ಆ್ಯಪ್ನಗರ

ಆಡ್ವಾಣಿ ಸ್ಥಿತಿಯ ಬರಬಾರದೆಂದು ವಾಮಮಾರ್ಗ ತುಳಿದ ಬಿಎಸ್‌ವೈ

ಬಿಜೆಪಿಯ ಹಿರಿಯ ನೇತಾರ ಎಲ್‌ಕೆಆಡ್ವಾಣಿ ಅವರನ್ನು ಮೂಲೆಗೆ ಕೂರಿಸಿದ ಸ್ಥಿತಿಯೇ ತಮಗೂ ಒದಗಿಬರುವ ಭೀತಿಯಿಂದ ಬಿಎಸ್‌...

Vijaya Karnataka 24 Jul 2019, 5:00 am
ಬೆಂಗಳೂರು: ಬಿಜೆಪಿಯ ಹಿರಿಯ ನೇತಾರ ಎಲ್‌.ಕೆ.ಆಡ್ವಾಣಿ ಅವರನ್ನು ಮೂಲೆಗೆ ಕೂರಿಸಿದ ಸ್ಥಿತಿಯೇ ತಮಗೂ ಒದಗಿಬರುವ ಭೀತಿಯಿಂದ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷಾಂತರಿಗಳನ್ನು ಬಳಸಿಕೊಂಡು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಬೇಲೂರು ಶಾಸಕ ಲಿಂಗೇಶ್‌ ವಿಧಾನಸಭೆಯಲ್ಲಿ ಮಂಗಳವಾರ ಟೀಕಿಸಿದರು.
Vijaya Karnataka Web K S LINGESH (JDS) BLR


ವಿಶ್ವಾಸಮತ ಪ್ರಸ್ತಾವನೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು ''ವಯಸ್ಸಾಗಿರುವ ಕಾರಣ ಮತ್ತೆ ಸಿಎಂ ಆಗುವ ಅವಕಾಶ ಸಿಗುವುದಿಲ್ಲ ಎಂಬ ಭೀತಿಯೇ ಯಡಿಯೂರಪ್ಪ ಅವರು ತಪ್ಪು ದಾರಿ ತುಳಿಯಲು ಕಾರಣ. ಇದರೊಂದಿಗೆ, ಸುದೀರ್ಘ ಹೋರಾಟದ ಮೂಲಕ ಯಡಿಯೂರಪ್ಪ ಅವರು ಸಂಪಾದಿಸಿದ್ದ ವ್ಯಕ್ತಿತ್ವ ಮತ್ತು ಗೌರವ ಮಣ್ಣುಪಾಲಾಗಿದೆ'' ಎಂದರು.

''ದೇಶಕ್ಕೆ ಆಡ್ವಾಣಿ ಅವರ ನೀತಿ, ಸಿದ್ಧಾಂತದ ಬಿಜೆಪಿ ಬೇಕೇ ಹೊರತು, ಅಮಿತ್‌ಶಾ ಬಿಜೆಪಿ ದೇಶಕ್ಕೆ, ಪ್ರಜಾತಂತ್ರಕ್ಕೆ ಮಾರಕ. ದೇಶದ ಹಲವು ಭಾಗಗಳಲ್ಲಿ ಅಧಿಕಾರ ಸಿಕ್ಕ ನಂತರವೂ ಪ್ರತಿಪಕ್ಷಗಳನ್ನೇ ಧೂಳಿಪಟ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆ. ಇಂತಹ ಪ್ರಜಾತಂತ್ರ ವಿರೋಧಿ ನಡೆಯನ್ನು ಬಿಜೆಪಿ ಕರ್ನಾಟಕಕ್ಕೂ ವಿಸ್ತರಣೆ ಮಾಡಿರುವುದು ಒಂದು ಕಪ್ಪು ಚುಕ್ಕೆ'' ಎಂದು ವಿಷಾದ ವ್ಯಕ್ತಪಡಿಸಿದರು.

ಸುಡುಗಾಡಲ್ಲಿ ಅಲೆದಾಡುವ ಸ್ಥಿತಿ: ಕೃಷ್ಣ ಬೈರೇಗೌಡ

ಸಚಿವ ಪದವಿಗೆ ಆಸೆ ಪಟ್ಟು, ಹಣದ ಆಮಿಷಕ್ಕೆ ಬಲಿಯಾಗಿ ನಂಬಿಕೆ ದ್ರೋಹ ಬಗೆದಿರುವ ಬಂಡಾಯ ಶಾಸಕರ ಪಾಲಿಗೆ ಸುಡುಗಾಡಿನಲ್ಲಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಹರಿಹಾಯ್ದರು.

ತಮಿಳುನಾಡು ವಿಧಾನಸಭೆ ಸ್ಪೀಕರ್‌ ತೀರ್ಪು ಹಾಗೂ ಶರದ್‌ ಯಾದವ್‌ ಪ್ರಕರಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ನಿರ್ಣಯವನ್ನು ಸದನದಲ್ಲಿ ಪ್ರಸ್ತಾಪಿಸಿದ ಅವರು ''ಬಂಡಾಯ ಶಾಸಕರು ನಂಬಿಕೆ ದ್ರೋಹಿಗಳು. ಅತಂತ್ರ ಸ್ಥಿತಿಯಲ್ಲಿ ಕೋರ್ಟ್‌ನಿಂದ ಕೋರ್ಟ್‌ಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ'' ಎಂದು ಹೇಳಿದರು.

ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವಂತೆ ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌ ಮತ್ತು ಬೈರತಿ ಬಸವರಾಜ್‌ ನನ್ನ ಮೇಲೆ ಒತ್ತಡ ತಂದು ನಿಲ್ಲಿಸಿದರು. ಆದರೆ, ಅವರ ಕ್ಷೇತ್ರಗಳಲ್ಲೇ 40 ರಿಂದ 45 ಸಾವಿರ ಮತಗಳು ನನಗೆ ಕಡಿಮೆಯಾದವು. ಚುನಾವಣೆಗೆ ನಿಲ್ಲಿಸಿ ನನ್ನನ್ನು ಸಾಲಗಾರನನ್ನಾಗಿ ಮಾಡಿದರು. ನಂಬಿದವರೇ ನಂಬಿಕೆ ದ್ರೋಹ ಬಗೆದರು'' ಎಂದು ಸದನದಲ್ಲಿ ಆಕ್ರೋಶ ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ