ಆ್ಯಪ್ನಗರ

ಬಿಜೆಪಿ ಶಾಸಕರ ಸಭೆ: ಬೇಡಿಕೆ ಈಡೇರಿಕೆ ಬಿಎಸ್‌ವೈ ಪಾಲಿಗೆ ಸವಾಲು!

ಮಂಗಳವಾರ ಕೂಡಾ ಬಿಜೆಪಿ ಶಾಸಕರ ಜೊತೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಆದರೆ ಶಾಸಕರ ಅಸಮಾಧಾನ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವುದು ಬಿಎಸ್‌ವೈ ಪಾಲಿಗೆ ಸವಾಲಾಗಿದೆ.

Vijaya Karnataka Web 5 Jan 2021, 9:24 am
ಬೆಂಗಳೂರು: ಅನುದಾನ ಕೊರತೆ, ಅಭಿವೃದ್ದಿ ಹಿನ್ನಡೆ, ಅಧಿಕಾರಿಗಳ ಸ್ಪಂದನೆ ವಿಚಾರವಾಗಿ ಸಾಲು ಸಾಲು ದೂರುಗಳನ್ನು ನೀಡಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಶಾಸಕರನ್ನು ಸಮಾಧಾನ ಪಡಿಸುವುದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಸೋಮವಾರ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದ ಶಾಸಕರ ಸಭೆಯನ್ನು ಯಡಿಯೂರಪ್ಪ ನಡೆಸಿದ್ದರು. ಮಂಗಳವಾರ ಮತ್ತೆ 16 ಜಿಲ್ಲೆಗಳ 55 ಮಂದಿ ಶಾಸಕರ ಜೊತೆಗೆ ಸಭೆ ನಡೆಸಲಿದ್ದಾರೆ.
Vijaya Karnataka Web bjp meeting


ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ,ಉತ್ತರ ಕನ್ನಡ, ಹಾಸನ, ಕೊಡಗು,ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ 55 ಮಂದಿ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕಮಲ ಭಿನ್ನಮತಕ್ಕೆ ಬ್ರೇಕ್‌: ಶಾಸಕರ ಸಮಸ್ಯೆ ಆಲಿಸಲು ಬಿಎಸ್‌ವೈ ಸಭೆ

ಸೋಮವಾರ ನಡೆದ ಸಭೆಯಲ್ಲಿ ಬಿಎಸ್‌ವೈ ಮುಂದೆ ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅನುದಾನ ಕೊರತೆ, ಅಭಿವೃದ್ದಿ ಕಾರ್ಯಗಳಲ್ಲಿ ಹಿನ್ನಡೆ ಹಾಗೂ ಅಧಿಕಾರಿಗಳ ಅಸಹಕಾರದ ಬಗ್ಗೆ ನೋವು ತೋಡಿಕೊಂಡಿದ್ದರು. ಅದರಲ್ಲೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್‌ವೈ ಕಾರ್ಯವೈಖರಿ ಹಾಗೂ ಪುತ್ರ ಬಿವೈ ವಿಜಯೇಂದ್ರ ಆಡಳಿತ ಹಸ್ತಕ್ಷೇಪದ ಬಗ್ಗೆ ಧ್ವನಿ ಎತ್ತಿದ್ದರು.

ಎಲ್ಲ ಶಾಸಕರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಲು ಅವಕಾಶ ಕೊಟ್ಟ ಬಿಎಸ್‌ವೈ ಕೊನೆಗೆ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ರಾಜ್ಯ ಆರ್ಥಿಕ ಸ್ಥಿತಿಗತಿ ಪರಿಗಣಿಸಿ ಸಮಸ್ಯೆಗೆ ಇತ್ಯರ್ಥಕ್ಕೆ ಆದ್ಯತೆ ನೀಡುವ ಭರವಸೆಯನ್ನು ನೀಡಿದ್ದಾರೆ.

ಮಂಗಳವಾರ ಕೂಡಾ ಶಾಸಕರು ಇದೇ ರೀತಿಯ ಸಮಸ್ಯೆಗಳನ್ನು ಬಿಎಸ್‌ವೈ ಮುಂದಿಡುವ ಸಾಧ್ಯತೆ ಇದೆ. ಇವೆಲ್ಲವನ್ನು ನಿಭಾಯಿಸುವುದು ಕೂಡಾ ಬಿಎಸ್‌ ಯಡಿಯೂರಪ್ಪ ಪಾಲಿಗೆ ಸವಾಲಿನ ಸಂಗತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ