂತ್ರಿ, ಶಾಸಕರು ಹಾಗೂ ಅಧಿಕಾರಿಗಳಿಗೆ ಜನರು ಧೈರ್ಯವಾಗಿ ಬೈಯ್ಯುವುದನ್ನು ಕಲಿಸಿದವರು ಲಂಕೇಶ್‌.

ಈ ಹಿಂದೆ ಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಅಧಿಕಾರಿಗಳನ್ನು ಕಂಡರೆ ಜನರು ಭಯ ಪಡುತ್ತಿದ್ದರು. ಆದರೆ, ಲಂಕೇಶರು ತಮ್ಮ ಮೊನಚು ಬರಹದಿಂದ ತಪ್ಪು ಮಾಡಿದ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಹಾಗೂ ಗಣ್ಯರ ಪೊರೆಯನ್ನು ಕಳಚಿಬಿಡುತ್ತಿದ್ದರು,'' ಎಂದು ಹೇಳಿದರು.

''ಲಂಕೇಶರು ಯಾವುದೇ ಸಿದ್ಧಾಂತದ ಅಂಧಾನುಯಾಯಿಯಾಗಿರಲಿಲ್ಲ. ಜತೆಗೆ, ಅವರು ಯಾರನ್ನೂ ಅನುಕರಿಸುತ್ತಿರಲಿಲ್ಲ. ಆದರೆ, ಇಂದು ಹಲವು ಯುವ ಸಾಹಿತಿಗಳು ಲಂಕೇಶ್‌, ಅನಂತಮೂರ್ತಿ, ತರಾಸು, ಅನಕೃ ಇತರೆ ಸಾಹಿತಿಗಳನ್ನು ಅಂಧಾನುಕರಣೆ ಮಾಡಲು ಹೋಗುತ್ತಿದ್ದಾರೆ. ಅವರಲ್ಲಿನ ಉತ್ತಮ ಅಂಶಗಳನ್ನು ಬಿಟ್ಟು, ಅವರು ಮದ್ಯಪಾನ ಮಾಡುತ್ತಿದ್ದ ರೀತಿ, ಸಿಗರೇಟು ಸೇದುತ್ತಿದ್ದ ರೀತಿಗಳನ್ನು ಅನುಕರಿಸುವುದನ್ನು ಕಂಡಿದ್ದೇನೆ. ಯುವ ಸಾಹಿತಿಗಳು ಇದನ್ನು ಬಿಡಬೇಕು,'' ಎಂದು ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹೈಕೋರ್ಟ್‌ ನಿವೃತ್ತ ನ್ಯಾ.ಎ.ಜೆ.ಸದಾಶಿವ, ''ಪತ್ರಿಕೆಯೊಂದು ಸರಕಾರವನ್ನು ಕಟ್ಟಬಹುದು ಹಾಗೂ ಉರುಳಿಸಬಹುದು ಎಂಬುದನ್ನು ಲಂಕೇಶ್‌ ತೋರಿಸಿಕೊಟ್ಟರು. ಅವರು ಯಾರಿಗೂ ತಲೆಬಾಗಲಿಲ್ಲ. ತಾವು ಹೇಳಿದ್ದು ಸತ್ಯ ಎಂದು ಪ್ರತಿಪಾದಿಸುತ್ತಿದ್ದರು. ಲಂಕೇಶರ ಎರಡು ನಾಟಕಗಳಲ್ಲಿ ಅಭಿನಯಿಸಿದ್ದೆ,'' ಎಂದು ಸ್ಮರಿಸಿದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌,''ಹಿಂದುತ್ವದ ವಿರೋಧಿಯಾಗಿದ್ದ ಲಂಕೇಶರು, ಜಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿಟ್ಟು, ಅದರಂತೆ ಬದುಕಿದರು. ಅವರು ವ್ಯಕ್ತಿಗಳನ್ನು ಎಂದೂ ಜಾತಿಯ ಆಧಾರದ ಮೇಲೆ ಗುರುತಿಸುತ್ತಿರಲಿಲ್ಲ,''ಎಂದರು.

ಕೃತಿಯ ಕರ್ತೃ ಶೂದ್ರ ಶ್ರೀನಿವಾಸ್‌ ಮಾತನಾಡಿ, ''ಲಂಕೇಶ್‌ ಅವರಿಗೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಕಂಡರೆ ಹೆಚ್ಚು ಖುಷಿಯಾಗುತ್ತಿತ್ತು. ಹಲವು ಸಾಹಿತಿಗಳು, ಹೋರಾಟಗಾರರು, ಬರಹಗಾರರು ಹಾಗೂ ರಾಜಕಾರಣಿಗಳನ್ನು ಅವರು ಬೆಳೆಸಿ, ಪ್ರೋತ್ಸಾಹಿಸಿದ್ದಾರೆ. ಆ ಎಲ್ಲಾ ಅಂಶಗಳನ್ನು ಈ ಕೃತಿಯಲ್ಲಿ ಪ್ರಸ್ತುತಪಡಿಸಲಾಗಿದೆ,'' ಎಂದರು.

ಪ್ರೊ.ಸಿರಾಜ್‌ ಅಹಮದ್‌, ವಡ್ಡಗೆರೆ ಚಿನ್ನಸ್ವಾಮಿ, ಪಲ್ಲವ ಪ್ರಕಾಶನದ ಪಲ್ಲವ ವೆಂಕಟೇಶ್‌, ಸಿ.ಕೆ.ರಾಮೇಗೌಡ ಸೇರಿದಂತೆ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ