ಆ್ಯಪ್ನಗರ

ಬಿಎಸ್‌ವೈ ಬಜೆಟ್‌: ಸಂಪನ್ಮೂಲ ಕೊರತೆಯಿಲ್ಲ, ಹೊಸ ಯೋಜನೆಗೆ ಹಣ ಹೊಂದಿಸುವುದೇ ಸವಾಲು

ಕನಿಷ್ಠ ಶೇ.10ರಷ್ಟು ಹೆಚ್ಚಳ ಮಾಡಿದರೂ ಹೊಸ ಬಜೆಟ್‌ನ ಗಾತ್ರ 2.50 ಲಕ್ಷ ಕೋಟಿ ರೂ. ದಾಟಲಿದೆ. 30ರಿಂದ 40 ಸಾವಿರ ಕೋಟಿ ರೂ. ಸಾಲವನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು. ಇಷ್ಟರ ಬಳಿಕವೂ ಹೊಸ ಯೋಜನೆಗಳಿಗೆ ಹಣ ಹೊಂದಾಣಿಕೆ ಹೇಗೆ ಎಂಬ ಒತ್ತಡದಲ್ಲಿಸರಕಾರ ಇದ್ದಂತಿದೆ.

Vijaya Karnataka Web 14 Feb 2020, 7:21 am
- ಶಶಿಧರ ಹೆಗಡೆ, ಬೆಂಗಳೂರು
Vijaya Karnataka Web BSY Budget 2020

ಆರ್ಥಿಕ ಹಿಂಜರಿತದ ನಡುವೆಯೇ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿದೆ. ವರ್ಷಾರಂಭದಲ್ಲಿ ಮಂದಗತಿಯಲ್ಲಿದ್ದ ಸಂಪನ್ಮೂಲ ಕ್ರೋಡೀಕರಣ ಪ್ರಕ್ರಿಯೆ ಇದೀಗ ಚುರುಕುಗತಿ ಪಡೆದಿದೆ. ಇದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಬಜೆಟ್‌ ಲೆಕ್ಕಾಚಾರಕ್ಕೆ ಪೂರಕ ವಾತಾವಾರಣ ಸೃಷ್ಟಿಸಿದೆ. ಆದರೆ, ಸಂಬಳ-ಸಾರಿಗೆ ಹಾಗೂ ಸಬ್ಸಿಡಿ ಯೋಜನೆಗಳಿಗೆ ಅಗಾಧ ಪ್ರಮಾಣದ ವೆಚ್ಚವಾಗುವುದರಿಂದ ಹೊಸ ಯೋಜನೆಗಳಿಗೆ ಹಣ ಹೊಂದಿಸಲು ಸಿಎಂ ಯಾವ ಮ್ಯಾಜಿಕ್‌ ಮಾಡುತ್ತಾರೆ ಎಂಬ ಕುತೂಹಲವಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಯಾದ ಬಳಿಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂಥ ಯಾವುದೇ ಯೋಜನೆ ಪ್ರಕಟಗೊಂಡಿಲ್ಲ. ರಾಜ್ಯದಲ್ಲಿ ಪ್ರವಾಹ ಬಂದಿದ್ದರಿಂದ ಬಿಎಸ್‌ವೈ ಸಿಎಂ ಆಗುತ್ತಿದ್ದಂತೆ ಪರಿಹಾರ ಕಾರ್ಯಾಚರಣೆಯತ್ತ ಲಕ್ಷ್ಯ ಹರಿಸಬೇಕಾಯಿತು. ಅದಾದ ಬಳಿ ಸಂಪುಟ ವಿಸ್ತರಣೆ, ಉಪ ಚುನಾವಣೆಯಲ್ಲೆ 6 ತಿಂಗಳು ಕಳೆದು ಹೋಗಿದೆ. ಹಾಗಾಗಿ 2020-2021ರ ಬಜೆಟ್‌ನಲ್ಲಿ ಈ ಸರಕಾರದ ದಿಕ್ಸೂಚಿಯನ್ನು ತೋರಿಸಬೇಕಿದೆ. ಆರ್ಥಿಕ ಸಂಕಷ್ಟ, ಕೇಂದ್ರದ ಸಹಾಯಾನುಧಾನ ಕಡಿತದ ಪರಿಸ್ಥಿತಿಯ ನಡುವೆಯೂ ತನ್ನ ಅಸ್ತಿತ್ವ ತೋರಲು ಸರಕಾರ ಈ ಬಾರಿ ಇಚ್ಛಾಶಕ್ತಿ ಪ್ರದರ್ಶಿಸಲೇಬೇಕಿದೆ.

ಮಾರ್ಚ್ 5ರಂದು ಬಜೆಟ್‌ ಮಂಡನೆಯಾಗಲಿದ್ದು, ಬಿಎಸ್‌ವೈ ಅವರು ಸತತವಾಗಿ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಅವರು ತೆರಿಗೆ ಸಂಗ್ರಹ ಸಂಬಂಧಿತ ಇಲಾಖೆಗಳ ಸಭೆ ನಡೆಸಿದಾಗ ಸಂಪನ್ಮೂಲ ಸಂಗ್ರಹದಲ್ಲಿ ಹಿನ್ನಡೆಯಾದದ್ದು ಗಮನಕ್ಕೆ ಬಂದಿತ್ತು. ಅಬಕಾರಿ ಹೊರತುಪಡಿಸಿ ಇತರ ಮೂಲಗಳಲ್ಲಿ ತೆರಿಗೆ ಖೋತಾ ಆಗಿತ್ತು. ಆದರೆ, ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ತೆರಿಗೆ ಸಂಗ್ರಹದಲ್ಲಿ ಶೇ.73.31ರಷ್ಟು ಗುರಿ ಸಾಧನೆಯಾಗಿದೆ. ವಾಣಿಜ್ಯ ತೆರಿಗೆ, ಮೋಟಾರು ವಾಹನ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲೂ ಚೇತರಿಕೆ ಕಂಡಿದೆ. ಇದರಿಂದಾಗಿ ವಿತ್ತ ಖಾತೆ ಹೊಂದಿರುವ ಸಿಎಂ ತುಸು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಬಜೆಟ್‌!

2019-20ರಲ್ಲಿ 1,81,863 ಕೋಟಿ ರೂ. ರಾಜಸ್ವ ಸ್ವೀಕೃತಿ ಗುರಿಯಿದ್ದು, ಡಿಸೆಂಬರ್‌ ಅಂತ್ಯಕ್ಕೆ 1,29,657 ಕೋಟಿ ರೂ.(ಶೇ.71.29) ರಾಜಸ್ವ ಜಮೆಯಾಗಿದೆ. ಯಾವಾಗಲೂ ಕಡೆಯ ತ್ರೈಮಾಸಿಕದಲ್ಲೆ ತೆರಿಗೆ ಸಂಗ್ರಹ ಕ್ಷಿಪ್ರಗತಿ ಪಡೆಯುತ್ತದೆ. ಇದರಿಂದಾಗಿ ಗುರಿ ತಲುಪಲು ಸಾಧ್ಯವಾಗುತ್ತದೆ. ಹಾಗಾಗಿ ಈ ಬಾರಿಯೂ ತೆರಿಗೆ ಕೊರತೆಯಾಗುವ ಪ್ರಶ್ನೆಯಿಲ್ಲವೆಂದು ಹಣಕಾಸು ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹೆಚ್ಚುವರಿ ಹಣ ತರೋದು ಎಲ್ಲಿಂದ?
ಹಾಲಿ ವಿತ್ತ ವರ್ಷದ ಬಜೆಟ್‌ ಗಾತ್ರ 2,34,153 ಕೋಟಿ ರೂ. ಇದೆ. ಇದರಲ್ಲಿ 48.876 ಕೋಟಿ ರೂ. ಸಾಲವೂ ಸೇರಿಕೊಂಡಿದೆ. ಕನಿಷ್ಠ ಶೇ.10ರಷ್ಟು ಹೆಚ್ಚಳ ಮಾಡಿದರೂ ಹೊಸ ಬಜೆಟ್‌ನ ಗಾತ್ರ 2.50 ಲಕ್ಷ ಕೋಟಿ ರೂ. ದಾಟಲಿದೆ. ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಅನುಸಾರ ರಾಜ್ಯ ಸರಕಾರ ತೆಗೆದುಕೊಳ್ಳುವ ಸಾಲದ ಪ್ರಮಾಣ ಜಿಡಿಪಿಯ ಶೇ.25ರ ಒಳಗಿರಬೇಕು. ಪ್ರಸ್ತುತ ಈ ಪ್ರಮಾಣ ಶೇ.20.60ರಷ್ಟಿದೆ. ಹಾಗಾಗಿ ಇನ್ನು 30ರಿಂದ 40 ಸಾವಿರ ಕೋಟಿ ರೂ. ಸಾಲವನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು. ಇಷ್ಟರ ಬಳಿಕವೂ ಹೊಸ ಯೋಜನೆಗಳಿಗೆ ಹಣ ಹೊಂದಾಣಿಕೆ ಹೇಗೆ ಎಂಬ ಒತ್ತಡದಲ್ಲಿಸರಕಾರ ಇದ್ದಂತಿದೆ.

ಯಾಕೆಂದರೆ ವಾರ್ಷಿಕ ಸುಮಾರು 75 ಸಾವಿರ ಕೋಟಿ ರೂ. ಸಂಬಳ ನೀಡಲು ಖರ್ಚಾಗುತ್ತದೆ. ನಾನಾ ಭಾಗ್ಯದಾಯಕ ಹಾಗೂ ಸಬ್ಸಿಡಿ ಯೋಜನೆಗಳಿಗೆ 85 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಇದರ ಹೊರತಾಗಿ ಸುಮಾರು 90 ಸಾವಿರ ಕೋಟಿ ರೂ.(2020-2021ರ ಬಜೆಟ್‌ ಗಾತ್ರ 2.50 ಲಕ್ಷ ಕೋಟಿಯಾದರೆ) ಉಳಿಯಲಿದೆ. ಇದು ಅತ್ಯಂತ ಸರಳ ಲೆಕ್ಕಾಚಾರ ಎಂದುಕೊಂಡರೂ ಉಳಿಕೆ ಅನುದಾನವನ್ನು ನಾನಾ ಇಲಾಖೆಗಳಿಗೆ ನೀಡಬೇಕಾಗುತ್ತದೆ. ಅಲ್ಲಿಗೆ ತಿಜೋರಿಯ ಕೀಲಿಕೈ ತೆಗೆದು ವಾರ್ಷಿಕ ಬಟವಾಡೆಯನ್ನು ಪೂರೈಸಿದಂತಾಗಲಿದೆ. ಹಾಗಾಗಿ ಕೃಷಿಪರ, ಅಭಿವೃದ್ಧಿಪರ, ಜನಪರ ಎನ್ನುತ್ತಿರುವ ಸಿಎಂ ಈ ಉದ್ದೇಶಕ್ಕೆ ಎಂತಹ ಮಂತ್ರದಂಡ ಪ್ರಯೋಗ ಮಾಡಿಯಾರು ಎನ್ನುವುದೇ ಕೌತುಕದ ವಿಷಯವಾಗಿದೆ.

ವಿಮೆಯ ಜವಾಬ್ದಾರಿ ಸರಕಾರಕ್ಕೆ, ದುಡ್ಡು ಖಾಸಗಿ ಕಂಪನಿಗೆ, ಇನ್ನು ರೈತರು ಹೆಸರಿಗೆ!

ವೆಚ್ಚ ಕಡಿತ ಸುಲಭವಲ್ಲ
ಹೊಸ ಯೋಜನೆಗಳಿಗೆ ಹಣ ಹೊಂದಿಸಲು ವೆಚ್ಚ ಕಡಿತ ಮಾಡಲಾಗುತ್ತದೆ. ನಾನಾ ಇಲಾಖೆಗಳ ಅನುದಾನಕ್ಕೆ ಸ್ವಲ್ಪ ಕತ್ತರಿ ಬೀಳಬಹುದು ಎಂಬ ಮಾತು ಸರಕಾರದ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ವೆಚ್ಚ ಕಡಿತವೂ ಅಂದುಕೊಂಡಷ್ಟು ಸುಲಭವಲ್ಲ. ಜಲಸಂಪನ್ಮೂಲ ಇಲಾಖೆಗೆ ಈ ಬಾರಿ ಕನಿಷ್ಠ 20 ಸಾವಿರ ಕೋಟಿ ರೂ. ಮೀಸಲಿಡಬೇಕಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ-3ರ(ಯುಕೆಪಿ-3) ಬಗ್ಗೆ ಗಾಂಭೀರ್ಯವಿದ್ದರೆ 50 ಸಾವಿರ ಕೋಟಿ ರೂ. ತೆಗೆದಿರಿಸಬೇಕಾಗುತ್ತದೆ. ಜತೆಗೆ ಬೆಳೆ ಹಾನಿ, ದರ ಇಳಿಕೆ ಹಿನ್ನೆಲೆಯಲ್ಲಿ ರೈತರ ನಿರೀಕ್ಷೆಯೂ ದೊಡ್ಡದಿದೆ. ನವೆಂಬರ್‌ನಲ್ಲಿ ವಿಶ್ವ ಬಂಡವಾಳ ಆಕರ್ಷಣೆ ಸಮಾವೇಶ ಇರುವುದರಿಂದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ.

ಕೇಂದ್ರದ ತೆರಿಗೆ ಹಂಚಿಕೆ ಕಡಿತ
ಕಳೆದ ಡಿಸೆಂಬರ್‌ ಹೊತ್ತಿಗೆ ಕೇಂದ್ರ ಸರಕಾರದ ತೆರಿಗೆ ಹಂಚಿಕೆಯಲ್ಲಿ ಶೇ.63.15 ಬಂದಿತ್ತು. ಈ ಬಾರಿ ಶೇ.56.62ರಷ್ಟು ಮಾತ್ರ ಬಂದಿದೆ. 2019-20ರಲ್ಲಿ ಈ ಮೂಲದಿಂದ 22,536 ಕೋಟಿ ರೂ. ಸಂದಾಯವಾಗಿದ್ದು, ಇನ್ನೂ 17,270 ಕೋಟಿ ರೂ. ಬಾಕಿಯಿದೆ. ಇದಲ್ಲದೆ ನಷ್ಟದಲ್ಲಿರುವ ನಿಗಮ ಮಂಡಳಿಗಳು ಹಾಗೂ ಕೆಲ ಕ್ಷೇತ್ರಗಳಲ್ಲಿ ಅನಗತ್ಯ ವೆಚ್ಚದಿಂದಾಗಿ ತೆರಿಗೆಯೇತರ ರಾಜಸ್ವದಲ್ಲಿ ಇಳಿಮುಖವಾಗಿದೆ.

ಹೆಸರಿಗಷ್ಟೇ ಬಡ ರೈತರಿಗೆ ಫಸಲ್‌ ಬಿಮಾ, ಲಾಭ ಹೊಡೆಯುತ್ತಿರೋದು ಮಾತ್ರ ಖಾಸಗಿ ವಿಮಾ ಕಂಪನಿಗಳು!

ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ತೆರಿಗೆ ಸಂಗ್ರಹ ಎಷ್ಟು?
ವಾಣಿಜ್ಯ ತೆರಿಗೆ 43,772 ಕೋಟಿ ರೂ.(ಶೇ.74.75)
ಅಬಕಾರಿ 16,218 ಕೋಟಿ ರೂ.(ಶೇ.77.41)
ಮೋಟಾರು ವಾಹನ 4,968 ಕೋಟಿ ರೂ.(ಶೇ.69.97)
ಮದ್ರಾಂಕ ಮತ್ತು ನೋಂದಣಿ 8,395 ಕೋಟಿ ರೂ.(ಶೇ.70.98)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ