ಆ್ಯಪ್ನಗರ

ಶಾಸಕರಿಗೆ ಸಂಕ್ರಾಂತಿಗೂ ಸಿಗಲ್ವಾ ಬೆಲ್ಲ ! ಸಚಿವಾಕಾಂಕ್ಷಿಗಳ ಮುಂದಿನ ನಡೆ ಏನು ?

ನೂತನ ಬಿಜೆಪಿ ಶಾಸಕರಿಗೆ ಸಂಕ್ರಾಂತಿಗೂ ಸಿಹಿ ಸುದ್ದಿ ಸಿಗುವ ಸಾಧ್ಯತೆ ಕಂಡುಬರುತ್ತಿಲ್ಲ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಸಿಎಂ ಬಿಎಸ್‌ ಯಡಿಯೂರಪ್ಪ ನೀಡಿದರೂ ಸಚಿವಾಕಾಂಕ್ಷಿಗಳು ಮಾತ್ರ ಆತಂಕದಲ್ಲಿದ್ದಾರೆ.

Vijaya Karnataka Web 13 Jan 2020, 6:50 pm
ಬೆಂಗಳೂರು: ಉಪಚುನಾವಣೆ ನಡೆದು ತಿಂಗಳು ಕಳೆದರೂ ನೂತನ ಬಿಜೆಪಿ ಶಾಸಕರಿಗೆ ಮಂತ್ರಿ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಸಿಎಂ ಬಿ.ಎಸ್‌ ಯಡಿಯೂರಪ್ಪ ನೀಡಿದ ಭರವಸೆ ಸಂಕ್ರಾಂತಿಗೂ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ವಲಸಿಗ ಬಿಜೆಪಿ ಶಾಸಕರ ಆತಂಕಕ್ಕೆ ಕಾರಣವಾಗಿದೆ.
Vijaya Karnataka Web cabinet expansion delay what is next step of new bjp mlas
ಶಾಸಕರಿಗೆ ಸಂಕ್ರಾಂತಿಗೂ ಸಿಗಲ್ವಾ ಬೆಲ್ಲ ! ಸಚಿವಾಕಾಂಕ್ಷಿಗಳ ಮುಂದಿನ ನಡೆ ಏನು ?


ಸಚಿವ ಸ್ಥಾನ ನೀಡುವ ದಿನಾಂಕ, ಗಡುವು ಪದೇ ಪದೇ ಮುಂದೂಡಲ್ಪಡುತ್ತಿದೆ. ಸಂಪುಟ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸಲು ಸಿಎಂ ಬಿಎಸ್‌ವೈಗೆ ಹೈಕಮಾಂಡ್ ಕೂಡಾ ಸಮಯ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳು ವಲಸೆ ಬಂದ ನೂತನ ಬಿಜೆಪಿ ಶಾಸಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ವಲಸಿಗ ಶಾಸಕರು ಸಿಎಂ ಬಿಎಸ್‌ವೈಗೆ ಒತ್ತಡ ಹೇರುತ್ತಿದ್ದಾರೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂಬ ಭರವಸೆಯನ್ನು ಬಿಎಸ್‌ವೈ ನೀಡಿದರೂ ವಲಸಿಗರಲ್ಲಿ ಅಸಮಧಾನ ಮೂಡುತ್ತಿದೆ. ಈ ನಡುವೆ ಗೆದ್ದ 11 ಶಾಸಕರ ಪೈಕಿ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ವಿಚಾರಗಳು ಕೇಳಿಬರುತ್ತಿರುವುದರಿಂದ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ ವಲಸಿಗರು.

ಸಂಕ್ರಾಂತಿಗೆ ಸಿಹಿ ಸುದ್ದಿ ನೀಡಿ : ಧವಳಗಿರಿ ಮೆಟ್ಟಲೇರುತ್ತಿರುವ ಸಚಿವಕಾಂಕ್ಷಿಗಳು

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ವೈ ಜೊತೆಗೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಹಾಗೂ ಮಹಾಲಕ್ಷ್ಮಿ ಲೇಔಟ್‌ ಶಾಸಕ ಗೋಪಾಲಯ್ಯ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದರು. ಸಂಪುಟ ವಿಸ್ತರಣೆ ಕುರಿತಾಗಿ ಉಂಟಾಗಿರುವ ಗೊಂದಲವನ್ನು ಶೀಘ್ರದಲ್ಲೇ ಬಗೆಹರಸಬೇಕು ಎಂದು ಒತ್ತಾಯಿಸಿದ್ದರು.

ಜನವರಿ 17 ರ ಒಳಗಾಗಿ ಸಂಪುಟ ವಿಸ್ತರಣೆ ಮಾಡಬೇಕು ಎಂದು ನೂತನ ಶಾಸಕರು ಸಿಎಂ ಬಳಿ ಪಟ್ಟು ಹಿಡಿದಿದ್ದರೂ ಹೈಕಮಾಂಡ್‌ನಿಂದ ಇನ್ನೂ ಒಪ್ಪಿಗೆ ದೊರಕಿಲ್ಲ. ಈ ನಡುವೆ ಸಂಪುಟ ಸೇರುವ ಕುರಿತಾಗಿ ಮೂಲ ಹಾಗೂ ವಲಸಿಗ ಶಾಸಕರ ನಡುವೆ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜೊತೆಗೆ ಸೋತ ವಲಸಿಗರೂ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿರುವುದರಿಂದ ಗೊಂದಲ ಮತ್ತಷ್ಟು ಜಟಿಲಗೊಂಡಿದೆ.

ಬಿಎಸ್‌ವೈಗೆ ಸಂಪುಟ ಸಂಕಟ: ಬೆಂಗಳೂರು, ಬೆಳಗಾವಿಗೇ ಸಿಂಹಪಾಲು! ಇಬ್ಬರು ಸಂಪುಟದಿಂದ ಔಟ್?

ಆದರೆ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಸಿಎಂ ಬಿಎಸ್‌ವೈ ನೀಡಿದ್ದು ಗೆದ್ದ ಶಾಸಕರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಸಮಯ ನೀಡಿಲ್ಲ ಎಂಬ ಸುದ್ದಿ ಊಹಾಪೋಹ ಎಂದು ನಿರಾಕರಿಸಿದ ಅವರು ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಹೈ ಕಮಾಂಡ್ ಜೊತೆಗೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.

ಒಂದು ವೇಳೆ ಈ ಬಾರಿಯೂ ಸಂಪುಟ ವಿಸ್ತರಣೆ ವಿಳಂಬವಾದರೆ ನೂತನ ಬಿಜೆಪಿ ಶಾಸಕರು ಮುಂದಿನ ನಡೆ ಏನು ಎಂಬುವುದು ಕುತೂಹಲ ಕೆರಳಿಸಿದೆ. ಅನಿವಾರ್ಯವಾಗಿ ಕಾದುನೋಡುವ ತಂತ್ರಕ್ಕೆ ವಲಸಿಗರು ಮೊರೆ ಹೋಗುತ್ತಾರಾ ಅಥವಾ ಕಾಂಗ್ರೆಸ್‌ನಂತೆ ಕಮಲದಲ್ಲೂ ರೆಬೆಲ್ ಆಗ್ತಾರಾ ಎಂಬುವುದು ಸದ್ಯದ ಪ್ರಶ್ನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ