ಆ್ಯಪ್ನಗರ

ನಂದಿನಿ ದೇಶಿ ಹಾಲು ಬಿಡುಗಡೆ ಮಾಡಿದ ಸಿಎಂ ಬಿಎಸ್‌ವೈ: ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ?

ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ದೇಶಿ ಹಾಲನ್ನು ಗುರುವಾರದಿಂದ ಮಾರಾಟ ಮಾಡಲು ಆರಂಭಿಸಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಈ ವೇಳೆ, ಪ್ರೋತ್ಸಾಹ ಧನ ಹೆಚ್ಚಳದ ಬಗ್ಗೆಯೂ ಚರ್ಚೆ ನಡೆದಿದೆ.

Vijaya Karnataka Web 16 Jan 2020, 4:31 pm
ಬೆಂಗಳೂರು: ಕೆಎಂಎಫ್ 'ನಂದಿನಿ' ಬ್ಯ್ರಾಂಡ್‌ನ 'ದೇಶಿ ಹಾಲು' ಸೇರಿ ಇತರೆ ಉತ್ಪನ್ನಗಳನ್ನು ಸಿಎಂ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
Vijaya Karnataka Web yediyurappa ckm vk


ಕೆಎಂಎಫ್ 'ನಂದಿನಿ' ಬ್ರ್ಯಾಂಡ್‌ನ 'ದೇಶಿ ಹಾಲು' , ಚೀಸ್, ಐಸ್ ಕ್ರೀಂ ಉತ್ಪನ್ನಗಳನ್ನು ಸಿಎಂ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದರು. ಈ ಸಂಬಂಧ ಮಾಹಿತಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮೊದಲ ಬಾರಿಗೆ ದೇಶಿ ಹಾಲನ್ನು ಬಿಡುಗಡೆ ಮಾಡಲಾಗಿದೆ. ರೈತರ ಕೈಗಾರಿಕೆಯಾಗಿರುವ ಕೆಎಂಎಫ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿಎಂ ಸಹಿತ ರಾಜ್ಯ ಸರಕಾರ ಸಹಕಾರ ನೀಡಬೇಕಿದೆ. ಎಲ್ಲಾ 14 ಒಕ್ಕೂಟಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳಸಬಹುದು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾದ ಅಗತ್ಯ ಇದೆ ಎಂದೂ ಜಾರಕಿಹೊಳಿ ತಿಳಿಸಿದರು.

2008ರಲ್ಲಿ ಮೊದಲ ಬಾರಿಗೆ ಹೈನುಗಾರರಿಗೆ ಪ್ರತಿ ಲೀ. ಹಾಲಿಗೆ ಎರಡು ರೂ. ಪ್ರೋತ್ಸಾಹಧನವನ್ನು ಯಡಿಯೂರಪ್ಪ ಪ್ರಕಟಿಸಿದ್ದರು. ಇದು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ನಂತರ ಬಂದಂತಹ ಸರಕಾರಗಳು ಇದಕ್ಕೆ ಬೆಂಬಲಿಸಿದ್ದು, ಹಾಲಿ ಲೀ.ಗೆ 5 ರೂ. ಇರುವ ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಬೇಕು ಎಂದು ಸಿಎಂ ಬಳಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿನಂತಿಸಿದರು.

ಹೆಚ್ಚಿದ ಬೇಡಿಕೆ , ಇಂದಿನಿಂದ ರಾಜ್ಯಾದ್ಯಂತ ‘ದೇಶಿ ಹಾಲು’ ಮಾರಾಟ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಹೈನೋದ್ಯಮದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನವನ್ನು ಹೊಂದಿದೆ. ಪ್ರತಿನಿತ್ಯ ಕೆಎಂಎಫ್‌ನಿಂದ ಗರಿಷ್ಠ 84.43 ಲಕ್ಷ ಲೀ. ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಇದು ಶೇ.80ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವರದಾನವಾಗಿದೆ. ಈ ದಿನ ದೇಶಿ ಹಾಲು ಹಾಗೂ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ಕೆಎಂಎಫ್‌ಗೆ ಸರಕಾರದ ಬೆಂಬಲ ಇದೆ," ಎಂದು ತಿಳಿಸಿದರು. ಆದರೆ, ಪ್ರೋತ್ಸಾಹ ಧನ ಹೆಚ್ಚಳ ಪ್ರಸ್ತಾಪದ ಕುರಿತು ಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಐಸ್‌ಕ್ರೀಂ ಉದ್ಯಮಕ್ಕೆ ಕ್ಷೀರ ಪುಡಿ ಕೊರತೆ: ಬರ, ನೆರೆಗೆ ಹಾಲಿನ ಪೂರೈಕೆ ಇಳಿಕೆ

ಸಚಿವರಾದ ಬಸವರಾಜ ಬೊಮ್ಮಾಯಿ, ಪ್ರಭು ಚವ್ಹಾಣ್, ಕೆಎಂಎಫ್ ಎಂಡಿ ಸತೀಶ್, ಸರಕಾರದ ಕಾರ್ಯದರ್ಶಿ ರಶ್ಮಿ ಮಹೇಶ್, ಕೆಎಂಎಫ್ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರ ಅಧಿಕಾರಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇನ್ನೊಂದೆಡೆ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಉತ್ಸವಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಈ ವೇಳೆ ಪಾಲ್ಗೊಂಡಿದ್ದರು. ಧಾರವಾಡ, ಕೋಲಾರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ಪ್ರದೇಶಗಳ ಖಾದಿ ಉತ್ಪನ್ನಗಳನ್ನು ಮಾರಾಟಕ್ಕಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ