ಆ್ಯಪ್ನಗರ

ಬಿಎಸ್‌ವೈಗೆ 18 ಸವಾಲು: ಸ್ವಪಕ್ಷೀಯರ ಹಿತರಕ್ಷಣೆ, ಹೈಕಮಾಂಡ್‌ನ ತೃಪ್ತಿಯ ತಲೆಬಿಸಿ

ಮೈತ್ರಿ ಸರಕಾರ ಪತನಗೊಳಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪ ಮುಂದೆ ಬೆಟ್ಟದಂಥ ಸಮಸ್ಯೆಗಳು ತಲೆಎತ್ತಿ ನಿಂತಿವೆ.

Vijaya Karnataka 28 Jul 2019, 7:23 am
ಬೆಂಗಳೂರು: ಮೈತ್ರಿ ಸರಕಾರ ಪತನಗೊಳಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪ ಮುಂದೆ ಬೆಟ್ಟದಂಥ ಸಮಸ್ಯೆಗಳು ತಲೆಎತ್ತಿ ನಿಂತಿವೆ. ಅವುಗಳನ್ನು ಎದುರಿಸಿ ಸುಭದ್ರ, ಪಾರದರ್ಶಕ, ಕ್ರಿಯಾಶೀಲ ಹಾಗೂ ಸಮತೋಲಿತ ಸರಕಾರ ನೀಡುವ ಸವಾಲು ಅವರ ಮುಂದಿದೆ.
Vijaya Karnataka Web BNG-2707-2-2-BSY5


ಅಲ್ಪಮತದ ಸರಕಾರಕ್ಕೆ ಸದನದಲ್ಲಿ 'ವಿಶ್ವಾಸ'ದ ಮುದ್ರೆ ಪಡೆಯುವ ಜತೆಗೆ, ಆಡಳಿತಾತ್ಮಕ ಹಾಗೂ ರಾಜಕೀಯ ಸವಾಲುಗಳು ಸಾಕಷ್ಟಿವೆ. ಹೀಗಾಗಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯಡಿಯೂರಪ್ಪನವರ ಆಡಳಿತದ ಹಾದಿಯಲ್ಲಿ ಹೂವಿಗಿಂತಲೂ ಮುಳ್ಳೇ ಹೆಚ್ಚಿವೆ. ಇದೆಲ್ಲವನ್ನು ಮೆಟ್ಟಿ ನಿಲ್ಲುವ ಜತೆಗೆ ಹದ ತಪ್ಪದ ಆಡಳಿತ ನೀಡಿ ರಾಷ್ಟ್ರೀಯ ವರಿಷ್ಠರ 'ಅವಿಶ್ವಾಸ'ಕ್ಕೆ ಪಾತ್ರವಾಗದೇ ಇರುವ ಗುರುತರ ಜವಾಬ್ದಾರಿಯೂ ಇದೆ. ಕಾಡಿ-ಹೋರಾಡಿ ಪಡೆದ ಅಧಿಕಾರ ಉಳಿಸಿಕೊಳ್ಳುವುದು ಯಡಿಯೂರಪ್ಪ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಲಿದೆ.

ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರಿಂದ ಒಂದು ವಾರಗಳ ಕಾಲಾವಕಾಶ ಪಡೆದಿರುವ ಯಡಿಯೂರಪ್ಪ ಸೋಮವಾರ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ. ಮೈತ್ರಿ ಸರಕಾರ ಪತನಗೊಳಿಸುವ ಸಂದರ್ಭದ ಸಂಖ್ಯಾಬಲ ಕಾಯ್ದುಕೊಳ್ಳಲೇಬೇಕಿದ್ದು, ಆ ಬಳಿಕ ಎದುರಾಗುವ ಉಪಚುನಾವಣೆಯಲ್ಲಿ ಪ್ರತಿಯೊಬ್ಬ ಅತೃಪ್ತ ಶಾಸಕರನ್ನೂ ಗೆಲ್ಲಿಸಿಕೊಳ್ಳಬೇಕಿದೆ.

ಹೈಕಮಾಂಡ್‌ ಕಣ್ಗಾವಲು
ಬಿಎಸ್‌ವೈ ಮೊದಲ ಬಾರಿ ಸಿಎಂ ಆಗಿದ್ದಾಗ ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಶನ್‌ ಪ್ರಕರಗಳು ಅಧಿಕಾರಕ್ಕೆ ಸಂಚಕಾರ ತಂದಿದ್ದವು. ಈ ಹಿಂದೆ ನಡೆದ ತಪ್ಪುಗಳಿಗೆ ಯಡಿಯೂರಪ್ಪ ಆಪ್ತರು ಹಾಗೂ ಹತ್ತಿರದ ಬಂಧುಗಳೇ ಕಾರಣ ಎಂಬ ಆರೋಪ ಸಾರ್ವಜನಿಕವಾಗಿ ಇನ್ನೂ ಹಸಿರಾಗಿದೆ. ಅಂಥವರನ್ನು ದೂರವಿಟ್ಟು ಆಡಳಿತ ನಡೆಸಬೇಕಾದ ಸವಾಲು ಅವರಿಗಿದೆ.
ಈ ಬಾರಿ ಹೈಕಮಾಂಡ್‌ ಪ್ರಬಲವಾಗಿದ್ದು, ಮೋದಿ ಮತ್ತು ಅಮಿತ್‌ ಶಾಗೆ ಸಡ್ಡು ಹೊಡೆದು ಮುನ್ನುಗ್ಗಲು ಅವಕಾಶವಿಲ್ಲ. ರಾಜ್ಯದಲ್ಲಾಗುವ ತಪ್ಪು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಖಭಂಗವನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಭ್ರಷ್ಟಾಚಾರ ಹಾಗೂ ಹಗರಣ ರಹಿತ ಆಡಳಿತ ನೀಡುವುದೇ ಈಗ ಸವಾಲು.



ರಾಜಕೀಯ ಸವಾಲುಗಳು
- ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು.
- ಅತೃಪ್ತ ಶಾಸಕರು ದೋಸ್ತಿ ಪಾಳಯಕ್ಕೆ ಮರಳದಂತೆ ಕಾಯುವುದು.
- ಅತೃಪ್ತರು ಅನರ್ಹಗೊಂಡರೆ ಕಾನೂನು ಹೋರಾಟ ಬೆಂಬಲಿಸುವುದು.
- ವಲಸಿಗರು-ಮೂಲ ನಿವಾಸಿಗಳ 'ತೃಪ್ತಿ' ಹಾಳಾಗದ ರೀತಿ ಸಂಪುಟ ರಚನೆ
- ರಾಜೀನಾಮೆ ಕೊಟ್ಟ ಶಾಸಕರನ್ನು ಮತ್ತೆ ಗೆಲ್ಲಿಸಿಕೊಂಡು ಬರುವುದು.
- ಸಚಿವ ಸ್ಥಾನ ಸಿಗದ ಸ್ವಪಕ್ಷೀಯರು ಬಂಡೇಳದಂತೆ ನೋಡಿಕೊಳ್ಳುವುದು.

ಆಡಳಿತಾತ್ಮಕ ಸವಾಲು
- ಆಮೆಗತಿಯಲ್ಲಿರುವ ಆಡಳಿತಕ್ಕೆ ವೇಗ ಒದಗಿಸುವುದು.
- ಸಾಲಮನ್ನಾದಿಂದ ಸೃಷ್ಟಿಯಾಗಿರುವ ಆರ್ಥಿಕ ಸಮಸ್ಯೆಗೆ ಪರಿಹಾರ
- ಬರದಿಂದ ಹೈರಾಣಾಗಿರುವ ಗ್ರಾಮೀಣ ಬದುಕಿಗೆ ಸ್ಪಂದನೆ.
- ಕೇಂದ್ರ ಸರಕಾರದಿಂದ ಯಥೇಚ್ಛ ಅನುದಾನ ತರುವುದು.
- ಇಲಾಖೆಗಳ ನಡುವಿನ ಸಮನ್ವಯ ಮರುಸ್ಥಾಪನೆ.
- ಸ್ವಜನ ಪಕ್ಷಪಾತದ ಆರೋಪಕ್ಕೆ ಅವಕಾಶ ನೀಡದಿರುವುದು.

ಪಕ್ಷದ ಆಂತರಿಕ ಸವಾಲು
- ಸಚಿವ ಸ್ಥಾನ ತ್ಯಾಗ ಮಾಡಿದ ಹಿರಿಯರನ್ನು ಸಮಾಧಾನಿಸುವುದು.
- ಪಕ್ಷ ಹಾಗೂ ಸರಕಾರದ ಮಧ್ಯೆ ಸಮನ್ವಯತೆ ಕಾಯ್ದುಕೊಳ್ಳುವುದು.
- ವಲಸಿಗರಿಂದ ಆಯಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಹಿತ ಕಾಯುವುದು.
- ಪಕ್ಷದ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸುವುದು.
- ಪಕ್ಷದ ಹಿರಿಯರ ಮುನಿಸಿಗೆ ಕಾರಣವಾಗುವ ಸಿಟ್ಟು-ಸೆಡವಿನ ನಿಯಂತ್ರಣ
- ಹೈಕಮಾಂಡ್‌ ಆಕ್ರೋಶಕ್ಕೆ ಒಳಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ