ಆ್ಯಪ್ನಗರ

ಸಂಪುಟ ಸಂಕಷ್ಟ: ದೆಹಲಿ ನಾಯಕರತ್ತ ಬಿಎಸ್‌ವೈ ಬೊಟ್ಟು!

ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಅತೃಪ್ತಿ ಅಸಮಾಧಾನ ಸ್ಫೋಟಗೊಳ್ಳಲು ಶುರುವಾಗಿದೆ. ಅದರೆ ಸಂಪುಟ ವಿಸ್ತರಣೆಯಲ್ಲಿ ನನ್ನ ಪಾತ್ರಕ್ಕಿಂತ ಹೈಕಮಾಂಡ್ ನಾಯಕರ ಪಾತ್ರ ಹೆಚ್ಚಿದೆ ಎನ್ನುವ ಸಂದೇಶವನ್ನು ಬಿಎಸ್‌ವೈ ರವಾನಿಸಲು ಮುಂದಾಗಿದ್ದಾರೆ.

Vijaya Karnataka Web 14 Jan 2021, 10:59 am
ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದಿರುವ ಭಿನ್ನಮತದ ಹಿನ್ನೆಲೆಯಲ್ಲಿ ತಳಮಳಕ್ಕೊಳಗಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಸದ್ಯದ ಪರಿಸ್ಥಿತಿಗೆ ಪರೋಕ್ಷವಾಗಿ ಹೈಕಮಾಂಡ್‌ನತ್ತ ಬೊಟ್ಟು ಮಾಡಿದ್ದಾರೆ.
Vijaya Karnataka Web BSY


ಸಂಪುಟ ವಿಸ್ತರಣೆಯ ಕುರಿತಾದ ನಿರ್ಧಾರದಲ್ಲಿ ನನ್ನ ಪಾತ್ರಕ್ಕಿಂತ ದೆಹಲಿ ನಾಯಕರ ಪಾತ್ರವೇ ಬಹುಮುಖ್ಯವಾಗಿದೆ, ತಪ್ಪು, ಸರಿ ಯಾವುದು ಎಂಬುವುದು ಅವರಿಗೆ ಗೊತ್ತು ಎನ್ನುವ ಮೂಲಕ ಪರೋಕ್ಷವಾಗಿ ದೆಹಲಿ ನಾಯಕರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್‌ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ ಬಿಎಸ್‌ವೈ ಆಪ್ತರು ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಡಗಿಗೆ ಮತ್ತೆ ನಿರಾಸೆ, ಸಚಿವ ಸಂಪುಟದಲ್ಲಿ ಸಿಗದ ಸ್ಥಾನಮಾನ: ಬಿಜೆಪಿಯಲ್ಲಿ ಅಸಮಾಧಾನ!

ಬಿಎಸ್‌ವೈ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಮುನಿರತ್ನ ಅವರಿಗೆ ಸಂಪುಟದಲ್ಲಿ ಸ್ಥಾನ ಕೈತಪ್ಪಿದೆ. ಹೈಕಮಾಂಡ್ ನಾಯಕರ ಮಧ್ಯಪ್ರವೇಶದಿಂದ ಇದಾಗಿದೆ ಎಂಬುವುದು ಬಿಎಸ್‌ವೈ ಆಪ್ತರ ವಾದವಾಗಿದೆ.

ಇಷ್ಟೇ ಅಲ್ಲದೆ ಸಂಪುಟದಲ್ಲಿ ಒಟ್ಟು ಐವರು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿರುವುದು ಕೂಡಾ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಗಳ ಆಕ್ರೋಶ ತೀವ್ರಗೊಳ್ಳುತ್ತಿದೆ. ಎಂಪಿ ರೇಣುಕಾಚಾರ್ಯ, ಸಿದ್ದು ಸವದಿ, ಸತೀಶ್ ರೆಡ್ಡಿ, ನೆಹರೂ ಓಲೆಕಾರ್, ಸೋಮಶೇಖರ್‌ ರೆಡ್ಡಿ, ಕರುಣಾಕರ್ ರೆಡ್ಡಿ ಸೇರಿದಂತೆ ಹಲವರು ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ಬೇಗುದಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಹೈಕಮಾಂಡ್‌ ನಿರ್ಧಾರ, ನಿಮ್ಮ ದೂರು, ಅಸಹನೆ ಏನೇ ಇದ್ದರೂ ಹೈಕಮಾಂಡ್‌ಗೆ ತಿಳಿಸಿ ಎನ್ನುವ ಮೂಲಕ ಬೀಸೋ ದೊಣ್ಣೆಯಿಂದ ಪಾರಾಗಲು ಯಡಿಯೂರಪ್ಪ ಯತ್ನಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ